ಶಿವಮೊಗ್ಗದಲ್ಲಿ ಭಾರಿ ಸ್ಫೋಟ: ಕಂಪಿಸಿದ ಭೂಮಿ, ಜನತೆಯಲ್ಲಿ ಭಯ
ಶಿವಮೊಗ್ಗ, ಜನವರಿ 21: ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಇತರೆ ಕೆಲವು ಕಡೆಗಳಲ್ಲಿ ಗುರುವಾರ ರಾತ್ರಿ 10.20ರ ಸುಮಾರಿಗೆ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಸುಮಾರು 20 ಕಿಮೀವರೆಗೂ ಸ್ಫೋಟದ ಸದ್ದು ಕೇಳಿಸಿದೆ. ಭದ್ರಾವತಿಯಲ್ಲಿನ ಜನತೆಗೂ ಈ ಸದ್ದು ಕೇಳಿಸಿದೆ ಎಂದು ವರದಿಯಾಗಿದೆ.
ಸ್ಫೋಟದ ತೀವ್ರತೆಗೆ ಅನೇಕ ಕಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಜೋರಾದ ಸದ್ದು ಹಾಗೂ ಭೂಮಿ ನಡುಗಿದ್ದರಿಂದ ಭಯಗೊಂಡ ಜನರು ಮನೆಗಳಿಂದ ಹೊರಗೋಡಿ ರಸ್ತೆಗೆ ಬಂದಿದ್ದಾರೆ. ಆದರೆ ಈ ಸ್ಫೋಟ ಎಲ್ಲಿ ಸಂಭವಿಸಿತು, ಅದಕ್ಕೆ ಕಾರಣವೇನು ಇತ್ಯಾದಿ ಸಂಗತಿಗಳು ಇನ್ನೂ ಸ್ಪಷ್ಟವಾಗಿಲ್ಲ.
ಸುಮಾರು 5-6 ಸೆಕೆಂಡುಗಳ ಕಾಲ ಭೂಮಿ ನಡುಗಿದ ಅನುಭವವಾಗಿದೆ. ನವುಲೆ ಪ್ರದೇಶದಲ್ಲಿನ ಗ್ಯಾಸ್ ಗೋಡೌನ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಶಿವಮೊಗ್ಗ ಪಟ್ಟಣದಿಂದ ದೂರದಲ್ಲಿರುವ ಕೋಣಂದೂರು, ರಿಪ್ಪನ್ಪೇಟೆ, ತೀರ್ಥಹಳ್ಳಿಗಳಲ್ಲಿ ಕೂಡ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ವರದಿಯಾಗಿದೆ.
ಭೂಮಿ ಕಂಪಿಸಿದ ತೀವ್ರತೆಗೆ ಶಿವಮೊಗ್ಗ ನಗರ ಬಸ್ ನಿಲ್ದಾಣ ಬಸ್ಗಳು ಕೂಡ ಆಲುಗಾಡಿವೆ ಎಂದು ಕೆ.ಎಸ್ ಆರ್ ಟಿಸಿ ಚಾಲಕರೊಬ್ಬರು ಮಾಹಿತಿ ನೀಡಿದ್ದಾರೆ. ಅನೇಕ ಮನೆಗಳಲ್ಲಿ ಪಾತ್ರೆಗಳು ಉರುಳಿ ಬಿದ್ದಿವೆ. ಕಿಟಕಿ ಗಾಜುಗಳು ಒಡೆದು ಪುಡಿಯಾಗಿವೆ.
ಶಿಕಾರಿಪುರ ತಾಲೂಕಿನ ಈಸೂರು, ತರಲಘಟ, ಅಂಜನಾಪುರ, ಈ ರೀತಿ ಅನೇಕ ಭಾಗಗಳಲ್ಲಿ ಏಕಾಏಕಿ ದೊಡ್ಡ ಶಬ್ದ ಕೇಳಿಬಂದಿದೆ. ತೀರ್ಥಹಳ್ಳಿ ಭದ್ರಾವತಿ, ಸಾಗರ ತಾಲೂಕುಗಳಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ಪುರ, ಕೊಪ್ಪ ಮುಂತಾದ ಕಡೆ ಕೂಡ ಶಬ್ದ ಕೇಳಿಬಂದಿದ್ದು ಜನರು ಆತಂಕಗೊಂಡಿದ್ದಾರೆ.ಎರಡು ಬಾರಿ ಭೂಮಿ ಕಂಪಿಸಿದೆ.
ಕಲಬುರಗಿ ಮತ್ತು ದಾವಣಗೆರೆಯ ಹಲವು ಭಾಗಗಳಲ್ಲಿ ಕೂಡ ಭಾರಿ ಸ್ಫೋಟ ಮತ್ತು ಭೂಕಂಪನದ ಅನುಭವ ಉಂಟಾಗಿದೆ ಎಂದು ವರದಿಯಾಗಿದೆ.