ಶಿವಮೊಗ್ಗ ನಗರಸಭೆ ಚುನಾವಣೆ ಅಖಾಡ ಸಜ್ಜು: ಮೂರು ಪಕ್ಷಗಳ ಪೈಪೋಟಿ
ಶಿವಮೊಗ್ಗ, ಆಗಸ್ಟ್ 25: ಶಿವಮೊಗ್ಗ ನಗರಸಭೆ ಮಹಾನಗರ ಪಾಲಿಕೆಯಾಗಿ ಮಲ್ದರ್ಜೆಗೇರಿದ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಹೀಗಾಗಿ ಹೇಗಾದರೂ ಮಾಡಿ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಗಿ ಮೂರು ಪಕ್ಷಗಳೂ ಪಾಲಿಕೆ 35 ವಾರ್ಡ್ ಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬಳಿಕ ಮೂರು ಪಕ್ಷಗಳಲ್ಲಿಯೂ ಬಂಡಾಯದ ಬಿಸಿ ಆರಂಭವಾಗಿತ್ತು. ಆದರೆ ಬಹುತೇಕ ಬಂಡಾಯ ಅಭ್ಯರ್ಥಿಗಳನ್ನು ಕೂಲ್ ಮಾಡಿ ಮೂರು ಪಕ್ಷಗಳೂ ಬಂಡಾಯದ ಬಿಸಿಯಿಂದ ಹೊರಬಂದು ಗೆಲುವಿನತ್ತ ಗುರಿ ನೆಟ್ಟಿವೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆ ಪ್ರತಿಷ್ಠೆಯಾದ ಶಿವಮೊಗ್ಗ ಪಾಲಿಕೆ ಎಲೆಕ್ಷನ್
ಕಳೆದಬಾರಿ ಶಿವಮೊಗ್ಗ ನಗರಸಭೆಯ ಅಧಿಕಾರವನ್ನು ಬಿಜೆಪಿ ಪಕ್ಷ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಹಿಡಿದಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಿದ್ದವು.
ವಿಧಾನಸಭೆಯಲ್ಲಿ ಬಿಜೆಪಿ ಗೆದ್ದಿದೆ
ಈ ಬಾರಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಗೆಲುವು ಸಾಧಿಸಿದ್ದಾರೆ. ಜೊತೆಗೆ ಈಶ್ವರಪ್ಪ ಅವರಿಗೆ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಬಂದಿವೆ. ಹೀಗಾಗಿ ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ ಗಳ ಪೈಕಿ ಹೆಚ್ಚಿನ ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದು ಬಿಜೆಪಿ ಮಹಾನಗರ ಪಾಲಿಕೆ ಅಧಿಕಾರವನ್ನು ಸ್ವತಂತ್ರವಾಗಿ ಹಿಡಿಯಲಿದೆ ಎಂಬುದು ಬಿಜೆಪಿಯ ವಾದ.
ಬಿಜೆಪಿ ಪಾಠ ಕಲಿಸಲು ಕಾಂಗ್ರೆಸ್ ತಂತ್ರ
ಬಿಜೆಪಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿನ ಗೆಲುವಿನ ನಾಗಾಲೋಟ ಮುಂದುವರಿಸಲು ಶತಾಯಗತಾಯ ಪಯತ್ನ ನಡೆಸುತ್ತಿದೆ. ಆದರೆ ಬಿಜೆಪಿಗೆ ತಕ್ಕಪಾಠ ಕಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿವೆ.
ವಿಶ್ವಾಸದಲ್ಲಿ ಕಾಂಗ್ರೆಸ್
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಹೆಚ್ಚಿನ ಮತ ಗಳಿಸಿರಬಹುದು ಆದರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಿ ಹೆಚ್ಚಿನ ವಾರ್ಡ್ ಗಳಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದೆ. ಇನ್ನು ಜೆಡಿಎಸ್ ಸಹ ಒಂದಷ್ಟು ಸೀಟುಗಳನ್ನು ಗೆದ್ದು ಪಾಲಿಕೆಯ ಅಧಿಕಾರದಲ್ಲಿ ಪಾಲುಪಡೆಯಲು ಪ್ರಯತ್ನಿಸುತ್ತಿದೆ.
ಆಗಸ್ಟ್ 31ರಂದು ಚುನಾವಣೆ
ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮೂರು ಪಕ್ಷಗಳೂ ಶತಾಯಗತಾಯ ಪ್ರಯತ್ನಿಸುತ್ತಿವೆ. ಆಗಸ್ಟ್ 31 ರಂದು ನಡೆಯುವ ಚುನಾವಣೆಯಲ್ಲಿ ಮತದಾರ ಯಾವ ಅಭ್ಯರ್ಥಿಗೆ ಹರಸಿ ಅಧಿಕಾರಕ್ಕೇರಿಸಲಿದ್ದಾನೆ ಎಂಬುದು ಮಾತ್ರ ನಿಗೂಢವಾಗಿದೆ. ಈ ಬಾರಿಯಾದರೂ ಯಾವುದಾದರೂ ಪಕ್ಷ ಸ್ವತಂತ್ರವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.