ಶಿವಮೊಗ್ಗ ನಗರದಾದ್ಯಂತ ಬಿಗಿ ಬಂದೋಬಸ್ತ್; ಗಲಭೆ ಸಂಬಂಧ 62 ಮಂದಿ ಬಂಧನ
ಶಿವಮೊಗ್ಗ, ಡಿಸೆಂಬರ್ 4: ಶಿವಮೊಗ್ಗ ನಗರದಲ್ಲಿ ಗುರುವಾರ ನಡೆದ ಕೋಮು ಗಲಭೆಗೆ ಸಂಬಂಧ ಪಟ್ಟಂತೆ ಕೋಟೆ ಮತ್ತು ದೊಡ್ಡ ಪೇಟೆಯಲ್ಲಿ 10 ಪ್ರಕರಣ ದಾಖಲಾಗಿದ್ದು, ಶಾಂತಿ ನೆಲೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಐಜಿಪಿ ಎಸ್.ರವಿ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಾವಿರ ಜನ ಪೊಲೀಸರನ್ನು ನಿಯೋಜಿಸಲಾಗಿದೆ. ಚಿತ್ರದುರ್ಗ, ಹಾವೇರಿ, ದಾವಣಗೆರೆಯಿಂದ ಪೊಲೀಸರನ್ನು ಕರೆಸಲಾಗಿದೆ. 148 ಪ್ರದೇಶಗಳನ್ನು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಹೇಳಿದರು. ಗುರುವಾರ ಬಜರಂಗದಳ ಸಹ ಸಂಚಾಲಕ ನಾಗೇಶ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನಗರದ ಕೆಲವೆಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮುಂದೆ ಓದಿ...
9 ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಭದ್ರತೆ
9 ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹೊರಗಿನಿಂದ ಜನರು ಬಂದು ದೊಂಬಿ ಮಾಡದಂತೆ ಚೆಕ್ ಪೋಸ್ಟ್ ಬಂದೋಬಸ್ತ್ ಮಾಡಲಾಗಿದೆ. 22 ಚೀತ, 19 ಮೊಬೈಲ್ ಗಸ್ತು ಕಿರು ಸಂಚಾರದಲ್ಲೂ ಬಂದೋಬಸ್ತ್ ಮಾಡಲಾಗುತ್ತಿದೆ ಎಂದರು.
ಎರಡು ಗುಂಪಿನ ನಡುವೆ ಗಲಭೆ; ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿ
ಯಾವುದೇ ರೀತಿಯ ವದಂತಿಗಳಿಗೆ ಕಿವಿ ಕೊಡಬಾರದು, ವಾಟ್ಸ್ ಆಪ್ ಮತ್ತು ಸಾಮಾಜಿಕ ಜಾಲತಾಣದ ವಿಷಯಗಳಿಗೆ ಸಾರ್ವಜನಿಕರು ಮನ್ನಣೆ ನೀಡಬಾರದು, ಕೋಮುಗಲಭೆ ಕುರಿತು ಮಾಹಿತಿ ಇದ್ದರೆ ಹತ್ತಿರ ಪೊಲೀಸ್ ಠಾಣೆಗೆ ನೀಡಬೇಕು ಎಂದು ಕೋರಿದರು.
ಗಲಭೆ ಸಂಬಂಧ 62 ಜನರ ಬಂಧನ
ಈಗಾಗಲೇ ಗುರುವಾರ ನಡೆದ ಗಲಭೆ ಸಂಬಂಧ 62 ಜನರನ್ನು ಬಂಧಿಸಲಾಗಿದೆ. ನಾಗೇಶ್ ಮೇಲೆ ಹಲ್ಲೆ ಮಾಡಿದವರು ಮಾಸ್ಕ್ ಧರಿಸಿದ್ದರು. ಆದರೆ ಅವರ ಗುರುತು ಪತ್ತೆ ಮಾಡುತ್ತೇನೆಂದುನಾಗೇಶ್ ತಿಳಿಸಿದ್ದಾರೆ. ಅವರು ಗುಣಮುಖರಾದ ನಂತರ ಹಲ್ಲೆ ಮಾಡಿದವರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರೆಯಲಿದೆ ಎಂದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ಗಲಭೆಗೆ ಪೊಲೀಸ್ ಇಲಾಖೆಯೊಂದಿಗೆ ಜಿಲ್ಲಾಡಳಿತ ಸಹಕಾರ ನೀಡುತ್ತಿದ್ದು, 10 ಸ್ಪೆಷಲ್ ಮೆಜಿಸ್ಟ್ರೇಟ್ ನಿಯೋಜಿಸಲಾಗಿದೆ. ಶಾಂತಿ ನೆಲೆಸಲು ಕ್ರಮ ಜರುಗಿಸಲಾಗಿದೆ. ಮುಂಜಾಗ್ರತಾ ಕ್ರಮಕ್ಕೆ ಇಂದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ ಎಂದರು.
ಡಿ.5ರವರೆಗೂ ನಿಷೇಧಾಜ್ಞೆ
ಬಜರಂಗದಳ ಸಹ ಸಂಚಾಲಕ ನಾಗೇಶ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನಗರದ ಕೆಲವೆಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಡಿಸೆಂಬರ್ 3 ಗುರುವಾರ ಮಧ್ಯಾಹ್ನದಿಂದ ಶನಿವಾರ, ಡಿ. 5ರ ಬೆಳಿಗ್ಗೆ 10 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಹೀಗಾಗಿ ಹಲವೆಡೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಅವಶ್ಯಕತೆ ಇರುವ ಅಂಗಡಿಗಳನ್ನ ಹೊರತು ಪಡಿಸಿ ಉಳಿದ ಅಂಗಡಿಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ದೊಡ್ಡಪೇಟೆ ಕೋಟೆ ಮತ್ತು ತುಂಗಾ ನಗರ ಠಾಣೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಗಲಭೆ ನಡೆದಿದ್ದೇಕೆ?
ಗುರುವಾರ ಬೆಳಿಗ್ಗೆ ನೆಹರೂ ಕ್ರೀಡಾಂಗಣಕ್ಕೆ ವಾಕಿಂಗ್ ಗೆಂದು ಹೊರಟಿದ್ದ ಬಜರಂಗದಳ ಸಹ ಸಂಚಾಲಕ ನಾಗೇಶ್ ಮೇಲೆ ದುಷ್ಕರ್ಮಿಗಳು ಲಷ್ಕರ್ ಮೊಹಲ್ಲಾದಲ್ಲಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದರಿಂದಾಗಿ ಗಾಂಧಿಬಜಾರ್ನ ಚೋರ್ ಬಜಾರ್ನಲ್ಲಿ ಒಂದು ಕೋಮಿನ ಜನರು ಮತ್ತೊಂದು ಕೋಮಿನವರನ್ನು ಗುರಿಯಾಗಿಸಿಕೊಂಡು ಹಲವರನ್ನು ಅಟ್ಟಾಡಿಸಿ ಹೊಡೆದಿದ್ದರು. ಇದೇ ದ್ವೇಷದಲ್ಲಿ ಮತ್ತೊಂದು ಕೋಮು ರವಿವರ್ಮ ಬೀದಿಯಲ್ಲಿ ಗುಂಪುಗೂಡಿ ಪೊಲೀಸರ ಎದುರಿನಲ್ಲಿಯೇ ಮಚ್ಚು, ಲಾಂಗ್ ಮತ್ತು ಇತರೆ ಮಾರಕಾಸ್ತ್ರಗಳನ್ನು ಹಿಡಿದು ಹಲವು ವಾಹನಗಳನ್ನು ಜಖಂಗೊಳಿಸಿ ಭಯದ ವಾತಾವರಣ ಸೃಷ್ಟಿಸಿದ್ದರು.