ಕರ್ನಾಟಕದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆಯಲ್ಲ
ಶಿವಮೊಗ್ಗ, ಮೇ23: ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಬಿರುದು ಪಡೆದುಕೊಂಡಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಉಡುಪಿ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿ ಗುರುತಿಸಿಕೊಂಡಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಎಸ್ಡಿಎಂಎ) ಪ್ರಕಾರ 2015 ಮತ್ತು 2021ರ ನಡುವಿನ ಏಳು ವರ್ಷಗಳಲ್ಲಿ 5 ಬಾರಿ ಉಡುಪಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹೆಚ್ಚು ಮಳೆ ಪ್ರಮಾಣ ದಾಖಲಾಗಿದೆ.
ಈ ರಾಜ್ಯಗಳಲ್ಲಿ ಇನ್ನೂ ಎರಡು ದಿನ ಮಳೆ ಮುನ್ಸೂಚನೆ
ಅಂಕಿ-ಅಂಶಗಳ ಪ್ರಕಾರ ಉಡುಪಿ ಜಿಲ್ಲೆಯ ಬೈರಂಪಳ್ಳಿಯಲ್ಲಿ 2016ರಲ್ಲಿ ಅತಿ ಹೆಚ್ಚು ಅಂದರೆ 5,916 ಮಿ. ಮೀ. ಪ್ರಮಾಣದ ಮಳೆ ದಾಖಲಾಗಿದೆ. 2017ರಲ್ಲಿ ಕಾರ್ಕಳ ತಾಲೂಕಿನ ಶಿರಾಳುವಿನಲ್ಲಿ 6,936 ಮಿ. ಮೀ. ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 2016ರಲ್ಲಿ 5,524 ಮಿ.ಮೀ. ಮತ್ತು 2017ರಲ್ಲಿ 5,345 ಮಿ.ಮೀ. ಮಳೆಯೊಂದಿಗೆ ಅಗ್ರಸ್ಥಾನ ಪಡೆದಿತ್ತು.
ಆದರೆ 2019ರಲ್ಲಿ ಉಡುಪಿಯ ಹೆಬ್ರಿಯ ದಾಖಲೆ ಪ್ರಮಾಣದ 9,340 ಮಿ. ಮೀ. ಮಳೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 2020ರಲ್ಲಿ ಇನ್ನಂಜೆಯಲ್ಲಿ 7,988 ಮಿ. ಮೀ. ಮಳೆ ಪ್ರಮಾಣ ದಾಖಲಾಗುವ ಮೂಲಕ ಅಗ್ರಸ್ಥಾನ ಪಡೆದಿದೆ. ಈ ವರ್ಷಗಳಲ್ಲೂ ಆಗುಂಬೆಯಲ್ಲಿ ಬಿದ್ದ ಮಳೆ ಪ್ರಮಾಣ ಕಡಿಮೆಯಾಗಿತ್ತು. 2015 ರಿಂದ 2021ರ ನಡುವೆ ಕಳೆದ 7 ವರ್ಷಗಳಲ್ಲಿ ಆಗುಂಬೆಗಿಂತ ಹುಲಿಕಲ್ನಲ್ಲಿ ಹೆಚ್ಚು ಮಳೆಯಾಗಿದೆ.
ರಾಜ್ಯದಲ್ಲಿ ಮುಂದುವರಿದ ಧಾರಾಕಾರ ಮಳೆ: ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ
ಕಡಿಮೆ ಮಳೆಗೆ ಕಾರಣ; ಹವಾಮಾನ ಬದಲಾವಣೆಯೆ ಇದಕ್ಕೆ ಕಾರಣ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ. ವಿ. ರಾಮಚಂದ್ರ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅರಣ್ಯ ನಾಶ ಮತ್ತು ಒಂದೇ ಬೆಳೆಯ ಕೃಷಿ ತೋಟಗಳು ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
"ಪಶ್ಚಿಮಘಟ್ಟ ಪ್ರದೇಶಗಳಲ್ಲಿ ನಾವು ನಡೆಸಿದ ಅಧ್ಯಯನಗಳ ಪ್ರಕಾರ, ಅಲ್ಲಿನ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುತ್ತದೆ ಮತ್ತು ಕೆಲವು ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮಳೆ ದಾಖಲಾಗುತ್ತದೆ" ಎಂದು ಹೇಳಿದರು.
ರಾಜ್ಯದಲ್ಲಿ ಹೆಚ್ಚಾಗಿದೆ ಅರಣ್ಯನಾಶ; "ಕರ್ನಾಟಕ ಭೂಗೋಳಕ್ಕನುಗುಣವಾಗಿ ಶೇ.33 ಅರಣ್ಯ ಪ್ರದೇಶ ಇರಬೇಕಿತ್ತು, ಆದರೆ ಈಗ ರಾಜ್ಯ ಕೇವಲ ಶೇ.20ರಷ್ಟು ಭೂ ಪ್ರದೇಶದಲ್ಲಿ ಮಾತ್ರ ಅರಣ್ಯವನ್ನು ಹೊಂದಿದೆ. ಕಳೆದ ಹತ್ತು ವರ್ಷಗಳಲ್ಲಿ ವಿವಿಧ ಕಾರಣಗಳಿಂದಾಗಿ ಶೇ.10 ರಷ್ಟು ಅರಣ್ಯವನ್ನು ನಾಶ ಮಾಡಲಾಗಿದೆ" ಎಂದು ಹೇಳಿರುವ ರಾಮಚಂದ್ರ, "ಮುಂದಿನ ದಿನಗಳಲ್ಲಿ ಅಕಾಲಿಕ ಮಳೆ ಮತ್ತು ನೀರಿನ ಸಮಸ್ಯೆ ಎದುರಾಗಬಹುದು" ಎಂದು ಎಚ್ಚರಿಕೆ ನೀಡಿದರು.
ಹವಾಮಾನ ತಜ್ಞ, ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಸದಸ್ಯ, ಬಿ. ಎಂ. ಕುಮಾರಸ್ವಾಮಿ ಮಾತನಾಡಿ, "ಇತ್ತೀಚಿನ ವರ್ಷಗಳಲ್ಲಿ ಮಳೆ ಅನಿಯಮಿತವಾಗಿದೆ. ಹವಾಮಾನ ಬದಲಾವಣೆಯಿಂಲೇ ಈ ರೀತಿ ವೈಪರೀತ್ಯ ಎದುರಾಗಿದೆ" ಎಂದು ಹೇಳಿದರು.
"ಅರಣ್ಯನಾಶ, ಜಾಗತಿಕ ತಾಪಮಾನ ಮತ್ತು ಇಂಗಾಲ ಹೊರಸೂಸುವಿಕೆ ಅನೇಕ ಪರಿಸರ ನಾಶಕ ಅಂಶಗಳು ಇಂದಿನ ಪರಿಸ್ಥಿತಿಗೆ ಕಾರಣಗಳಾಗಿದೆ. ರಾಜ್ಯದಲ್ಲಿ 2021ರ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಶೇ.60 ಹೆಚ್ಚುವರಿ ಮಳೆ ದಾಖಲಾಗಿದೆ. ಮಳೆಯ ಸ್ವರೂಪವೇ ಸಂಪೂರ್ಣ ಬದಲಾಗಿದೆ" ಎಂದು ಹೇಳಿದರು.
Recommended Video