ಸಿಗಂದೂರು ದೇವಾಲಯ ಸಲಹಾ ಸಮಿತಿ ಮೊದಲ ಸಭೆಯಲ್ಲಿ ತೀರ್ಮಾನವಾಗಿದ್ದೇನು?
ಶಿವಮೊಗ್ಗ, ಅಕ್ಟೋಬರ್ 30: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ನಡೆದ ಅಹಿತಕರ ಘಟನೆ ನಂತರ ಮೇಲುಸ್ತುವಾರಿ ಹಾಗೂ ಸಲಹಾ ಸಮಿತಿಯ ಮೊಟ್ಟ ಮೊದಲ ಸಭೆ ಗುರುವಾರ ನಡೆದಿದೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಸಾಗರ ಶಾಸಕ ಹರತಾಳು ಹಾಲಪ್ಪ ಅವರುಗಳ ನೇತೃತ್ವದಲ್ಲಿ ಸಿಂಗದೂರು ಚೌಡೇಶ್ವರಿ ದೇವಾಲಯದ ಕುರಿತು ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸಿಗಂದೂರು ದೇವಾಲಯ ಉಸ್ತುವಾರಿ ಸಮಿತಿ ರಚನೆಗೆ ಜಿಲ್ಲಾಡಳಿತ ಆದೇಶ
ಪ್ರಮುಖ ನಿರ್ಧಾರಗಳು:
*ಪ್ರತಿ ತಿಂಗಳಿಗೊಮ್ಮೆ ಮೇಲುಸ್ತುವಾರಿ, ಸಲಹಾ ಸಮಿತಿ ಸಭೆ ನಡೆಸಬೇಕು.
*ದೇವಾಲಯಕ್ಕೆ ದಾನ ರೂಪದಲ್ಲಿ ಬರುವ ಹಣದ ಲೆಕ್ಕ ಇರಿಸಬೇಕು.
*ಪಾರದರ್ಶಕತೆ ಕಾಪಾಡಲು ಭಕ್ತರಿಗೆ ಕೌಂಟರ್'ನಲ್ಲಿ ರಸೀದಿ ನೀಡಬೇಕು.
*ದಾನ ಹಾಗೂ ಹರಕೆಯ ಹಣದ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿ, ಸಾಗರ ಉಪ ವಿಭಾಗಾಧಿಕಾರಿ ಅವರ ಮೂಲಕ ಲೆಕ್ಕ ಇರಿಸಬೇಕು.
*ಧರ್ಮದರ್ಶಿ ರಾಮಪ್ಪ ಹಾಗೂ ಅರ್ಚಕ ಶೇಷಗಿರಿ ಭಟ್ಟರು ಈ ಹಿಂದಿನಂತೆ ತಮ್ಮ ಧಾರ್ಮಿಕ ಕಾರ್ಯ ಮುಂದುವರೆಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದ ಮೊದಲ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದೇ ಅಕ್ಟೋಬರ್ 16ರಂದು ದೇಗುಲದಲ್ಲಿ ಪ್ರಧಾನ ಅರ್ಚಕ ಶೇಷಗಿರಿ ಭಟ್ ಮತ್ತು ಭಕ್ತರ ನಡುವೆ ಗದ್ದಲ ನಡೆದಿತ್ತು. ಬಳಿಕ ಶಿವಮೊಗ್ಗ ಜಿಲ್ಲಾಧಿಕಾರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ನಂತರ ದೇವಾಲಯವನ್ನು ಮುಜರಾಯಿ ಇಲಾಖೆಗೆ ನೀಡುವ ಮಾತು ಕೇಳಿಬಂದಿತ್ತು. ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು.