ಶಿವಮೊಗ್ಗ; ಜಂಬೂ ಸವಾರಿಗೆ 2 ಆನೆ, ತಾಲೀಮು ಇಲ್ಲದೆ ಅಖಾಡಕ್ಕೆ
ಶಿವಮೊಗ್ಗ, ಅಕ್ಟೋಬರ್ 12; ಶ್ರೀರಂಗಪಟ್ಟಣದ ದಸರಾ ಮೆರವಣಿಗೆಯಲ್ಲಿ ಗೋಪಾಲಸ್ವಾಮಿ ಎಂಬ ಆನೆ ಗಾಬರಿಯಾಗಿತ್ತು. ಪಟಾಕಿ ಶಬ್ದದಿಂದ ವಿಚಲಿತವಾದ ಗೋಪಾಲಸ್ವಾಮಿ ಆನೆ ಅಂಬಾರಿಯೊಂದಿಗೆ ತಿರುಗಿ ನಿಂತಿತ್ತು. ಇದರಿಂದ ಕೆಲಕ್ಷಣ ಗೊಂದಲ ಮತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.
2016ರಲ್ಲಿ ಶಿವಮೊಗ್ಗದಲ್ಲಿ ಅಂಬಾರಿ ಹೊತ್ತು ನಿಲ್ಲುತ್ತಿದ್ದಂತೆ ಸಾಗರ ಆನೆಯ ಆರೋಗ್ಯದಲ್ಲಿ ವ್ಯತ್ಯಾಸವಾಯಿತು. ಬಳಿಕ ಆನೆ ಬದಲು ಲಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ಇರುವ ಅಂಬಾರಿಯ ಮೆರವಣಿಗೆ ನಡೆಸಲಾಯಿತು.
ಜನರ ದುಡ್ಡಲ್ಲಿ ಶಿವಮೊಗ್ಗ ದಸರಾ; ಪಾಲಿಕೆ ಸದಸ್ಯರು, ಅಧಿಕಾರಿಗಳಿಗೆ ಮಾತ್ರ ಕಾರ್ಯಕ್ರಮ?
ಈ ಬಾರಿಯೂ ಶಿವಮೊಗ್ಗದಲ್ಲಿ ಜಂಬೂ ಸವಾರಿ ನಡೆಯಲಿದೆ. ಸಕ್ರೆಬೈಲು ಬಿಡಾರದ ಸಾಗರ ಮತ್ತು ಭಾನುಮತಿ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ. ಮೇಲಿನ ಎರಡು ಘಟನೆಗಳ ಬಗ್ಗೆ ಗೊತ್ತಿದ್ದರೂ, ಶಿವಮೊಗ್ಗ ಪಾಲಿಕೆ ತಾಲೀಮು ನಡೆಸದೆ ಈ ಆನೆಗಳನ್ನು ಆಖಾಡಕ್ಕೆ ಇಳಿಸುತ್ತಿದೆ.
9 ದಿನಗಳ ಶಿವಮೊಗ್ಗ ದಸರಾ 2021ಕ್ಕೆ ವೈಭವದ ಚಾಲನೆ
ಮೈಸೂರು ದಸರಾ ಜಗದ್ವಿಖ್ಯಾತಿ ಗಳಿಸಿದೆ. ಜಂಬೂ ಸವಾರಿ ಕಣ್ತುಂಬಿಕೊಳ್ಳಲು ದೇಶ, ವಿದೇಶದ ಜನರು ಬರುತ್ತಾರೆ. ಜಂಬೂ ಸವಾರಿ ಸಂದರ್ಭ ಆನೆಗಳು ವಿಚಲಿತವಾಗಬಾರದು, ಗಾಬರಿಗೊಳ್ಳಬಾರದು ಎಂಬ ಕಾರಣಕ್ಕೆ ವಾರಗಟ್ಟಲೆ ಜಂಬೂ ಸವಾರಿಯ ತಾಲೀಮು ನಡೆಸಲಾಗುತ್ತದೆ. ಸಿಡಿಮದ್ದು ಸಿಡಿಸಿ ಆನೆಗಳಲ್ಲಿ ಭಯ ಹೋಗಲಾಡಿಸಲಾಗುತ್ತದೆ. ಆದರೆ ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಈ ತನಕ ತಾಲೀಮು ಆಗಿಲ್ಲ.
ಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯ
ದಸರಾ ಎಲ್ಲವೂ ಲೇಟ್ ಲೇಟ್
ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಸಕ್ರೆಬೈಲು ಬಿಡಾರದಿಂದ ಆನೆಗಳು ಬರುತ್ತವೆ. ಪ್ರತಿ ಬಾರಿ ಬಿಡಾರದ ಅತ್ಯಂತ ಸೌಮ್ಯ ಸ್ವಭಾವದ 'ಸಾಗರ' ಆನೆಯು ನಾಡದೇವಿ ಚಾಮುಂಡೇಶ್ವರಿ ಮೂರ್ತಿ ಮತ್ತು ಅಂಬಾರಿಯನ್ನು ಹೊರುತ್ತಿದೆ. ಈ ಬಾರಿಯು 'ಸಾಗರ' ಆನೆಯೇ ಅಂಬಾರಿ ಹೊರಲಿದೆ. 'ಭಾನುಮತಿ' ಆನೆಯು ಪಾಲ್ಗೊಳ್ಳಲಿದೆ. ಕಡೆ ಕ್ಷಣದಲ್ಲಿ ಸರ್ಕಾರದಿಂದ ಅನುಮತಿ ದೊರೆತ ಹಿನ್ನೆಲೆ ಆನೆಗಳು ಶಿವಮೊಗ್ಗಕ್ಕೆ ಬರಲು ಸಜ್ಜಾಗಿವೆ.
ನಿತ್ಯ ಒಂದಿಲ್ಲೊಂದು ಗೊಂದಲ
ಶಿವಮೊಗ್ಗದ ಮಟ್ಟಿಗೆ ಆರಂಭದಿಂದಲೂ ಒಂದಿಲ್ಲೊಂದು ಗೊಂದಲಗಳ ನಡುವೆಯೇ ದಸರಾ ಸಾಗಿಕೊಂಡು ಬರುತ್ತಿದೆ. ಇನ್ನೇನು ಹಬ್ಬ ಒಂದು ವಾರವಿದೆ ಎನ್ನುವಾಗ ಆನೆಗಳನ್ನು ಕಳುಹಿಸುವಂತೆ ಕೋರಲಾಗುತ್ತದೆ. ಅದು ಸರಕಾರದ ಹಂತದಿಂದ ದಾಟಿ ಬರುವ ಹೊತ್ತಿಗೆ ಭಾರಿ ವಿಳಂಬವಾಗುತ್ತಿದೆ. ಈ ವರ್ಷವೂ ಅದೇ ಆಗಿದೆ.
ಈ ಬಾರಿ ಜಂಬೂ ಸವಾರಿಗೆ ಪೂರಕವಾದ ತಯಾರಿಯೇ ಆಗಿಲ್ಲ. ಪಾಲಿಕೆಯ ನಿಧಾನಗತಿ ಮತ್ತು ಗೊಂದಲದ ನಿರ್ಧಾರದಿಂದಾಗಿ ಅರಣ್ಯಾಧಿಕಾರಿಗಳು ಕೂಡ ಸಮಸ್ಯೆಗೆ ಸಿಲುಕಿದ್ದಾರೆ. ಕೊನೆ ಕ್ಷಣದವರೆಗೆ ಯಾವ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ ಎಂಬುದು ನಿರ್ಧಾರವಾಗಿರಲಿಲ್ಲ. ಹಾಗಾಗಿ ಈ ಭಾರಿ ತಾಲೀಮು ನಡೆದಿಲ್ಲ. ಪ್ರತಿ ವರ್ಷ ಸಕ್ರೆಬೈಲು ಆನೆಬಿಡಾರದಲ್ಲಾದರೂ ಮರಳಿನ ಚೀಲ ತುಂಬಿ ತಾಲೀಮು ನೀಡಲಾಗುತಿತ್ತು. ಆದರೆ, ಈ ಸಲ ವಿಜಯ ದಶಮಿಗೆ ಮೂರು ದಿನವಿರುವಾಗ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ್ಯಾವುದು ಅನ್ನುವುದು ನಿರ್ಧಾರವಾಗಿದೆ.
ನಗರಕ್ಕೆ ಹೊಂದಿಕೊಳ್ಳಬೇಕು, ಆರೋಗ್ಯವು ನೋಡಬೇಕು
ಸಾಕಾನೆಗಳಾದರೂ ನಿತ್ಯ ಕಾಡಿನಲ್ಲೇ ಇರುತ್ತವೆ. ಈ ಆನೆಗಳು ಪಟ್ಟಣದ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ವಾಹನಗಳ ಶಬ್ದ, ಕಲಾ ತಂಡಗಳ ತಮಟೆ, ಡೊಳ್ಳು ವಾದ್ಯಗಳ ಸೌಂಡು, ಪಟಾಕಿಗಳ ಸ್ಪೋಟದ ಶಬ್ದಗಳು ಅಭ್ಯಾಸವಾಗಬೇಕು. ಇದೆ ಕಾರಣಕ್ಕೆ ಮೈಸೂರನಲ್ಲಿ ವಾರಗಟ್ಟಲೆ ತಾಲೀಮು ನಡೆಸಲಾಗುತ್ತದೆ. ಹೀಗಿದ್ದೂ, ಶ್ರೀರಂಗಪಟ್ಟಣ ದಸರಾದಲ್ಲಿ ಪಟಾಕಿ ಶಬ್ದಕ್ಕೆ ಆನೆ ಬೆದರದ ಘಟನೆ ಇನ್ನೂ ಹಸಿರಾಗಿದೆ.
ಮತ್ತೊಂದೆಡೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಆರೋಗ್ಯವು ಮುಖ್ಯ. 2016ರ ದಸರಾ ವೇಳೆ ಅಂಬಾರಿ ಹೊರುತ್ತಿದ್ದಂತೆ ಸಾಗರ ಆನೆ ಆರೋಗ್ಯದಲ್ಲಿ ವ್ಯತ್ಯಾಸವಾಯಿತು. ಚಿಕಿತ್ಸೆ ನೀಡಿದರೂ ಸಾಗರ ಆನೆ ಅಂಬಾರಿ ಹೊರುವುದು ಕಷ್ಟ ಎಂದು ವೈದ್ಯರು ತಿಳಿಸಿದರು. ಹಾಗಾಗಿ ಅಂಬಾರಿಯನ್ನು ಲಾರಿಯಲ್ಲಿ ಇರಿಸಿ ಮೆರವಣಿಗೆ ನಡೆಸಲಾಯಿತು.
ಇವೆಲ್ಲವೂ ಮಹಾನಗರ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನದಲ್ಲಿದೆ. ಆದರೂ ಪಟ್ಟು ಬಿಡದೆ ಆನೆಗಳನ್ನು ಜಂಬೂ ಸವಾರಿಗೆ ಕರೆಸುತ್ತಿದ್ದಾರೆ. ತಾಲೀಮು ಇಲ್ಲದೆಯೇ ಅಂಬಾರಿ ಹೊರೆಸಲು ಸಿದ್ಧವಾಗಿದ್ದಾರೆ.
ಏಕಾಏಕಿ ನಿರ್ಧಾರಕ್ಕೆ ಕಡಿವಾಣ ಬೀಳಬೇಕು
ಆನೆಯ ಎದೆಯ ಭಾಗಕ್ಕೆ ಚರ್ಮದ ಪಟ್ಟಿಯನ್ನು ಬಿಗಿಯಾಗಿ ಕಟ್ಟುವುದರಿಂದ ಎದೆನೋವು ಕಾಣಿಸಿಕೊಳ್ಳುತ್ತದೆ. ಊಟದಲ್ಲಿ ವ್ಯತ್ಯಾಸವಾದರೆ ಐದು ದಿನಗಳ ನಂತರ ಹೊಟ್ಟೆ ನೋವು, ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದ್ಯಾವುದನ್ನೂ ಲೆಕ್ಕಿಸದೇ ಏಕಾಏಕಿ ಆನೆಗಳನ್ನು ದಸರಾಗೆ ಕರೆಯುತ್ತಿರುವ ಸಂಸ್ಕೃತಿಗೆ ತಡೆ ಬೀಳಬೇಕಿದೆ ಎನ್ನುವುದು ಪ್ರಾಣಿ ಪ್ರೇಮಿಗಳ ಅಭಿಪ್ರಾಯವಾಗಿದೆ.