'ಶಿವಮೊಗ್ಗದಲ್ಲಿ ಈ ಬಾರಿ ಹೋರಿ ಬೆದರಿಸುವ ಸ್ಪರ್ಧೆ ನಿಷೇಧ'
ಶಿವಮೊಗ್ಗ, ಅಕ್ಟೋಬರ್ 21 : "ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ದೆಯನ್ನು ನಿಷೇಧಿಸಲಾಗಿದೆ. ಆಚರಿಸಲು ಮುಂದಾದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಎಚ್ಚರಿಕೆ ನೀಡಿದ್ದಾರೆ.
ಹೋರಿ ಬೆದರಿಸುವ ಸ್ಪರ್ಧೆಗೆ ಶಿವಮೊಗ್ಗ ಜಿಲ್ಲಾಡಳಿತ ಬ್ರೇಕ್
ಕಳೆದ ವರ್ಷ ಜಿಲ್ಲೆಯಲ್ಲಿ ಇದೇ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರಿಂದ ಇಲ್ಲಿನ ಜಿಲ್ಲಾಡಳಿತ ಈ ಕ್ರಮಕೈಗೊಂಡಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, "ದೀಪಾವಳಿ ಹಬ್ಬದ ನಂತರ ಸಂಕ್ರಾಂತಿ ಹಬ್ಬದ ಒಳಗೆ ನಡೆಯುವ ಹೋರಿ ಬೆದರಿಸಿವ ಹಬ್ಬ ಶಿಕಾರಿಪುರ, ಶಿರಾಳಕೊಪ್ಪ ಮತ್ತು ಸೊರಬ ತಾಲೂಕಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಕುರಿತು ಶಿಕಾರಿಪುರದಲ್ಲಿ ಸಭೆ ನಡೆಸಿ ಗ್ರಾಮದ ಮುಖಂಡರಿಗೆ ಹಬ್ಬ ನಡೆಸದಂತೆ ಮನವರಿಕೆ ಮಾಡಿಕೊಡಲಾಗಿದೆ. ಒಂದು ವೇಳೆ ಆಚರಿಸಲು ಮುಂದಾದವರನ್ನೇ ನೇರ ಹೊಣೆ ಮಾಡಿ ಸ್ವಯಂ ಪ್ರಕರಣವನ್ನು ದಾಖಲಿಸಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಕಳೆದ ವರ್ಷ ಆಯನೂರು ಆನವಟ್ಟಿ ಮತ್ತು ಸೊರಬಗಳಲ್ಲಿ ಅನಾಹುತಗಳಾಗಿತ್ತು. ಹಾಗಾಗಿ ಈ ಬಾರಿಯೂ ಹೋರಿ ಹಬ್ಬದ ಆಚರಣೆ ನಿಷೇಧಿಸಲಾಗಿದೆ ಎಂದರು.
ಏನಿದು ಹೋರಿ ಬೆದರಿಸುವ ಸ್ಪರ್ಧೆ: ರಸ್ತೆಯ ಮಧ್ಯೆ ಶೃಂಗರಿಸಲಾದ ಹೋರಿಗಳನ್ನು ಒಂದೊಂದಾಗಿ ಬಿಡಲಾಗುತ್ತದೆ. ಆ ಹೋರಿಯು ತನ್ನ ಕೊರಳಿನಲ್ಲಿರುವ ಕೊಬ್ಬರಿಯ ಮಾಲೆಯನ್ನು ಕಳೆದುಕೊಳ್ಳಬಾರದು. ಕಳೆದುಕೊಂಡರೆ ಆ ಸ್ಪರ್ಧೆಯಲ್ಲಿ ಆ ಹೋರಿ ಸೋತಂತೆ.
ಹೆಚ್ಚು ಬಾರಿ ಗೆದ್ದ ಹೋರಿಗೆ ಬಹುಮಾನ ನೀಡಲಾಗುತ್ತದೆ. ಈ ಹೋರಿಗಳನ್ನು ಹಿಡಿಯಲು ನೂರಾರು ಯುವಕರ ದಂಡೇ ಸೇರಿರುತ್ತದೆ. ಹೆಚ್ಚು ಕೊಬ್ಬರಿ ಮಾಲೆಯನ್ನು ಕಿತ್ತುಕೊಂಡವರಿಗೆ ಬಹುಮಾನ ಕೊಡಲಾಗುತ್ತದೆ.
ಸುತ್ತಮುತ್ತಲಿನ ಗ್ರಾಮದ ನೂರಾರು ಹೋರಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ರೈತರು ಎತ್ತುಗಳಿಗೆ ರಿಬ್ಬನ್, ಬಲೂನ್ ಹಾಗೂ ಕೊಬ್ಬರಿ ಕಟ್ಟಿ ಹೋರಿಯನ್ನ ಓಡಲು ಬಿಡುತ್ತಾರೆ.
ನೂರಾರು ಯುವಕರ ದಂಡು ಜಿಂಕೆಯಂತೆ ಓಡುವ ಹೋರಿಗಳನ್ನ ಹಿಡಿಯಲು ಮುಂದಾಗುತ್ತಾರೆ. ಹೋರಿಯ ಬಾಲವನ್ನ ಹಿಡಿದು ಓಡುವ ದೃಶ್ಯ ನೋಡಿಗರನ್ನ ಅಯೋ ಪಾಪಾ ಎನ್ನುವಂತೆ ಮಾಡುತ್ತದೆ.
ಮೈ ಮೇಲೆ ಜಿಗಿದು ಬರುವ ಹೋರಿಗಳಿಗೆ ಹೆದರಿ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ನಿಂತಿರುವ ಪ್ರೇಕ್ಷಕರು, ಹೋರಿಗಳನ್ನ ಹಿಡಿದುಕೊಂಡು ಓಡುವ ದೃಶ್ಯಗಳು, ಹೋರಿಯ ಕಾಲಿನ ಕೆಳಗೆ ಸಿಕ್ಕಿಹಾಕಿಕೊಳ್ಳವ ಯುವಕರು, ಹೋರಿಗಳನ್ನ ಹಿಡಿದು ಕೊಬ್ಬರಿ ಮಾಲೆಯನ್ನು ಕಿತ್ತುಕೊಳ್ಳುವ ಯುವಕರು ಹೀಗೆ ಎಲ್ಲಾ ದೃಶ್ಯಗಳು ನೋಡುಗರ ಮೈ ಜುಮ್ಮೆನಿಸುತ್ತದೆ.
ಯಾರ ಕೈಗೂ ಸಿಗದೇ ಅಖಾಡದಿಂದ ಎಲ್ಲರನ್ನೂ ರಂಜಿಸಿ, ಹೆದರಿಸಿ ಮುನ್ನುಗ್ಗಿ ಬಹುಮಾನ ಪಡೆದುಕೊಳ್ಳವ ಹೋರಿಗಳು ನೋಡುಗರನ್ನು ರೋಮಾಂಚನಗೊಳಿಸುತ್ತವೆ.
ಈ ಹೋರಿ ಓಡಿಸುವ ಸ್ಪರ್ಧೆಗೆ ಆಗಮಿಸಿದ ಎಲ್ಲಾ ಪ್ರೇಕ್ಷಕರು ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸುತ್ತಾರೆ. ಆದರೆ, ಇದೆಲ್ಲದಕ್ಕೆ ಇದೀಗ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಜನರಲ್ಲಿ ನಿರಾಸೆ ಮೂಡಿಸಿದೆ.