ಕೆರೆ ಹೂಳು ತೆಗೆದು, ಮರುಜೀವ ಕೊಟ್ಟು ಮಾದರಿಯಾದ ಗ್ರಾಮಸ್ಥರು
ಶಿವಮೊಗ್ಗ, ಮೇ 27 : ಸರ್ಕಾರದ ನೆರವು ಇಲ್ಲದೇ ಗ್ರಾಮಸ್ಥರೇ ಸೇರಿ ಮೂರು ಪುರಾತನ ಕೆರೆಗಳ ಹೂಳು ತೆಗೆದು ಮರುಜೀವ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮುತ್ತಲ ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಮಾದರಿಯಾಗಿದ್ದಾರೆ.
Recommended Video
ಸಾರಾ ಎಂಬ ಸಂಸ್ಥೆಯ ಮಾರ್ಗದರ್ಶನದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೆರೆಗಳ ಪುನರುಜ್ಜೀವನ ಕಾರ್ಯ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಸುಮಾರು 82 ಮನೆಗಳಿದ್ದು, ಎಲ್ಲರೂ ಕೃಷಿಯನ್ನು ಅವಲಂಬಿಸಿದ್ದಾರೆ. ಕೆರೆ ಹೂಳು ತೆಗೆದಿದ್ದರಿಂದ ಗ್ರಾಮದಲ್ಲಿನ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಕಟ್ಟುತ್ತಿರುವ ಮಹಿಳೆಯರು
ಗ್ರಾಮಸ್ಥರು ಕೃಷಿ ಚಟುವಟಿಕೆಗೆ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ನಿರ್ಣಯವನ್ನು ಕೈಗೊಂಡರು. ಬಳಿಕ ಗ್ರಾಮದಲ್ಲಿನ ಮೂರು ಪುರಾತನ ಕೆರೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಯಿತು. ಮಾಕೋಡು ಕೆರೆ ಅಭಿವೃದ್ಧಿಯನ್ನು ಸರ್ಕಾರದ ನೆರವಿಗಾಗಿ ಕಾಯದೇ, ಗ್ರಾಮಸ್ಥರೇ ಆರಂಭಿಸಿದರು.
ಮೈದುಂಬಿದ ಬಾಗಲೂರು ಕೆರೆ; ಕಣ್ಮನ ಸೆಳೆಯುವ ಚಿತ್ರಗಳು
ಬುಧವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವರಾದ ಕೆ. ಎಸ್. ಈಶ್ವರಪ್ಪ ಮುತ್ತಲ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಜನರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ವಿಷವಾಗಿ ಕಾಡುತ್ತಿದೆ ಹತ್ತು ವರ್ಷದ ನಂತರ ತುಂಬಿದ ಆರದವಳ್ಳಿ ಕೆರೆ
ಎಲ್ಲವೂ ಗ್ರಾಮಸ್ಥರ ಸಹಕಾರ
ಸ್ವಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ ಗ್ರಾಮಸ್ಥರ ಸಹಕಾರದ ಕುರಿತು ಮಾತನಾಡಿದ್ದಾರೆ. "ಗ್ರಾಮಸ್ಥರು ಮೊದಲು ಕೆರೆ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿದೆವು. ಸಾರಾ ಎಂಬ ಸರ್ಕಾರೇತರ ಸಂಸ್ಥೆಯ ನೆರವು ಸಿಕ್ಕಿತು. ಅವರು ಜೆಸಿಬಿಯನ್ನು ಒದಗಿಸಿದರು. ಊರಿನ ಪ್ರತಿಯೊಂದು ಮನೆಯವರ ತನು, ಮನ, ಧನ ಸಹಕಾರದೊಂದಿಗೆ ಕೆರೆಯ ಹೂಳನ್ನು ತೆಗೆದು ಅಚ್ಚುಕಟ್ಟಾಗಿ ಕೆರೆಗೆ ಮರು ಜೀವ ನೀಡಲು ಸಾಧ್ಯವಾಗಿದೆ" ಎಂದರು.
ಶೇ 60ರಷ್ಟು ಕೆಲಸ ಮುಗಿದಿದೆ
ಗ್ರಾಮಸ್ಥರ ಪ್ರಯತ್ನದಿಂದ ಮೊದಲ ಕೆರೆ ಅಭಿವೃದ್ಧಿಯಾದ ಬಳಿಕ ಊರಿನ ಇನ್ನೊಂದು ಹಳೆಯ ಕೆರೆಯಾದ ವರ್ತೆ ಕೆರೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಈಗ ಶೇ.60ರಷ್ಟು ಕೆಲಸ ಮುಗಿದಿದೆ. ಇನ್ನೊಂದು ವಾರದಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಸುಮಾರು 60 ಎಕರೆ ಜಮೀನಿಗೆ ನೀರು ಪೂರೈಕೆ ಸಾಧ್ಯವಾಗಲಿದೆ.
ಕೆರೆ ಅಭಿವೃದ್ಧಿಗೆ ಎಷ್ಟು ವೆಚ್ಚ
ಮಾಕೋಡು ಕೆರೆ ಅಭಿವೃದ್ಧಿಗೆ 2.40 ಲಕ್ಷ ರೂ. ವೆಚ್ಚವಾಗಿದೆ. ವರ್ತೆ ಕೆರೆ ಅಭಿವೃದ್ಧಿಗೆ 3.80 ಲಕ್ಷ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.ಇನ್ನೊಂದು ಕೆರೆ ಅಭಿವೃದ್ಧಿ ಕಾರ್ಯವನ್ನು ಮಳೆಗಾಲ ಮುಗಿದ ಬಳಿಕ ಮಾಡಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಗ್ರಾಮದಲ್ಲಿ ಇನ್ನೊಂದು ಇಂಗು ಗುಂಡಿ ಕಾಮಗಾರಿಯನ್ನು ಸಹ ಆರಂಭಿಸಲಾಗಿದೆ.
ಸಚಿವರ ಮೆಚ್ಚುಗೆ
ಬುಧವಾರ ಸಚಿವ ಕೆ. ಎಸ್. ಈಶ್ವರಪ್ಪ ಮುತ್ತಲ ಗ್ರಾಮಕ್ಕೆ ಭೇಟಿ ನೀಡಿದರು. ಗ್ರಾಮಸ್ಥರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಅಂತರ್ಜಲ ಚೇತನ ಯೋಜನೆಯಡಿ ಜಿಲ್ಲೆಯಾದ್ಯಂತ ಕೆರೆಗಳ ಪುನಶ್ಚೇತನ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.