ತಮ್ಮ ಜಮೀನಿನಲ್ಲಿ ರೈತ ಬೆಳೆ app ಸಮೀಕ್ಷೆ ಪ್ರಾತ್ಯಕ್ಷಿಕೆ ನಡೆಸಿದ ಬಿ.ಸಿ.ಪಾಟೀಲ್
ಶಿವಮೊಗ್ಗ, ಆಗಸ್ಟ್ 24: ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಸೊರಬ ತಾಲೂಕಿನ ಯಲವಾಳ ಗ್ರಾಮದ ತಮ್ಮ ಜಮೀನಿನಲ್ಲಿ ರೈತ ಬೆಳೆ ಸಮೀಕ್ಷೆ app ಪ್ರಾತ್ಯಕ್ಷಿಕೆ ನಡೆಸಿದರು.
ಜಮೀನಿನಲ್ಲಿ ನಿಂತು ಬೆಳೆ ವಿವರ, ಸರ್ವೆ ನಂಬರ್ ಸೇರಿದಂತೆ ಜಮೀನಿನಲ್ಲಿನ ತಮ್ಮ ಭಾವಚಿತ್ರವನ್ನು appನಲ್ಲಿ ಅಪ್ಲೋಡ್ ಮಾಡಿದರು. ಈ ಸಂದರ್ಭ ಮಾತನಾಡಿದ ಬಿ.ಸಿ.ಪಾಟೀಲರು, ರೈತನ ಬೆಳೆ ರೈತನ ಹಕ್ಕು. ಇದೇ ದೇಶದಲ್ಲಿ ಮೊದಲ ಬಾರಿಗೆ ರೈತನೇ ಸ್ವತಃ ತನ್ನ ಹೊಲದ ಸಮೀಕ್ಷೆ ನಡೆಸಿ ತಾನೇ ಪ್ರಮಾಣ ಪತ್ರ ನೀಡುವಂತಹ ಮಹತ್ವದ app ಪರಿಚಯಿಸಲಾಗಿದೆ. ರೈತರು ಈ app ಸಮೀಕ್ಷೆ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂದರು.
"ಬೆಳೆ ಸಮೀಕ್ಷೆಯಲ್ಲಿ ರೈತರೇ ಬೆಳೆ ಮಾಹಿತಿ ಅಪ್ಲೋಡ್ ಮಾಡಲು ಅವಕಾಶ''
ಈ ಬಾರಿಯ ರೈತ ಬೆಳೆ ಸಮೀಕ್ಷೆ ರೈತರ ಬೆಳೆಯ ಉತ್ಸವವೇ ಆಗಿದೆ. ಸಮೀಕ್ಷೆಗೆ ದೊರೆತಿರುವ ಅಭೂತಪೂರ್ವ ಸ್ಪಂದನೆ ಕಂಡು ಆಗಸ್ಟ್ 24 ರವರೆಗೆ ನಿಗದಿಗೊಳಿಸಲಾಗಿದ್ದ ರೈತ ಬೆಳೆ app ಸಮೀಕ್ಷೆಯ ಅವಧಿಯನ್ನು ಇನ್ನು ಸ್ವಲ್ಪ ದಿನಗಳ ಕಾಲ ವಿಸ್ತರಿಸಲಾಗಿದೆ.
ಕೇಂದ್ರ ಸರ್ಕಾರ ಸಹ ರಾಜ್ಯದ ಈ ಕ್ರಾಂತಿಕಾರಕ ಹಾಗೂ ರೈತೋಪಯೋಗಿ app ಸಮೀಕ್ಷೆಯಿಂದ ಪ್ರೇರಿತಗೊಂಡಿದ್ದು, ದೇಶದ ಇತರೆ ಜಿಲ್ಲೆಗಳಲ್ಲಿಯೂ ಜಾರಿಗೊಳಿಸಲು ಮುಂದಾಗಿದೆ ಎಂದರು.