ತಂದೆ ಅಂತಿಮ ದರ್ಶನ ಪಡೆದ ಶಂಕಿತ ಉಗ್ರ ಮಾಜ್ ಮುನೀರ್
ಶಿವಮೊಗ್ಗ, ಸೆಪ್ಟೆಂಬರ್ 24: ನಿಷೇಧಿಕ ಉಗ್ರ ಸಂಘಟನೆಯ ಜೊತೆ ನಂಟಿರುವ ಶಂಕೆಯ ಮೇಲೆ ಬಂಧಿತನಾಗಿದ್ದ ಮಾಜ್ ಮುನೀರ್ ತಂದೆ ಮುನೀರ್ ಅಹಮದ್ ಮಂಗಳೂರಿನಲ್ಲಿ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಶನಿವಾರ ಮುನೀರ್ ಅಹಮದ್ ಅಂತ್ಯಕ್ರಿಯೆ ಪಟ್ಟಣದ ಸೊಪ್ಪುಗುಡ್ಡೆ ಖಬರ ಸ್ಥಾನದಲ್ಲಿ ನೆರವೇರಿದೆ. ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಸಿ ಬಂಧಿತನಾಗಿರುವ ಪುತ್ರ ಮಾಝ್ ಮುನೀರ್ಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.
ಬಂಧಿತ ಮಾಜ್ ಮುನೀರ್ಗೆ ಅಂತಿಮ ದರ್ಶನಕ್ಕೆ ಕಾಲವಕಾಶ ಕಲ್ಪಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದ ಮಾಜ್ನನ್ನು ಶಿವಮೊಗ್ಗ ಗ್ರಾಮಾಂತರ ಠಾಣೆಯಿಂದ ಬಿಗಿ ಬಂದೋಬಸ್ತ್ ನಲ್ಲಿ ಕರೆದೊಯ್ಯಲಾಯಿತು. ತೀರ್ಥಹಳ್ಳಿಯ ಮನೆಗೆ ಮಾಜ್ ಬರುತ್ತಿದ್ದಂತೆ ಕುಟುಂಬದವರು ಆಕ್ರಂದನ ಮುಗಿಲು ಮುಟ್ಟಿತು. ಅಂತಿಮ ದರ್ಶನದ ವೇಳೆ ದುಃಖ ತಡೆಯಲಾರೆದ ಮಾಜ್ ಅತ್ತಿದ್ದಾನೆ. ಸುಮಾರು ಅರ್ಧ ಗಂಟೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ ಪೊಲೀಸರು, ಆತನನ್ನು ಪುನಃ ಶಿವಮೊಗ್ಗಕ್ಕೆ ಕರೆತಂದಿದ್ದಾರೆ.
Breaking:ಶಂಕಿತ ಉಗ್ರ ಮಾಜ್ ಮುನೀರ್ ತಂದೆ ಹೃದಯಾಘಾತದಿಂದ ನಿಧನ
ತೀರ್ಥಹಳ್ಳಿ ಮೀನು ಮಾರುಕಟ್ಟೆ ಬಳಿ ಮಾಜ್ ಮುನೀರ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾಜ್ ನನ್ನು ಕರೆತರುತ್ತಿದ್ದ ಹಿನ್ನೆಲೆ ಅವರ ಮನೆ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮಾಜ್ನನ್ನು ಕರೆ ತರುತ್ತಿದ್ದಂತೆ ಮನೆಯಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಇನ್ನು, ಮಾಜ್ ಭೇಟಿಯ ವೇಳೆ ಕುಟುಂಬದವರು ಮತ್ತು ಕೆಲವು ಆಪ್ತರ ಹೊರತು ಉಳಿದವರಿಗೆ ಮನೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಇತ್ತ ಮುನೀರ್ ಅಹಮದ್ ಅವರ ಅಂತ್ಯಕ್ರಿಯೆ ತೀರ್ಥಹಳ್ಳಿಯಲ್ಲಿ ನೆರವೇರಿತು. ತೀರ್ಥಹಳ್ಳಿ ಪಟ್ಟಣ ಮತ್ತು ವಿವಿಧೆಡೆಯ ಪರಿಚಿತರು, ಸಂಬಂಧಿಕರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು. ಸಮೀಪದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ನಂತರ ಖಬರ್ ಸ್ಥಾನದಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ತೀರ್ಥಹಳ್ಳಿಯಲ್ಲಿ ಉತ್ತಮ ಹೆಸರುಗಳಿಸಿದ್ದ ಅಹಮ್ಮದ್
ಮುನೀರ್ ಅಹಮದ್ ಮತ್ತು ಅವರ ಕುಟುಂಬ ತೀರ್ಥಹಳ್ಳಿಯಲ್ಲಿ ಉತ್ತಮ ಹೆಸರು ಹೊಂದಿದೆ. ಮುನೀರ್ ಅಹಮದ್ ಅವರ ತಂದೆ ಸಾಬ್ಜಾನ್ ಸಾಬ್ ಅವರು ತೀರ್ಥಹಳ್ಳಿಯಲ್ಲಿ ಪ್ರಮುಖ ಮೀನು ವ್ಯಾಪಾರಿಯಾಗಿದ್ದರು. ಹಾಗಾಗಿ ಪಟ್ಟಣ ಮಾತ್ರವಲ್ಲದೆ ಸುತ್ತಮುತ್ತಲ ಹಳ್ಳಿಗಳ ಜನಕ್ಕೂ ಚಿರಪರಿಚಿತವಾಗಿದ್ದರು. ಪುರಸಭೆ ಚುನಾವಣೆಗೆ ಸ್ಪರ್ಧೆ ಮಾಡಿ, ಗೆಲುವು ಸಾಧಿಸಿ ಸದಸ್ಯರಾಗಿದ್ದರು. ಮುನೀರ್ ಅಹಮದ್ ಅವರು ತಂದೆಯ ಹಾದಿಯಲ್ಲೇ ಉತ್ತಮ ಹೆಸರು ಮತ್ತು ಜನರೊಂದಿಗೆ ಒಡನಾಟ ಹೊಂದಿದ್ದರು.
ಮೀನು ಮಾರುಕಟ್ಟೆ ಬಂದ್ ಮಾಡಿ ಗೌರವ
ಮುನೀರ್ ಅಹಮದ್ ಅವರ ನಿಧನದ ವಿಚಾರ ತಿಳಿದು ತೀರ್ಥಹಳ್ಳಿಯಲ್ಲಿ ಅವರ ಪರಿಚಿತರು ಮರುಗಿದ್ದಾರೆ. ಇತ್ತ ಮುನೀರ್ ಅಹಮದ್ ಅವರ ಮನೆ ಸಮೀಪದಲ್ಲೆ ಇರುವ ಮೀನು ಮಾರುಕಟ್ಟೆಯಲ್ಲಿ ಇವತ್ತು ವ್ಯಾಪಾರ, ವಹಿವಾಟು ಬಂದ್ ಮಾಡಲಾಗಿತ್ತು. ಮುನೀರ್ ಅಹಮದ್ರ ಪರಿಚಯಸ್ಥರು ಸಹ ವಹಿವಾಟು ಬಂದ್ ಮಾಡಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಗೋಡೆಬರಹ ಪ್ರಕರಣದಲ್ಲಿ ಮಾಜ್ ಬಂಧನ
ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಾರೀಕ್ ಜೊತೆಯಲ್ಲಿ ಮಾಜ್ ಮುನೀರ್ ನನ್ನು ಪೊಲೀಸರು ಬಂಧಿಸಿದ್ದರು. ಈಗ ವಿಧ್ವಂಸಕ ಕೃತ್ಯಕ್ಕೆ ಸಂಚು ಆರೋಪದಲ್ಲಿ ಶಾರೀಕ್ ಜೊತೆ ಮಾಜ್ ನ ಹೆಸರು ತಳಕು ಹಾಕಿಕೊಂಡಿದೆ. ಸೆಪ್ಟೆಂಬರ್ 19ರಂದು ಮಾಜ್ ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಆತನ ವಿಚಾರಣೆ ನಡೆಯುತ್ತಿದೆ.
ಮಗನ ವಿಚಾರದಲ್ಲಿ ನೊಂದಿದ್ದ ಮುನೀರ್ ಅಹ್ಮದ್
ಮುನೀರ್ ಅಹಮದ್ ತಂದೆ ಸಾಬ್ಜಾನ್ ಸಾಹೇಬ್ ತೀರ್ಥಹಳ್ಳಿ ಪುರಸಭೆಯ ಸದಸ್ಯರಾಗಿದ್ದರು. ಈ ಕಾರಣದಿಂದ ಪಟ್ಟಣದಲ್ಲಿ ಈ ಕುಟುಂಬದ ಬಗ್ಗೆ ವಿಶೇಷ ಗೌರವ ಇದೆ. ಮುನೀರ್ ಅಹ್ಮದ್ ಮಕ್ಕಳ ವಿದ್ಯಾವಂತರನ್ನಾಗಿ ಮಾಡುವ ಉದ್ದೇಶದಿಂದ ಕಳೆದ ಐದು ವರ್ಷಗಳಲ್ಲಿ ಮಂಗಳೂರಿನಲ್ಲಿ ನೆಲೆಸಿದ್ದರು. ಆದರೆ ಮಗನ ಬಂಧನ ನಂತರ ಮಾನಸಿಕವಾಗಿ ಕುಗ್ಗಿದ್ದರು. ಮಗನ ಕುರಿತು ಮಾಧ್ಯಮದಲ್ಲಿ ವಿಪರೀತ ಚರ್ಚೆಗಳು ಕೇಳಿ ಅಘಾತಕ್ಕೆ ಒಳಗಾಗಿದ್ದರು. ಕೊನೆಗೆ ಶುಕ್ರವಾರ ಹೃದಯಾಘಾತವಾಗಿ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.