ಅಯೋಧ್ಯೆ ಮಂದಿರ ನಿರ್ಮಾಣದ ಅಡಿಗಲ್ಲು ಪೂಜೆಗೆ ಶಿವಮೊಗ್ಗದ ತುಂಗ ಭದ್ರಾ ನೀರು
ಶಿವಮೊಗ್ಗ, ಜುಲೈ 21: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಗಸ್ಟ್ 5ರಂದು ಅಡಿಗಲ್ಲು ಇಡಲಾಗುತ್ತಿದೆ. ಅಂದು ಭೂಮಿ ಪೂಜೆ ವೇಳೆ ತುಂಗಾ ಮತ್ತು ಭದ್ರಾ ನದಿಯ ನೀರನ್ನು ಬಳಸಲಾಗುತ್ತದೆ ಎಂದು ತಿಳಿದುಬಂದಿದ್ದು, ಇಂದು ಎರಡು ನದಿಗಳ ನೀರನ್ನು ಅಯೋಧ್ಯೆಗೆ ಕಳುಹಿಸಿ ಕೊಡಲಾಗಿದೆ.
ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಮಂದಿರ ನಿರ್ಮಾಣದ ಕಾರ್ಯಕ್ಕೆ ಜಿಲ್ಲೆಯ ಎರಡು ನದಿಯ ನೀರನ್ನು ಸಂಗ್ರಹಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಕೋಟೆ ತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಮುಖರ ಸಮ್ಮುಖದಲ್ಲಿ ನೀರನ್ನು ಪ್ಯಾಕ್ ಮಾಡಿ ಅಯೋಧ್ಯೆಗೆ ಕಳುಹಿಸಲಾಯಿತು.
ಅಯೋಧ್ಯೆಯಲ್ಲಿ 300 ಕೋಟಿ ರೂ. ವೆಚ್ಚದ ರಾಮಮಂದಿರ ನಿರ್ಮಾಣ: ಪೇಜಾವರ ಶ್ರೀ
ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗುತ್ತಿದ್ದು, ದೇಶದ ಎಲ್ಲ ಪವಿತ್ರ ನದಿಗಳ ನೀರನ್ನು ಬಳಸಲು ಯೋಜಿಸಲಾಗಿದೆ. ಇದೇ ಕಾರಣಕ್ಕೆ ಶಿವಮೊಗ್ಗ ಜಿಲ್ಲೆಯ ಎರಡು ನದಿಯ ನೀರನ್ನು ಕಳುಹಿಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ರಮೇಶ್ ಬಾಬು ತಿಳಿಸಿದ್ದಾರೆ.