ಶಿವಮೊಗ್ಗ; ಬೈಪಾಸ್ ರಸ್ತೆಯಲ್ಲಿ ಲಾರಿ ರಿಪೇರಿ, ಪೊಲೀಸರ ದೌಡು!
ಶಿವಮೊಗ್ಗ, ಸೆಪ್ಟೆಂಬರ್ 26: ಶಿವಮೊಗ್ಗ ತಾಲೂಕಿನ ಹುಣಸೋಡು ಸ್ಪೋಟ ಪ್ರಕರಣದ ಬಳಿಕವು ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ತೋರುತ್ತಿಲ್ಲ. ಸ್ಪೋಟಕ ಸಾಗಣೆ ವಿಚಾರವಾಗಿ ಆಡಳಿತ ಯಂತ್ರ ನಿರ್ಲಕ್ಷ್ಯ ವಹಿಸಿದಂತೆ ತೋರುತ್ತಿದೆ.
ಸ್ಪೋಟಕ ತುಂಬಿದ್ದ ಲಾರಿಯೊಂದನ್ನು ಶಿವಮೊಗ್ಗ ನಗರದ ನಡುವೆ ರಿಪೇರಿಗೆ ನಿಲ್ಲಿಸಿದ್ದೆ ಇದಕ್ಕೆ ಸಾಕ್ಷಿಯಾಗಿದೆ. ಯಾವುದೆ ಭದ್ರತೆ ಇಲ್ಲದೆ, ಮುನ್ನೆಚ್ಚರಿಕಾ ಕ್ರಮಗಳು ಇಲ್ಲದೆ ಲಾರಿಯನ್ನು ನಡು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು.
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ಶಿವಮೊಗ್ಗದ ಬೈಪಾಸ್ ರಸ್ತೆಯ ಗ್ಯಾರೇಜ್ನಲ್ಲಿ ಲಾರಿಯೊಂದನ್ನು ರಿಪೇರಿಗಾಗಿ ನಿಲ್ಲಿಸಲಾಗಿತ್ತು. ಲಾರಿಯ ಮುಂದಿನ ಚಕ್ರ ಬಿಚ್ಚಿ ಗ್ಯಾರೇಜ್ನಲ್ಲಿ ರಿಪೇರಿ ಮಾಡಲಾಗುತ್ತಿತ್ತು. ಬಹುಹೊತ್ತು ರಿಪೇರಿ ಕಾರ್ಯ ನಡೆದಿದೆ.
ಕಂದಾಯ ವಿಷಯಗಳ ನಿರ್ವಹಣೆ; ಶಿವಮೊಗ್ಗ ಜಿಲ್ಲೆ ರಾಜ್ಯಕ್ಕೆ ಪ್ರಥಮ
ಸ್ಥಳೀಯರಲ್ಲಿ ಅನುಮಾನ; ಗ್ಯಾರೇಜ್ನಲ್ಲಿ ನಿಂತಿದ್ದ ಲಾರಿ ಸಾಮಾನ್ಯ ಲಾರಿಗಳಂತೆ ಇರಲಿಲ್ಲ. ಗೂಡ್ಸ್ ತುಂಬಾ ಜಾಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಒಳಗೇನಿದೆ ಎಂಬುದನ್ನು ಕಾಣದಂತೆ ಲಾಕ್ ಮಾಡಲಾಗಿತ್ತು. ಇದೇ ಕಾರಣಕ್ಕೆ ಸ್ಥಳೀಯರೊಬ್ಬರು ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ.
ಶಿವಮೊಗ್ಗ ಸ್ಪೋಟ ಪ್ರಕರಣ: 7 ತಿಂಗಳ ನಂತರ ಮೃತದೇಹಗಳ ಗುರುತು ಪತ್ತೆ
ವಿಚಾರ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿದೆ. ಲಾರಿ ಚಾಲಕನ ವಿಚಾರಣೆ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಬೇಗ ರಿಪೇರಿ ಕಾರ್ಯ ಮುಗಿಸುವಂತೆ ಗ್ಯಾರೇಜ್ ಸಿಬ್ಬಂದಿಗಳಿಗೆ ಸೂಚಿಸಲಾಯಿತು.
ಲಾರಿಯಲ್ಲಿ ಏನೆಲ್ಲ ಸ್ಪೋಟಕ; ಲಾರಿ ಉಡುಪಿಯಿಂದ ಚಿತ್ರದುರ್ಗದ ಸಿಂಗಾಪುರಕ್ಕೆ ತೆರಳುತಿತ್ತು. ಇದರಲ್ಲಿ ಕೆಲ್ವಿಕ್ಸ್ 220 ಮಾದರಿಯ 1500 ಕೆ. ಜಿ. ತೂಕದ ಜಿಲೆಟಿನ್ ಕಡ್ಡಿಗಳಿದ್ದವು. ಪೊಲೀಸರು ದಾಖಲೆಗಳ ಪರಿಶೀಲನೆ ವೇಳೆ ಇದು ತಿಳಿದು ಬಂದಿದೆ.
ಸ್ಪೋಟಕ ಕಾಯ್ದೆ 2008ರ ಅಡಿಯಲ್ಲಿ ಸ್ಪೋಟಕಗಳ ಸಾಗಣೆ ಸಂಬಂಧ ಪ್ರತ್ಯೇಕ ನಿಯಮಗಳಿವೆ. ಅದರ ಅನ್ವಯ ಈಗ ಸಾಗಣೆ ಮಾಡುತ್ತಿದ್ದ ಕೆಲ್ವಿಕ್ಸ್ 220 ಮಾದರಿಯ ಜಿಲೆಟಿನ್ ಕಡ್ಡಿಗಳು ಕ್ಲಾಸ್ 2ರಂದು ಪರಿಗಣಿಸಲಾಗಿದೆ.
ಕ್ಲಾಸ್ 2 ಮಾದರಿಯ ಸ್ಪೋಟಕದ ಜೊತೆಗೆ ಡಿಟೊನೇಟರ್ಗಳ ಸಾಗಣೆ ಮಾಡುವಂತಿಲ್ಲ. ಬೈಪಾಸ್ ರಸ್ತೆಯಲ್ಲಿ ಸಿಕ್ಕ ಲಾರಿಯಲ್ಲಿ ಡಿಟೊನೇಟರ್ಗಳು ಇರಲಿಲ್ಲ. 15 ಟನ್ ಗಿಂತಲೂ ಹೆಚ್ಚಿನ ತೂಕದ ಕ್ಲಾಸ್ 2 ಮಾದರಿಯ ಸ್ಪೋಟಕವನ್ನು ಸಾಗಿಸುವಂತಿಲ್ಲ. ಈ ಲಾರಿಯಲ್ಲಿ 1500 ಕೆ. ಜಿ.ಯಷ್ಟು ಜಿಲೆಟಿನ್ ಕಡ್ಡಿಯಷ್ಟೆ ಇತ್ತು.
ಸ್ಪೋಟಕ ಸಾಗಣೆ ಮಾಡುವ ವಾಹನ ಯಾವ-ಯಾವ ಜಿಲ್ಲೆಯಲ್ಲಿ ಸಾಗುತ್ತದೆಯೋ ಆಯಾ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ರವಾನಿಸಬೇಕು. ಈ ಲಾರಿಯಲ್ಲಿದ್ದ ಸ್ಪೋಟಕ ಸಾಗಣೆ ಸಂಬಂಧ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಮಾಹಿತಿ ರವಾನಿಸಲಾಗಿದೆ ಎಂದು ದಾಖಲೆಯಲ್ಲಿ ತಿಳಿಸಲಾಗಿತ್ತು.
ಎಡವಿತಾ ಆಡಳಿತ ಯಂತ್ರ?; ಸ್ಪೋಟಕಗಳಿಂದ ಭೀತಿ ತಪ್ಪಿದ್ದಲ್ಲ. ಆದರೂ ಸ್ಪೋಟಕ ತುಂಬಿದ್ದ ಲಾರಿ ಶಿವಮೊಗ್ಗ ಪ್ರವೇಶಿಸಿದ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ಇರದಿರುವುದು ಆತಂಕದ ವಿಚಾರ. ಸ್ಥಳೀಯರು ಕರೆ ಮಾಡಿದ ಬಳಿಕವಷ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ಸ್ಪೋಟಕ ತುಂಬಿದ್ದ ಲಾರಿಯನ್ನು ಜನನಿಬಿಡ ಮತ್ತು ವಸತಿ ಪ್ರದೇಶದಲ್ಲಿ ನಿಲ್ಲಿಸಿ, ರಿಪೇರಿ ಮಾಡಿಸಿದ್ದು ಜನರ ಸುರಕ್ಷತೆಯ ದೃಷ್ಟಿಯಿಂದ ಭಾರಿ ಆತಂಕಕ್ಕೆ ಕಾರಣವಾಗಿದೆ.
ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟದ ನೆನಪು ಹಸಿರಾಗಿದೆ. ಈ ಸಂದರ್ಭದಲ್ಲೇ ಸ್ಪೋಟಕ ತುಂಬಿದ್ದ ಲಾರಿಯನ್ನು ನಡುರಸ್ತೆಯಲ್ಲಿ ನಿಲ್ಲಿಸಿದ್ದು ಜಿಲ್ಲಾಡಳಿತ ಲೋಪ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಗುರುತು ಪತ್ತೆಯಾಗಿತ್ತು; ಶಿವಮೊಗ್ಗದ ಕಲ್ಲಗಂಗೂರು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭಾರಿ ಸ್ಪೋಟದಲ್ಲಿ ಮೃತಪಟ್ಟಿದ್ದ ಆರನೇ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಪ್ರಕರಣ ಸಂಭವಿಸಿ ಏಳೂವರೆ ತಿಂಗಳ ಬಳಿಕ ಮೃತಪಟ್ಟ ವ್ಯಕ್ತಿ ಗುರುತು ಪತ್ತೆಯಾಗಿದೆ.
ಕಲ್ಲಗಂಗೂರು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ 6 ಮಂದಿ ಮೃತಪಟ್ಟಿದ್ದರು. ಐವರ ಗುರುತು ಪತ್ತೆಯಾಗಿ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿತ್ತು. ಆರನೇ ವ್ಯಕ್ತಿಯ ದೇಹ ಸಂಪೂರ್ಣ ಛಿದ್ರವಾಗಿತ್ತು. ಹಾಗಾಗಿ ಆತನ ಗುರುತು ಪತ್ತೆಯಾಗಿರಲಿಲ್ಲ. ಈಗ ಆತನ ಗುರುತು ಪತ್ತೆಯಾಗಿರುವುದಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೃತನನ್ನು ಭದ್ರಾವತಿಯ ಕೆ. ಹೆಚ್. ನಗರದ ಆಟೋ ಚಾಲಕ ಶಶಿ (32) ಎಂದು ತಿಳಿದು ಬಂದಿದೆ.