ಹಿಮಾಲಯ ಏರುವ ವಿದ್ಯಾರ್ಥಿಗಳ ಕನಸಿಗೆ ರೆಕ್ಕೆ ಕಟ್ಟಿದ ಸರ್ಕಾರ
ಶಿವಮೊಗ್ಗ, ನವೆಂಬರ್ 23: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳ ಶೈಕ್ಷಣಿಕ ಪ್ರವಾಸ ಹೋಗುವುದಕ್ಕೇ ಕೆಲವೊಮ್ಮೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಹೀಗಿದ್ದ ಪಕ್ಷದಲ್ಲಿ ಹಿಮಾಲಯ ಏರುವ ಕನಸು ಕಾಣುವುದೂ ಕಷ್ಟಸಾಧ್ಯ. ಆದರೆ ಈ ವಿದ್ಯಾರ್ಥಿಗಳ ಆಸೆ, ಆಸಕ್ತಿಗಳಿಗೆ ನೀರೆರೆಯಲು ಸರ್ಕಾರ ಮುಂದಾಗಿದೆ.
ಹಿಮಾಲಯ ಏರಬೇಕೆಂಬ ಕನಸು ಹೊತ್ತ ಬಡ ವಿದ್ಯಾರ್ಥಿಗಳಿಗೆ ಸರ್ಕಾರ ಪರ್ವತಾರೋಹಣಕ್ಕೆ ಉಚಿತ ಸೌಲಭ್ಯವನ್ನು ಕಲ್ಪಿಸಿದೆ. ಬಡ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಈ ಒಂದು ಅವಕಾಶ ನೀಡಲಾಗಿದೆ.
ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳ ಆಯ್ಕೆ
ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಿಮಾಲಯ ಪರ್ವತಾರೋಹಣ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯ 2 ಪದವಿ ವಿದ್ಯಾರ್ಥಿಗಳು ಆಯ್ಕೆಯಾಗಿ, ಶಿಬಿರದಲ್ಲಿ ಭಾಗವಹಿಸಿ ಅದರ ಅನುಭವವನ್ನು ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಈ ವರ್ಷ 60 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಈ ತಂಡದಲ್ಲಿ 21 ಯುವತಿಯರು, 39 ಯುವಕರು ಇದ್ದರು.
ಜ್ವಾಲಾಮುಖಿ ಪರ್ವತದಲ್ಲಿ ಸ್ಕೀಯಿಂಗ್ ಕಲಿತ ಗಟ್ಟಿಗಿತ್ತಿ ಈ ಕೊಡಗಿನ ಕುವರಿ
ಆಯ್ಕೆ ಪ್ರಕ್ರಿಯೆ ಹೇಗೆ?
ಕರ್ನಾಟಕ ರಾಜ್ಯದಿಂದ ಜನರಲ್ ತಿಮ್ಮಯ್ಯ ಅಕಾಡೆಮಿ ವತಿಯಿಂದ ಪ್ರತಿವರ್ಷ ಪರ್ವತಾರೋಹಣಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದೆಹಲಿಯ ಇಂಡಿಯನ್ ಮೌಂಟ್ ಫೌಂಡೇಶನ್ ಗೆ ಕಳುಹಿಸಲಾಗುತ್ತದೆ. ದೇಶದಲ್ಲಿ ಒಟ್ಟು 5 ಪರ್ವತಾರೋಹಣ ಸಂಸ್ಥೆಗಳಿದ್ದು, ಅದರ ಮೂಲಕ ಶಿಬಿರಾರ್ಥಿಗಳನ್ನು ಹಿಮಾಲಯಕ್ಕೆ ಕಳುಹಿಸುವ ತೀರ್ಮಾನ ಕೈಗೊಳ್ಳಲಾಗುತ್ತದೆ. ಪ್ರತಿಯೊಬ್ಬ ಅಭ್ಯರ್ಥಿಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ಭರಿಸುತ್ತದೆ.
ಯಾವ ಯಾವ ಸ್ಥಳಗಳ ಭೇಟಿ?
ಸದ್ಯಕ್ಕೆ ಈ ಪರೀಕ್ಷೆಯಲ್ಲಿ ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಇಬ್ಬರೂ ಶಿಕಾರಿಪುರ ತಾಲೂಕಿನವರೇ ಆಗಿದ್ದಾರೆ. ರಾಹುಲ್ ಬಿ.ಆರ್ ಬಳ್ಳೂರು, ಸಂತೋಷ್ ನಾಯ್ಕ್ ಮುಳಕೊಪ್ಪ ಪದವಿ ವಿದ್ಯಾರ್ಥಿಗಳಾಗಿದ್ದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದೆಹಲಿಯ ಐಎಂಎಫ್ ಸಂಸ್ಥೆಯಿಂದ ಜಮ್ಮು, ಕಾಶ್ಮೀರ್, ಲಡಾಖ್, ಲೇ, ಕಾರ್ಗಿಲ್ ಯುದ್ಧಭೂಮಿ, ಜೋಜಿಲಾ ಪಾಸ್, ಸಿಯಾಚಿನ್ ಗಡಿ ಇವೆಲ್ಲಾ ಸ್ಥಳಗಳಿಗೂ ಭೇಟಿ ನೀಡಲಾಗುತ್ತದೆ. ತಂಡದ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲು ನುರಿತ ಶಿಕ್ಷಕರಿರುತ್ತಾರೆ.
ಮನುಜನನ್ನು ಕುಬ್ಜನನ್ನಾಗಿಸುವ ಸಾಗರದಾಳದ ಅನೂಹ್ಯ ಜಗತ್ತು
ಶಿಬಿರದಿಂದ ದೇಶಪ್ರೇಮ ಬಿತ್ತುವ ಕೆಲಸ
ಎಷ್ಟೋ ವಿದ್ಯಾರ್ಥಿಗಳಲ್ಲಿ ಹಿಮಾಲಯ ಏರುವ ಕನಸಿರುತ್ತದೆ. ಆದರೆ ಬಡತನ ಈ ಆಸೆಗೆ ಅಡ್ಡಿಯಾಗಿರುತ್ತದೆ. ಹೀಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಧೈರ್ಯ ಸ್ಥೈರ್ಯದ ಪ್ರವೃತ್ತಿಯನ್ನೂ ಈ ಪರ್ವತಾರೋಹಣ ಬೆಳೆಸಲಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ಹೇಗೆ ರಕ್ಷಿಸಬೇಕು ಎಂಬುದರ ಅರಿವನ್ನು ಶಿಬಿರದಲ್ಲಿ ನೀಡಲಾಗುತ್ತದೆ. ಹಿಮಾಲಯದಲ್ಲಿ ಸೈನಿಕರ ಕಷ್ಟ, ಪರಿಶ್ರಮದ ಕುರಿತು ಪ್ರಾಯೋಗಿಕವಾಗಿ ತಿಳಿಸುವ ಮೂಲಕ ದೇಶಪ್ರೇಮವನ್ನು ಬಿತ್ತುವ ಕೆಲಸವನ್ನೂ ಶಿಬಿರ ಮಾಡುತ್ತಿದೆ.