ವಾಟ್ಸಪ್ ಮೂಲಕ ತಲಾಖ್ ನೀಡಿದ ದುಬೈ ಗಂಡ; ಶಿವಮೊಗ್ಗದಲ್ಲಿ ದಾಖಲಾಯಿತು ಮೊದಲ ಕೇಸ್
ಶಿವಮೊಗ್ಗ, ಸೆಪ್ಟೆಂಬರ್ 19: ಪ್ರೀತಿಸಿ ಮದುವೆಯಾಗಿ 20 ವರ್ಷಗಳಿಂದ ಯಾವುದೇ ಸಮಸ್ಯೆ ಇಲ್ಲದೆ ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದ ಶಿವಮೊಗ್ಗದ ಮುಸ್ಲಿಂ ದಂಪತಿ ನಡುವೆ ಬಿರುಕು ಮೂಡಿದ್ದು, ಪತಿ ಮುಸ್ತಫಾ ವಾಟ್ಸಪ್ ಮೂಲಕ ತಲಾಖ್ ನೀಡಿದ್ದಾನೆ.
20 ವರ್ಷಗಳ ಹಿಂದೆ ಲಷ್ಕರ್ ಮೊಹಲ್ಲಾ ಬಡಾವಣೆಯ ಆಯೆಷಾ ಸಿದ್ದಕಿ ಮತ್ತು ಟ್ಯಾಂಕ್ ಮೊಹಲ್ಲಾ ನಿವಾಸಿ ಮುಸ್ತಫಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಪತಿ ದುಡಿಮೆಗಾಗಿ ದುಬೈನಲ್ಲಿದ್ದು, ಗರ್ಭಿಣಿಯಾಗಿದ್ದ ಆಯೆಷಾ ಪತಿ ಮಾತು ಕೇಳಿ ಗರ್ಭಪಾತವನ್ನೂ ಮಾಡಿಸಿಕೊಂಡಿದ್ದಳು. ನಂತರ ಮಕ್ಕಳಾಗದೇ, ಪತಿ ಒಪ್ಪಿಗೆ ಪಡೆದು ಹೆಣ್ಣು ಮಗುವನ್ನು ದತ್ತುಪಡೆದುಕೊಂಡಿದ್ದಳು.
ಬೆಂಗಳೂರಲ್ಲಿ ಮೊದಲ ತಲಾಖ್ ಕೇಸ್, ಟೆಕ್ಕಿ ಪತಿ ವಿರುದ್ಧ ಎಫ್ಐಆರ್
ಮುಸ್ತಫಾ ಕೂಡ ಇತ್ತೀಚೆಗೆ ಬಂದು ಪತ್ನಿ, ಮಗಳನ್ನು ಮಾತಾಡಿಸಿಕೊಂಡು ಹೋಗಿದ್ದ. ನಂತರ ಅದೇನಾಯಿತೋ ತಿಳಿಯದು, ಹೆಂಡತಿ ಹಣ ಕೇಳಿದರೆ ದತ್ತು ಮಗಳನ್ನು ಬಿಟ್ಟುಬಿಡು, ನನ್ನನ್ನ ಕೇಳಬೇಡ ಎಂದು ಬೇಜವಾಬ್ದಾರಿಯಾಗಿ ವರ್ತಿಸಲು ಆರಂಭಿಸಿದ್ದ. ಈ ವರ್ತನೆ ಮುಂದುವರೆದಿದ್ದು, ಆ.28ರಂದು ದುಬೈನಿಂದ ಮುಸ್ತಫಾ ವಾಟ್ಸಪ್ ನಲ್ಲಿ ಮೂರು ಬಾರಿ ಆಯೆಷಾಳಿಗೆ ತಲಾಖ್ ನೀಡಿದ್ದಾನೆ.
ವಾಟ್ಸಪ್ ಮೂಲಕ ನೀಡಲಾದ ತಲಾಖ್ ವಿರುದ್ಧ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಗಂಡನ ಈ ವರ್ತನೆ ಕಂಡು ಹೆಂಡತಿ ಮಹಿಳಾ ಪೊಲೀಸ್ ಗೆ ದೂರು ನೀಡಿದ್ದಾರೆ. ಪ್ರಕರಣ ಸಂಖ್ಯೆ 64/19ರಲ್ಲಿ ಎಫ್ಐಆರ್ ದಾಖಲಾಗಿದೆ. ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಬಿಲ್ ಪಾಸ್ ಮಾಡಿದ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ತ್ರಿವಳಿ ತಲಾಖ್ ವಿರುದ್ಧ ಪ್ರಕರಣವೊಂದು ದಾಖಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮೊದಲ ತ್ರಿವಳಿ ತಲಾಖ್ ಪ್ರಕರಣ, ಆರೋಪಿ ಬಂಧನ
ರಾಜ್ಯದಲ್ಲಿ ಮೊದಲಿಗೆ ಬೆಳಗಾವಿಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಬೆಂಗಳೂರು, ಈಗ ಶಿವಮೊಗ್ಗದಲ್ಲಿ ಮೂರನೇ ಪ್ರಕರಣ ದಾಖಲಾಗಿದೆ.