"ಬ್ಯಾಡಾ ಸ್ವಾಮಿ.. ಬಾರ್ ಆಂಡ್ ರೆಸ್ಟೋರೆಂಟ್", ಇದು ಮೌನ ಪ್ರತಿಭಟನೆ
ಶಿವಮೊಗ್ಗ, ಫೆಬ್ರವರಿ.18: 'ಮದ್ಯಪಾನ ಆರೋಗ್ಯಕ್ಕೆ ಹಾನಿಕರ'.. ಹೀಗೆಂದು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸರ್ಕಾರವೇ ಸಾಲು ಸಾಲಾಗಿ ಎಣ್ಣೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುತ್ತಿವೆ. ಗಲ್ಲಿ ಗಲ್ಲಿಗೂ ಬಾರ್ ಆಂಡ್ ರೆಸ್ಟೋರೆಂಟ್ ಗಳು ತೆರೆದುಕೊಳ್ಳುತ್ತಿವೆ.
ನಮ್ಮ ಊರಿಗೆ ಬಾರ್ ಆಂಡ್ ರೆಸ್ಟೋರೆಂಟ್ ಬೇಡ ಸ್ವಾಮಿ ಎಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ತಾಳಗುಪ್ಪ ಗ್ರಾಮ ಸ್ತ್ರೀಶಕ್ತಿ ಸಂಘ ಹಾಗೂ ಸಂಸ್ಥೆಗಳು ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
ಮದ್ಯದ ಅಂಗಡಿ ತೆರವುಗೊಳಿಸಲು ಹೀಗೆ ಮಾಡಿದ ರಮ್ಮನಹಳ್ಳಿ ಗ್ರಾಮಸ್ಥರು
ಕಳೆದ 2019ರ ಡಿಸೆಂಬರ್.16ರಂದು ತಾಳಗುಪ್ಪ ಗ್ರಾಮದ ಜೆ.ಜೆ.ಪಾಲಾಕ್ಷಪ್ಪ ಅವರ ಜಾಗದಲ್ಲಿ ಶಿವಮೊಗ್ಗ ಶರಾವತಿ ನಗರ ನಿವಾಸಿ ಆರ್.ಎಸ್. ರಮೇಶ್ ರಾವ್ ಅವರು ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿಯನ್ನು ನಿರಾಕರಿಸಲಾಗಿತ್ತು.
ತಾಳಗುಪ್ಪದ ರಂಗನಾಥ್ ಕಾಲೋನಿಯು ಜನವಸತಿ ಪ್ರದೇಶವಾಗಿದ್ದು, ನಿತ್ಯ ಈ ಮಾರ್ಗದಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರು ಓಡಾಡುತ್ತಾರೆ. ಅಲ್ಲದೇ ಈ ಪ್ರದೇಶವು ಗ್ರೀನ್ ಬೆಲ್ಟ್ ವ್ಯಾಪ್ತಿಗೆ ಬರಲಿದ್ದು, ಇಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ತೆರೆಯದಂತೆ ಈ ಹಿಂದೆಯೂ ಕೂಡಾ ಮೌನ ಪ್ರತಿಭಟನೆ ನಡೆಸಲಾಗಿತ್ತು. ಜೊತೆಗೆ ರಾಜ್ಯದ ಮುಖ್ಯಮಂತ್ರಿ, ಅಬಕಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ನಂತರದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನಿರಾಕರಿಸಲಾಗಿತ್ತು.
ಆದರೆ, ಇತ್ತೀಚಿಗೆ ಸಿಕ್ಕ ಮಾಹಿತಿಯಂತೆ ದಿನಾಂಕ ಫೆಬ್ರವರಿ.16 ರಿಂದ ಫೆಬ್ರವರಿ.23ರೊಳಗೆ ಮತ್ತೆ ತಾಳಗುಪ್ಪದ ಅದೇ ರಂಗನಾಥ ಕಾಲೋನಿಯಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದೆ. ಇದನ್ನು ತಡೆಯುವಂತೆ ಇದೀಗ ಸ್ತೀಶಕ್ತಿ ಸಂಘ ಮತ್ತು ಸಂಸ್ಥೆಯ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.