ಸಾಗರ ಜೋಡಿ ಕೊಲೆಗೆ ಟ್ವಿಸ್ಟ್: ಹೊಸ ಪ್ರಿಯಕರನಿಂದ ಹಳೆ ಲವರ್ ಮರ್ಡರ್
ಶಿವಮೊಗ್ಗ, ಅಕ್ಟೋಬರ್ 21: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಇಕ್ಕೇರಿಯ ಕಸಕಸೆಕೊಡ್ಲುವಿನಲ್ಲಿ ಕೊಲೆಯಾಗಿದ್ದ ತಾಯಿ ಮಗನ ಜೋಡಿ ಕೊಲೆ ಮಾಡಿದ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಯನ್ನು ಒಂದೇ ವಾರದಲ್ಲಿ ಪತ್ತೆ ಮಾಡಿದ್ದಾರೆ.
ಸಾಗರ ಪೊಲೀಸರು ನಿನ್ನೆ ಮಹಜರ್ ಮಾಡಲು ಆರೋಪಿಯನ್ನು ಸ್ಥಳಕ್ಕೆ ಕರೆದುಕೊಂಡು ಹೋದಾಗ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿಯೇ ಇದ್ದ ಡಿಸಿಆರ್ ಬಿ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಅವರು, ಆರೋಪಿ ಭರತ್ ನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಿಂದ ಗಾಯಗೊಂಡಿರುವ ಆರೋಪಿ ಭರತ್ ಗೆ ಸಾಗರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಕ್ರೆಬೈಲಿನ ಆನೆ ಬಿಡಾರದಲ್ಲಿ ಏಕದಂತ ಆನೆ ಸಾವು
ಈ ಪ್ರಕರಣದಲ್ಲಿ ಪೊಲೀಸ್ ಕಾನ್ ಸ್ಟೆಬಲ್ ಚಂದ್ರನಾಯ್ಕ್ ಅವರಿಗೆ ಗಾಯಗಳಾಗಿವೆ, ಅವರನ್ನೂ ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಬಲ್ ಮರ್ಡರ್ ನಲ್ಲಿ ಆರೋಪಿಯಾಗಿರುವ ಭರತ್ ಗೌಡನಿಗೆ ಶೃತಿ ಎಂಬ ಯುವತಿ ಒಂದು ಕಾಲದಲ್ಲಿ ಪ್ರಿಯತಮೆಯಾಗಿದ್ದಳು. ಪ್ರವೀಣನ ಕೊಲೆಗೆ ಈ ಪ್ರಿಯತಮೆಯೇ ಕಾರಣವೆಂದು ಹೇಳಲಾಗುತ್ತಿದ್ದು, ಅವಳ ನಿರ್ದೇಶನದಲ್ಲಿಯೇ ಈ ಕೊಲೆ ನಡೆದಿದೆ ಎನ್ನಲಾಗಿದೆ. ಈ ಪ್ರಕರಣವನ್ನು ಬೇಧಿಸುವಲ್ಲಿ ಡಿಸಿಐಬಿ ಕುಮಾರಸ್ವಾಮಿ ಮತ್ತು ಮಹಿಳಾ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಅಭಯ ಪ್ರಕಾಶ ಸೋಮನಾಳ್ ಮತ್ತು ತಂಡ, ಎಸ್ ಪಿ, ಅಡಿಷನಲ್ ಎಸ್ ಪಿ ಮತ್ತು ಸಿಬ್ಬಂದಿಗಳಿದ್ದರು.
ಪತ್ನಿ ಎದುರಿನಲ್ಲಿಯೇ ಕೊಲೆ ಮಾಡಲಾಗಿತ್ತು
ಅ.11 ರಂದು ಸಾಗರ ತಾಲೂಕಿನ ಹಳೆ ಇಕ್ಕೇರಿಯಲ್ಲಿ ಬಂಗಾರಮ್ಮ (60), ಪ್ರವೀಣ್ (35) ತಾಯಿ ಮಗನನ್ನು ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿಯೇ ಮೃತ ಪ್ರವೀಣನ ಪತ್ನಿ ಹಾಗೂ 10 ತಿಂಗಳ ಮಗುವಿನ ಎದುರಿನಲ್ಲಿಯೇ ಕೊಲೆ ಮಾಡಲಾಗಿತ್ತು. ಆದರೆ ಕೊಲೆಗೆ ನಿಖರ ಕಾರಣ ಗೊತ್ತಾಗಿರಲಿಲ್ಲ. ಘಟನೆ ನಂತರ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜ್ ಹಾಗೂ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು.
ಕೊಲೆಗೆ ನಿಖರ ಕಾರಣ ಗೊತ್ತಾಗರಲಿಲ್ಲ
ಈ ಪ್ರಕರಣ ಬೇಧಿಸುವುದು ಆರಂಭದಲ್ಲಿ ಪೊಲೀಸರಿಗೆ ಕಷ್ಟವಾಗಿತ್ತು. ಕೊಲೆಗೆ ನಿಖರ ಕಾರಣ ಗೊತ್ತಾಗರಲಿಲ್ಲ. ಕೊಲೆಯಾದವರು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು, ಅಷ್ಟೊಂದು ಶ್ರೀಮಂತರಲ್ಲ. ಜೊತೆಗೆ ಕೊಲೆ ಮಾಡಿದ ನಂತರ ಮನೆಯಿಂದ ಯಾವ ವಸ್ತುವನ್ನು ತೆಗೆದುಕೊಂಡು ಹೋಗಿಲ್ಲ. ಹತ್ಯೆಯಾದ ಪ್ರವೀಣನ ಪತ್ನಿ ಹಾಗೂ ಆತನ ಮಗುವನ್ನು ಏನೂ ಮಾಡಿಲ್ಲ. ಹೀಗಿರುವಾಗ ಕೊಲೆ ಏಕೆ ನಡೆದಿದೆ ಎಂಬುದು ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು.
ಪತ್ನಿ ರೋಹಿಣಿ ಮೇಲೆಯೇ ಪೊಲೀಸರ ಅನುಮಾನ
ಹೀಗಾಗಿ ಈ ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಅವರು ವಿಶೇಷ ಪೊಲೀಸ್ ತಂಡ ರಚಿಸಿದ್ದರು. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಮೊದಲಿಗೆ ಹತ್ಯೆಯಾದ ಪ್ರವೀಣನ ಪತ್ನಿ ರೋಹಿಣಿ ಮೇಲೆಯೇ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈಕೆಗೆ ಏನಾದರೂ ಬೇರೆ ಸಂಬಂಧ ಇದೆಯಾ? ಇದಕ್ಕಾಗಿ ಏನಾದರೂ ಕೊಲೆ ನಡೆದಿದೆಯಾ? ಎಂದು ವಿಚಾರಣೆ ನಡೆಸಿದ್ದರು. ಪ್ರವೀಣನ ಪತ್ನಿಗೆ ಆ ರೀತಿ ಯಾವುದೇ ಸಂಬಂಧ ಇರಲಿಲ್ಲ, ಕೊಲೆ ಮಾಡಿಲ್ಲ ಎಂಬುದು ಸ್ಪಷ್ಟವಾಯಿತು.
ನೆರೆ ಮನೆ ನಿವಾಸಿಯಾದ ಶೃತಿ ಜೊತೆ ಪ್ರೀತಿ ಇತ್ತು
ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ತನಿಖೆ ಸಂದರ್ಭದಲ್ಲಿ ಈ ಕೊಲೆಗೆ ಬೇರೆಯದ್ದೇ ವಿಷಯ ಇದೆ ಎಂಬ ಮಾಹಿತಿ ದೊರೆಯಿತು. ಕೊಲೆಯಾದ ಪ್ರವೀಣನಿಗೆ ನೆರೆ ಮನೆ ನಿವಾಸಿಯಾದ ಶೃತಿ ಜೊತೆ ಪ್ರೀತಿ ಇತ್ತು. ಆದರೆ ಪ್ರವೀಣನು ಶೃತಿಗೆ ಕೈಕೊಟ್ಟು ರೋಹಿಣಿಯನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದ. ಇದಕ್ಕೆ ಶೃತಿ ಪ್ರವೀಣನ ವಿರುದ್ಧ ಕೋಪಗೊಂಡಿದ್ದಳು. ನಂತರ ಶೃತಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಈ ವೇಳೆ ಶೃತಿಗೆ ಭರತ್ ಎಂಬ ಯುವಕನ ಪರಿಚವಾಗಿದೆ. ಇಬ್ಬರ ಪರಿಚಯ, ಸ್ನೇಹ ನಂತರ ಪ್ರೀತಿಯಾಗಿ ಚಿಗುರೊಡೆದಿದೆ. ಮಾಜಿ ಪ್ರಿಯಕರ ಪ್ರವೀಣನಿಂದ ತನಗಾದ ಅನ್ಯಾಯವನ್ನು ಹೊಸ ಪ್ರಿಯಕರ ಭರತ್ ನ ಬಳಿ ಶೃತಿ ನಿವೇದಿಸಿಕೊಂಡಿದ್ದಾಳೆ.
ಇಬ್ಬರ ಖಾಸಗಿ ವಿಡಿಯೋ ಪ್ರವೀಣ್ ಬಳಿ ಇತ್ತು
ಅಲ್ಲದೆ ಮೊದಲು ಪ್ರವೀಣ್ ಹಾಗೂ ಶೃತಿ ಪ್ರೀತಿ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರ ಖಾಸಗಿ ವಿಡಿಯೋ ಪ್ರವೀಣ್ ಬಳಿ ಇತ್ತು. ವಿಡಿಯೋ ಇಟ್ಟುಕೊಂಡು ಪ್ರವೀಣ್ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಶೃತಿ ತನ್ನ ಹೊಸ ಪ್ರಿಯತಮ ಭರತ್ ಸಹಾಯ ಪಡೆದು ಆತನಿಂದಲೇ ಪ್ರವೀಣ್ ಹಾಗೂ ಆತನ ತಾಯಿ ಬಂಗಾರಮ್ಮ ಇಬ್ಬರನ್ನು ಕೊಲೆ ಮಾಡಿಸಿದ್ದಾಳೆ ಎಂಬುದು ತನಿಖೆ ವೇಳೆ ತಿಳಿದಿದೆ. ಆರೋಪಿ ಭರತ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಳಿಕ ಪೊಲೀಸರು ಆರೋಪಿ ಭರತ್ ನನ್ನು ಮಹಜರ್ ನಡೆಸಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಮಹಜರ್ ನಡೆಸಿ ವಾಪಸ್ ಬರುವ ವೇಳೆ ಆರೋಪಿ ಭರತ್ ಮೂತ್ರ ವಿಸರ್ಜನೆ ಮಾಡುವುದಾಗಿ ಪೊಲೀಸರ ಬಳಿ ಹೇಳಿ ಜೀಪಿನಿಂದ ಕೆಳಗಡೆ ಇಳಿದು ಹೋಗಿದ್ದಾನೆ. ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ಸಹ ಈತನನ್ನು ಹಿಂಬಾಲಿಸಿದ್ದರು. ಆರೋಪಿ ಭರತ್ ಪೊಲೀಸರನ್ನು ತಳ್ಳಿ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿಯೇ ಇದ್ದ ಡಿಸಿಆರ್ ಬಿ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಅವರು ಆರೋಪಿ ಭರತ್ ನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.