ಕೊರೊನಾ ಎಫೆಕ್ಟ್: ಔಷಧಿ ನಿಲ್ಲಿಸಿದ ನರಸೀಪುರದ ನಾರಾಯಣಮೂರ್ತಿ
ಶಿವಮೊಗ್ಗ, ಮಾರ್ಚ್ 08: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಾಟಿ ವೈದ್ಯ ಪದ್ಧತಿ ಮೂಲಕ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ನರಸೀಪುರದ ನಾರಾಯಣ ಮೂರ್ತಿ ಅವರು ಔಷಧ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಔಷಧಕ್ಕಾಗಿ ವಾರದಲ್ಲಿ ಮೂರು ದಿನ ನರಸೀಪುರಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಹತ್ತು ಸಾವಿರಕ್ಕೂ ಹೆಚ್ಚು ಜನ ಒಂದೆಡೆ ಸೇರುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯಿಂದ ತಾತ್ಕಾಲಿಕವಾಗಿ ಔಷಧ ಕೊಡುವುದನ್ನು ನಿಲ್ಲಿಸುವಂತೆ ನಾರಾಯಣಮೂರ್ತಿ ಅವರಿಗೆ ಸೂಚನೆ ನೀಡಲಾಗಿದೆ.
ಕರ್ನಾಟಕ ಬಜೆಟ್ 2020; ತವರು ಜಿಲ್ಲೆ ಶಿವಮೊಗ್ಗಕ್ಕೆ ಬಿಎಸ್ವೈ ಕೊಡುಗೆ
ನಾರಾಯಣ ಮೂರ್ತಿ ಅವರು ಔಷಧ ಕೊಡುವುದನ್ನು ನಿಲ್ಲಿಸಿದರೂ ಕೆಲ ಖಾಸಗಿ ವ್ಯಕ್ತಿಗಳು ನಾರಾಯಣಮೂರ್ತಿ ಹೆಸರಿನಲ್ಲಿ ನಕಲಿ ಔಷಧ ವಿತರಣೆ ಮಾಡುತ್ತಿದ್ದಾರೆ. ವಿಷಯ ತಿಳಿದ ಸ್ಥಳೀಯರಿಂದ ನಕಲಿ ಔಷಧ ಮಾರುತ್ತಿದ್ದವರ ಮೇಲೆ ದಾಳಿ ನಡೆಸಲಾಗಿದೆ.
ನಕಲಿ ಔಷಧ ಮಾರಟಗಾರರ ವಿರುದ್ದ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೊರ ರಾಜ್ಯದಿಂದ ಔಷಧಕ್ಕಾಗಿ ನರಸೀಪುರಕ್ಕೆ ಬಂದಿದ್ದ ವಾಹನಗಳಿಗೆ ದಿಗ್ಭಂಧನ ಹಾಕಲಾಯಿತು.
ಕೊರೊನಾ ಎಫೆಕ್ಟ್: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್!
ನರಸೀಪುರದಲ್ಲಿ ಹೆಚ್ಚು ಜನ ಸೇರುತ್ತಿರುವುದರಿಂದ ಸ್ವಚ್ಛತೆ ಇಲ್ಲದಂತಾಗಿದ್ದು, ಜನ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಾರಾಯಣಮೂರ್ತಿ ಅವರು ಔಷಧ ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ನಕಲಿ ಔಷಧ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ನಾರಾಯಣಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.