"ಮೂಲ-ವಲಸೆ ಬಿಜೆಪಿಗರ ನಡುವೆ ಗೊಂದಲವಿಲ್ಲ; ಇದೆಲ್ಲ ಮಾಧ್ಯಮ ಸೃಷ್ಟಿ"
ಶಿವಮೊಗ್ಗ, ಫೆಬ್ರವರಿ 09: "ಸಚಿವ ಸಂಪುಟ ವಿಸ್ತರಣೆ ಆಗಿದ್ದು, ನಾಳೆ ಬೆಳಿಗ್ಗೆ ಖಾತೆ ಹಂಚಿಕೆ ಮಾಡುತ್ತೇನೆ. ನಿನ್ನೆ ಶನಿವಾರ, ಇಂದು ಭಾನುವಾರ ಆದ್ದರಿಂದ ಖಾತೆ ಹಂಚಿಕೆ ಮಾಡಿಲ್ಲ" ಎಂದು ಹೇಳಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ.
ಜಿಲ್ಲೆಯ ಶಿಕಾರಿಪುರ ಪಟ್ಟಣದ ತಮ್ಮ ಸ್ವಗೃಹದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಉಮೇಶ್ ಕತ್ತಿ ಅವರಿಗೆ ಮೊದಲನೇ ಪಟ್ಟಿಯಲ್ಲೇ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಸಂಪುಟಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಸಂಪುಟ ವಿಸ್ತರಣೆ ಬಳಿಕ ಕತ್ತಿ ನಮ್ಮ ನಿವಾಸಕ್ಕೆ ಭೇಟಿ ನೀಡಿದ್ದರು. ನಾನು ಅವರೊಂದಿಗೆ ಮಾತನಾಡಿದ್ದೇನೆ. ಮುಂದಿನ ದಿನದಲ್ಲಿ ಅವಕಾಶ ಮಾಡಿಕೊಡಲಾಗುವುದು" ಎಂದರು.
ಸಂಪುಟ ವಿಸ್ತರಣೆ; ಯಾರಾಗಲಿದ್ದಾರೆ ಬೆಂಗಳೂರು ನಗರಾಭಿವೃದ್ದಿ ಸಚಿವ?
"ಆರಗ ಜ್ಞಾನೇಂದ್ರ ಸೇರಿದಂತೆ ಹಲವರು ಸಚಿವ ಸ್ಥಾನದ ಅಪೇಕ್ಷಿತರಿದ್ದಾರೆ. ಅನಿರ್ವಾಯ ಸ್ಥಿತಿ ಇದೆ ಎಂದು ಎಲ್ಲರಿಗೂ ಮನವರಿಕೆ ಮಾಡಿದ್ದೇನೆ. ಮೂಲ ಬಿಜೆಪಿಗರು ಹಾಗೂ ವಲಸೆ ಬಿಜೆಪಿಗರ ನಡುವೆ ಸಚಿವ ಸ್ಥಾನದ ಬಗ್ಗೆ ಗೊಂದಲವಿಲ್ಲ. ಇದು ಮಾಧ್ಯಮ ಸೃಷ್ಟಿ" ಎಂದು ಆರೋಪಿಸಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಂಗ್ ಮೇಕರ್ ಆಗುತ್ತಾರೆ ಎಂಬ ಹೊರಟ್ಟಿ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, "ಸಿದ್ದರಾಮಯ್ಯ, ಕುಮಾರಸ್ವಾಮಿ, ಹೊರಟ್ಟಿ ಅವರು ರಾಜಕೀಯ ಕಾರಣಕ್ಕಾಗಿ ಹೇಳಿಕೆ ಕೊಡುತ್ತಿರುತ್ತಾರೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯಿಸುವುದಿಲ್ಲ. ರಾಜ್ಯದ ಅಭಿವೃದ್ಧಿ ಕಡೆ ಏನಿದ್ದರೂ ನನ್ನ ಗಮನ. ಬಜೆಟ್ ಸಿದ್ಧತೆ ನಡೆಯುತ್ತಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ನೀಡಲಾಗುವುದು "ಎಂದರು
2 ಹಂತದಲ್ಲಿ ಸಂಪುಟ ವಿಸ್ತರಣೆಯಾಯ್ತು, ಸಚಿವ ಸ್ಥಾನ ವಂಚಿತರ ಪಟ್ಟಿ
ಮಂಗನ ಕಾಯಿಲೆ ಕುರಿತು ಲ್ಯಾಬ್ ಸ್ಥಾಪನೆಗೆ ಸಾಗರ ತಾಲೂಕಿನಲ್ಲಿ ಜಾಗವನ್ನು ನಿಗದಿ ಮಾಡಲಾಗಿದ್ದು ಅಲ್ಲಿಯೇ ಸ್ಥಾಪನೆಯಾಗುತ್ತದೆ. ಶಿವಮೊಗ್ಗ ಜಿಲ್ಲೆಗೆ ಸಾಕಷ್ಟು ಹಣ ಕೊಟ್ಟಾಗಿದ್ದು ವಿಮಾನ ನಿಲ್ದಾಣ ರೈಲ್ವೆ, ಎಲ್ಲಾ ರೀತಿಯ ಅನುದಾನ ನೀಡಲಾಗಿದೆ. ಬಜೆಟ್ ನಲ್ಲಿ ವಿಷೇಶವಾಗಿ ಜಿಲ್ಲೆಗೆ ಕೊಡುವಂಥದ್ದಿಲ್ಲ ಎಂದು ಮಾಹಿತಿ ನೀಡಿದರು.