ತುಂಗಾ ನದಿ ಹೊರಹರಿವು ಹೆಚ್ಚಳ; ನದಿ ಪಾತ್ರದ ಜನರಿಗೆ ಹೆಚ್ಚಾಯ್ತು ಆತಂಕ!
ಶಿವಮೊಗ್ಗ, ಆಗಸ್ಟ್ 07: ಮಲೆನಾಡಿನ ತುಂಗಾನದಿ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ತೀರ್ಥಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಇದರಿಂದ ತುಂಗಾನದಿ ಹೊರ ಹರಿವು ಹೆಚ್ಚಳವಾಗಿದೆ.
ಇಂದು ಬೆಳಿಗ್ಗೆಯಿಂದ ತುಂಗಾ ಜಲಾಶಯದಿಂದ ಒಳ ಹರಿವು 68,500 ಕ್ಯೂಸೆಕ್ಸ್ ಇದ್ದು, ಎಲ್ಲಾ ಗೇಟ್ ಗಳ ಮೂಲಕ 71000 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ.
ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಸಚಿವ ಕೆ.ಎಸ್ ಈಶ್ವರಪ್ಪ ಬಾಗಿನ ಅರ್ಪಣೆ
ನಿನ್ನೆ ರಾತ್ರಿಯಿಂದ ಒಳ ಹರಿವು ಮತ್ತು ಹೊರ ಹರಿವು ಹೆಚ್ಚಳವಾಗಿದ್ದರಿಂದ ನಿನ್ನೆ ರಾತ್ರಿಯೇ ನಾಲ್ಕೂ ಸಾವಿರದಿಂದ ಐದು ಸಾವಿರ ಕ್ಯೂಸೆಕ್ ನೀರು ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳೆ ಶಿವಮೊಗ್ಗ ಜನತೆಗೆ ಆತಂಕ
ತುಂಗಾ ನದಿಯ ಹೊರ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಹಳೆ ಶಿವಮೊಗ್ಗದ ಜನತೆಗೆ ಹೆಚ್ಚಿನ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಇದೆ ಸಮಯದಲ್ಲಿ ಹಳೆ ಶಿವಮೊಗ್ಗದ ಕೆಲವು ಭಾಗ ಜಲಾವೃತಗೊಂಡಿತ್ತು. ಜನತೆ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಯ್ತು, ಅಧಿಕಾರಿಗಳ ತಂಡ ಈಗಾಗಲೇ ಕಾರ್ಯ ಪ್ರವೃತರಾಗಿದ್ದು, ಎಲ್ಲ ರೀತಿ ಸಿದ್ದತೆ ಮಾಡಿಕೊಂಡಿದ್ದಾರೆ.