ಶಿವಮೊಗ್ಗ; ಸರ್ಕಾರಿ ಶಾಲೆಯಲ್ಲಿ ಓದಿದ ಈತ ರಾಜ್ಯಕ್ಕೆ ಟಾಪರ್
ಶಿವಮೊಗ್ಗ, ಆಗಸ್ಟ್ 09; ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರಿಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ವಿದ್ಯಾರ್ಥಿಯೊಬ್ಬ ತಕ್ಕ ಉತ್ತರ ನೀಡಿದ್ದಾನೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾನೆ.
ತೀರ್ಥಹಳ್ಳಿಯ ಬಿ. ಎಸ್. ಶ್ರೀಷ ಈ ಭಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದಿದ್ದಾನೆ. ಶ್ರೀಷ ತನಿಕಲ್ ಸರ್ಕಾರಿ ಕಾಂಪೊಸಿಟ್ ಹೈ ಸ್ಕೂಲ್ನ ವಿದ್ಯಾರ್ಥಿ. ತನಿಕಲ್ ನಿವಾಸಿ ಬಿ. ಎ. ಸತೀಶ್ ಮತ್ತು ಸಿ. ಎಸ್. ವೀಣಾ ದಂಪತಿಯ ಪುತ್ರ.
ಎಸ್ಎಸ್ಎಲ್ಸಿ ಫಲಿತಾಂಶ 2021 ಪ್ರಕಟ: ವಿಶೇಷ ಮುಖ್ಯಾಂಶಗಳು
ಸರ್ಕಾರಿ ಶಾಲೆಯಲ್ಲೇ ಓದು; ಶ್ರೀಷ ಆರಂಭದಿಂದಲೂ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದಾನೆ. ಎಸ್ಎಸ್ಎಲ್ಸಿಗಾಗಿ ಹೆಚ್ಚು ಮುತುವರ್ಜಿ ವಹಿಸಿ ಓದಿದ್ದಾರೆ. "ಟೈಮ್ ಟೇಬಲ್ ಮಾಡಿಕೊಂಡು ಓದುತ್ತಿದ್ದೆ. ಹಾಗಾಗಿ ಎಲ್ಲವನ್ನು ಸುಲಭವಾಗಿ ಓದಲು ಸಾಧ್ಯವಾಯಿತು" ಅನ್ನುತ್ತಾನೆ ಶ್ರೀಷ.
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಚೆಕ್ ಮಾಡೋದು ಹೇಗೆ?
"ಪೋಷಕರು, ಶಿಕ್ಷಕರ ಪ್ರೋತ್ಸಾಹದಿಂದ 625 ಅಂಕಗಳಿಸಲು ಸಾಧ್ಯವಾಯಿತು. ಅಮ್ಮ ಪ್ರತಿದಿನ ನಾನು ಓದು ಮುಗಿಸುವವರೆಗೆ ಜೊತೆಗೆ ಇರುತ್ತಿದ್ದರು. ಆಯಾಸವಾಯಿತು ಅಂದಾಗಲೆಲ್ಲ ಟೀ ಮಾಡಿಕೊಡುತ್ತಿದ್ದರು. ಇನ್ನು, ಶಾಲೆಯಲ್ಲಿ ಶಿಕ್ಷಕರು ಕೂಡ ತುಂಬ ನೆರವಾಗಿದ್ದಾರೆ. ಹಿಂದಿ ಶಿಕ್ಷಕ ವಿನಾಯಕ್ ಹೆಚ್ಚು ಪ್ರೋತ್ಸಾಹ ನೀಡಿದರು. ಹೇಗೆ ಓದಬೇಕು ಎಂದು ಆಗಾಗ ತಿಳಿಸುತ್ತಿದ್ದರು" ಎಂದರು ಶ್ರೀಷ.
ಶಾಲೆ ತೊರೆದ ಮಕ್ಕಳ ಪತ್ತೆಗೆ ಮನೆ- ಮನೆ ಸಮೀಕ್ಷೆ ನಡೆಸಲು ಬಿಬಿಎಂಪಿಗೆ ಸೂಚನೆ
ಸರ್ಕಾರಿ ಶಾಲೆಯಾಗಲಿ, ಖಾಸಗಿ ಶಾಲೆಯಾಗಲಿ ಉತ್ತಮ ಶಿಕ್ಷಕರು ಇರಬೇಕು. ಪೋಷಕರ ಬೆಂಬಲ ಬೇಕು. ಆಗ ಹೆಚ್ಚು ಅಂಕ ಗಳಿಸುವುದಕ್ಕೆ ಸಾಧ್ಯವಾಗಲಿದೆ. ಪಿಯುಸಿಯಲ್ಲಿ ಪಿಸಿಎಂಸಿ ಆಯ್ಕೆ ಮಾಡಿಕೊಂಡು, ಕಂಪ್ಯೂಟರ್ ಇಂಜಿನಿಯರಿಂಗ್ ಮಾಡುವ ಗುರಿ ಹೊಂದಿದ್ದಾರೆ ಶ್ರೀಷ.
ಜಿಲ್ಲೆಯಲ್ಲಿ ಮತ್ತಿಬ್ಬರು ಟಾಪರ್ಸ್; ಸಾಗರ ತಾಲೂಕು ಮಡಸೂರು ಗ್ರಾಮದ ಅಭೀಷಾ ಭಟ್ 625 ಅಂಕಗಳನ್ನು ಪಡೆದಿದ್ದಾರೆ. ಈಕೆ ಸಾಗರದ ಸೊರಬ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ಮಡಸೂರಿನ ಶ್ರೀಪಾದ್ ಭಟ್ ಮತ್ತು ಸಂಧ್ಯಾ ದಂಪತಿಯ ಪುತ್ರಿ.
"625 ಅಂಕಗಳು ಬಂದಿರುವುದಕ್ಕೆ ಖುಷಿಯಾಗುತ್ತಿದೆ. ಚನ್ನಾಗಿ ಓದಿಕೊಂಡಿದ್ದೆ. ಪಿಯುಸಿಯಲ್ಲಿ ಪಿಸಿಎಂಸಿ ತೆಗೆದುಕೊಂಡು ಮುಂದೆ ಇಂಜಿನಿಯರ್ ಆಗಬೇಕು ಅಂದುಕೊಂಡಿದ್ದೇನೆ" ಎಂದು ಅಭೀಷಾ ಭಟ್ ಸಂತಸ ಹಂಚಿಕೊಂಡರು.
ಶಿವಮೊಗ್ಗದ ಗೋಪಾಳದ ವಿನಯ್ ಜಿ. ಹೆಬ್ಬಾರ್ ಕೂಡ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಗೋಪಾಳದ ಶ್ರೀ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಯಾದ ವಿನಯ್ ಹೆಬ್ಬಾರ್ ತಂದೆ ಗಣೇಶ್ ಹೆಬ್ಬಾರ್ ಉದ್ಯಮಿ. ತಾಯಿ ವೇದಾವತಿ ಹೆಬ್ಬಾರ್ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ.
"ಪರೀಕ್ಷೆಗಾಗಿ ವಿಶೇಷ ಸಿದ್ಧತೆ ಮಾಡಿಕೊಂಡಿರಲಿಲ್ಲ. ಆದರೆ ಪರೀಕ್ಷೆಗೆ ಹತ್ತು ದಿನ ಮೊದಲು ಸ್ವಲ್ಪ ನಿಗಾ ವಹಿಸಿ ಓದಿ, ಮನನ ಮಾಡಿಕೊಂಡೆ. ಶಿಕ್ಷಕರು, ಪೋಷಕರ ತಿಳಿಸಿದಂತೆ ಓದಿಕೊಂಡೆ. ಈಗ 625 ಅಂಕ ಗಳಿಸಿರುವುದಕ್ಕೆ ಖುಷಿಯಾಗುತ್ತಿದೆ" ಎಂದು ವಿನಯ್ ಹೆಬ್ಬಾರ್ ತಿಳಿಸಿದರು.
ಕೋವಿಡ್ ಭೀತಿಯ ನಡುವೆ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿದೆ. ವಿದ್ಯಾರ್ಥಿಗಳು ಆತಂಕದಲ್ಲೇ ಪರೀಕ್ಷೆಗೆ ಹಾಜರಾದರೂ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಸೋಮವಾರ ಎಸ್ಎಸ್ಎಲ್ಸಿ ಫಲಿತಾಂಶವನ್ನು ಪ್ರಕಟಿಸಿದರು. ರಾಜ್ಯದಲ್ಲಿ 157 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. 8,71,443 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಬ್ಬ ವಿದ್ಯಾರ್ಥಿನಿ ಹೊರತುಪಡಿಸಿ ಉಳಿದವರು ತೇರ್ಗಡೆಯಾಗಿದ್ದಾರೆ.
ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳು 'ಎ' ಗ್ರೇಡ್ ಪಡೆದಿವೆ. ಶೇ 75ರಿಂದ ಶೇ 100ರಷ್ಟು ಫಲಿತಾಂಶವನ್ನು ಪಡೆದಿವೆ. 204 ತಾಲೂಕುಗಳ ಪೈಕಿ ಒಂದು ತಾಲೂಕು ಮಾತ್ರ 'ಬಿ' ಗ್ರೇಡ್ ಪಡೆದಿವೆ.