ಶಿವಮೊಗ್ಗ; ಸರ್ಕಾರಿ ಬಸ್ ನಿಲ್ದಾಣ ಖಾಲಿ, ಖಾಸಗಿ ಬಸ್ ದರ್ಬಾರ್!
ಶಿವಮೊಗ್ಗ , ಏಪ್ರಿಲ್ 07; ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಶಿವಮೊಗ್ಗದ ಸರ್ಕಾರಿ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿಯಾಗಿದೆ. ಸಿಬ್ಬಂದಿಗಳು ಗೈರಾಗಿರುವುದರಿಂದ ಬಸ್ಸುಗಳು ನಿಲ್ದಾಣಕ್ಕೆ ಬಂದಿಲ್ಲ. ಇನ್ನು, ಪ್ರಯಾಣಿಕರು ಇಲ್ಲದೆ ನಿಲ್ದಾಣ ಬಣಗುಡುತ್ತಿದೆ.
ಶಿವಮೊಗ್ಗ ಬಸ್ ನಿಲ್ದಾಣ ಖಾಲಿಯಾಗಿದೆ. ರಾತ್ರಿಯಿಂದಲೇ ಸಿಬ್ಬಂದಿಗಳ ಕೊರತೆ ಉಂಟಾಗಿತ್ತು. ಬೆಳಗ್ಗೆ ಹೊತ್ತಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿದ್ದಾರೆ. ಆದ್ದರಿಂದ ಘಟಕದಲ್ಲಿರುವ ಬಸ್ಸುಗಳು ನಿಲ್ದಾಣಕ್ಕೆ ಬಂದಿಲ್ಲ.
ಕರ್ನಾಟಕ ಬಸ್ ಮುಷ್ಕರ: ವಿವಿಧ ಜಿಲ್ಲೆಗಳ ಪರಿಸ್ಥಿತಿ ಏನು?
ಸದಾ ಪ್ರಯಾಣಿಕರಿಂದ ತುಂಬಿರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕೆಲವೇ ಕೆಲವು ಜನರು, ಸಿಬ್ಬಂದಿಗಳಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣದಿಂದ ಪ್ರತಿದಿನ ಸಾವಿರಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುತ್ತವೆ. ಆದರೆ ನಿಲ್ದಾಣ ಬುಧವಾರ ಬಿಕೋ ಅನ್ನುತ್ತಿದೆ.
ಶಿವಮೊಗ್ಗದಲ್ಲಿ ಪ್ರಯಾಣಿಕರಿಗೆ ಸರ್ಕಾರಿ ಬಸ್ ಮುಷ್ಕರದ ಬಿಸಿ
"ಶಿವಮೊಗ್ಗ ಘಟಕ ಮತ್ತು ವಿವಿಧೆಡೆಯಿಂದ ಬರುವ ಬಸ್ಸುಗಳು ಸೇರಿ ಸುಮಾರು 1300 ಬಸ್ಸುಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ. ಆದರೆ ನೌಕರರ ಮುಷ್ಕರದಿಂದಾಗಿ ಬೆಳಗ್ಗೆಯಿಂದ ಒಂದೂ ಬಸ್ ನಿಲ್ದಾಣಕ್ಕೆ ಬಂದಿಲ್ಲ" ಎನ್ನುತ್ತಾರೆ ಶಿವಮೊಗ್ಗ ನಿಲ್ದಾಣದ ನಿಯಂತ್ರಣಾಧಿಕಾರಿ ಸಿದ್ದೇಶ್.
ಏ. 7ರಿಂದ ಸರ್ಕಾರಿ ಬಸ್ ಸಂಚಾರವಿಲ್ಲ; ಕೋಡಿಹಳ್ಳಿ ಚಂದ್ರಶೇಖರ್
ಎಲ್ಲೆಲ್ಲಿಗೆ ಎಷ್ಟು ಬಸ್ ಸಂಚಾರ?
ಶಿವಮೊಗ್ಗ ನಿಲ್ದಾಣದಿಂದ ಪ್ರತಿದಿನ ವಿವಿಧ ಜಿಲ್ಲೆಗಳಿಗೆ ಬಸ್ಸುಗಳು ಸಂಚರಿಸುತ್ತವೆ. ಬೆಂಗಳೂರಿಗೆ 141, ಮೈಸೂರಿಗೆ 63, ಹಾಸನ 26, ಗದಗ 11, ಚಿತ್ರದುರ್ಗ 23, ಉಡುಪಿ - ಮಂಗಳೂರು 17, ಚಿಕ್ಕಮಗಳೂರು - ಧರ್ಮಸ್ಥಳ 96, ರಾಯಚೂರು - ಹೈದರಾಬಾದ್ 93, ಬೆಳಗಾವಿ - ಪೂನಾ - ಮುಂಬೈ 45, ಹರಿಹರ - ದಾವಣಗೆರೆ 53, ಬನವಾಸಿ- ಆನವಟ್ಟಿ - ಶಿರಸಿ 17, ಕೊಲ್ಲೂರು - ಬೈಂದೂರು - ಭಟ್ಕಳ 8, ಶಿರಸಿ - ಕಾರವಾರ 43 ಸೇರಿದಂತೆ ವಿವಿಧೆಡೆ ಬಸ್ಸುಗಳು ಸಂಚರಿಸುತ್ತಿದ್ದವು. ಪ್ರತಿ ದಿನ ಅಂದಾಜು 30 ಸಾವಿರ ಪ್ರಯಾಣಿಕರು ನಿಲ್ದಾಣಕ್ಕೆ ಬಂದು ಹೋಗುತ್ತಿದ್ದರು.
ಖಾಸಗಿ ಬಸ್ಗಳ ದರ್ಬಾರ್
ದೂರದ ಊರುಗಳಿಗೆ ತೆರಳುವವರ ಅನುಕೂಲಕ್ಕಾಗಿ ಶಿವಮೊಗ್ಗದಲ್ಲಿ ಖಾಸಗಿ ಬಸ್ಗಳು ರಸ್ತೆಗಿಳಿದಿವೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದಲೇ ಖಾಸಗಿ ಬಸ್ಗಳು ಸಂಚರಿಸುತ್ತಿವೆ. ನಿಲ್ದಾಣದೊಳಗೆ ಖಾಸಗಿ ಬಸ್ ನಿಲ್ಲಲು ಅವಕಾಶವಿಲ್ಲ. ಆದರೆ ಹೊರಾಂಗಣದಲ್ಲಿ ಬಸ್ಸುಗಳನ್ನು ನಿಲ್ಲಿಸಲಾಗಿದೆ.
ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ
ಶಿವಮೊಗ್ಗ ಬಸ್ ನಿಲ್ದಾಣದಿಂದ ಬೆಂಗಳೂರು, ಮೈಸೂರು, ಹರಿಹರ, ದಾವಣಗೆರೆ ಸೇರಿದಂತೆ ವಿವಿಧೆಡೆ ಖಾಸಗಿ ಬಸ್ಸುಗಳು ಸಂಚಾರಿಸುತ್ತಿವೆ. ಬೆಳಗ್ಗೆಯಿಂದಲೇ ಟೂರಿಸ್ಟ್ ಬಸ್ಸುಗಳು ಸೇರಿದಂತೆ ವಿವಿಧ ಪರ್ಮಿಟ್ ಹೊಂದಿರುವ ಬಸ್ಸುಗಳು ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ.
ಖಾಸಗಿ ಬಸ್ನಲ್ಲಿ ದುಬಾರಿ ದರ ಇಲ್ಲ
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಖಾಸಗಿ ಬಸ್ಸುಗಳ ಸಿಬ್ಬಂದಿ ದುಬಾರಿ ದರವನ್ನು ವಸೂಲಿ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ಹಾಗಾಗಿ ಶಿವಮೊಗ್ಗದಿಂದ ಸಂಚರಿಸುತ್ತಿರುವ ಖಾಸಗಿ ಬಸ್ಸುಗಳಲ್ಲಿ ದುಬಾರಿ ದರ ಪಡೆಯುತ್ತಿಲ್ಲ ಎಂದು ಬಸ್ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ಸರ್ಕಾರಿ ಬಸ್ಸಿಗೆ ಹೋಲಿಸಿದೆ ಟಿಕೆಟ್ ದರ ಹೆಚ್ಚಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.