ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ:ಈವರೆಗಿನ 10 ಬೆಳವಣಿಗೆಗಳ ಕಂಪ್ಲೀಟ್ ಮಾಹಿತಿ
ಶಿವಮೊಗ್ಗ, ಸೆಪ್ಟೆಂಬರ್, 21: ಐಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದ ಹಿನ್ನೆಲೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಮತ್ತೊಬ್ಬನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದರಿಂದ ಮಲೆನಾಡಿನ ಭಾಗದಲ್ಲಿ ಮತ್ತೆ ಉಗ್ರರ ಜಾಡಿನ ಕುರಿತು ಆತಂಕ ಮೂಡಿದೆ.
1. ಆಗಸ್ಟ್ 15ರಂದು ಗಾಂಧಿ ಬಜಾರ್ನಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನ ಮೇಲೆ ಚಾಕು ಇರಿತ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಕುರಿತು ಮಾಹಿತಿ ಲಭ್ಯವಾಗಿತ್ತು.
Breaking: ಉಗ್ರ ಸಂಘಟನೆ ಜೊತೆ ನಂಟು, ಶಿವಮೊಗ್ಗದಲ್ಲಿ ಇಬ್ಬರು ಶಂಕಿತರ ಅರೆಸ್ಟ್
2. ಖಚಿತ ಮಾಹಿತಿ ಮೇರೆಗೆ ಸೆಪ್ಟೆಂಬರ್ 19ರಂದು ಮಂಗಳೂರಿನ ಮಾಜ್ ಮುನೀರ್ ಅಹಮದ್ (22) ಮತ್ತು ಶಿವಮೊಗ್ಗದ ಸಿದ್ಧೇಶ್ವರ ನಗರದ ಸಯ್ಯದ್ ಯಾಸೀನ್ ಅಲಿಯಾಸ್ ಬೈಲ್ (21) ಎಂಬುವರ ಬಂಧನ ಆಗಿತ್ತು. ತೀರ್ಥಹಳ್ಳಿ ಗುಡ್ಡೆಕೊಪ್ಪದ ಶಾರೀಕ್ಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3. ಇವರು ನಿಷೇಧಿತ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಶಂಕೆ ವ್ಯಕ್ತವಾಗಿದ್ದು, ಭಯೋತ್ಪಾದನಾ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿತ್ತು. ಸ್ಫೋಟಕಗಳನ್ನು ಹೊಂದಿರುವ ಮತ್ತು ರಾಷ್ಟ್ರಧ್ವಜವನ್ನು ಸುಟ್ಟಿರುವ ಶಂಕೆ ಇದೆ ಎಂದು ಇವರ ಮೇಲೆ ಎಫ್ಐಆರ್ ದಾಖಲಿಸಿದ್ದರು.
ಶಿವಮೊಗ್ಗ ಪೊಲೀಸರು ಶಂಕಿತ ಉಗ್ರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ರು. ನ್ಯಾಯಾಲಯ ಸೆಪ್ಟೆಂಬರ್ 29ರವರೆಗೆ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
ಶಿವಮೊಗ್ಗ- ಭದ್ರಾವತಿ ನಡುವೆ ಇರುವುದು ಹೈವೆಯೋ, ಯಮಲೋಕದ ದಾರಿಯೋ?
4. ಚಾಕು ಇರಿತ ಪ್ರಕರಣ ತನಿಖೆ ವೇಳೆ ಶಂಕಿತರ ಕುರಿತು ಮಾಹಿತಿ ಲಭ್ಯ ವಾಗಿದ್ದು, ಆ ಪ್ರಕರಣಕ್ಕೂ ಇವರಿಗೂ ಸಂಬಂಧವಿಲ್ಲದ ಹಿನ್ನೆಲೆ ಇವರನ್ನು ಬಂಧಿಸಿ ಪ್ರತ್ಯೇಕ ಎಫ್ಐಆರ್ ದಾಖಲು ಮಾಡಲಾಗಿದೆ. ಇನ್ನು ಕುರಿತು ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದರು.
5. ಪೊಲೀಸರು ಸಿದ್ಧೇಶ್ವರ ನಗರದಲ್ಲಿರುವ ಸಯ್ಯದ್ ಯಾಸೀನ್ನನ್ನು ಆತನ ಮನೆಗೆ ಕರೆತಂದಿದ್ದು, ಸುಮಾರು ಒಂದೂವರೆ ಗಂಟೆ ಕಾಲ ಮಹಜರ್ ನಡೆಸಿದರು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
6. ಯಾಸೀನ್ನ್ನು ಗುರುಪುರದ ತುಂಗಾ ನದಿ ದಂಡೆ ಬಳಿ ಕರೆದೊಯ್ದು ಮಹಜರ್ ನಡೆಸಲಾಯಿತು. ಈ ಸಂದರ್ಭದಲ್ಲಿ ಯಾಸೀನ್, ಮಾಜ್ ಮತ್ತು ಶರೀಕ್ ಬಾಂಬ್ಗಳನ್ನು ತಯಾರಿಸಿ ತುಂಗಾ ನದಿಗೆ ಎಸೆಯುತ್ತಿದ್ದರು ಎನ್ನುವ ಮಾಹಿತಿ ಹೊರಬಿದ್ದಿತ್ತು. ಇನ್ನು ಹೆಚ್ಚಿನ ಸ್ಥಳಗಳಲ್ಲಿ ಮಹಜರ್ ನಡೆಸುವ ಸಾಧ್ಯತೆ ಇದ್ದು, ಈ ಭಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದ್ದಾರೆ.
7. ಶಿವಮೊಗ್ಗಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ಅಧಿಕಾರಿಗಳು ಭೇಟಿ ನೀಡಿ ವಿವಿಧೆಡೆ ಶೋಧ ನಡೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಶಿವಮೊಗ್ಗಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪೊಲೀಸರು ತನಿಖೆ ಮುಂದುವರೆಸಿದ್ದರು, ಇನ್ನಷ್ಟು ಸಾಕ್ಷ್ಯ ಸಂಗ್ರಹ ಮಾಡಲು ಮುಂದಾಗಿದ್ದಾರೆ.
8. ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಶಾರೀಕ್ ಮತ್ತು ಮಾಜ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದರಿಂದ ಇಬ್ಬರನ್ನು ಬಂಧಿಸಲಾಗಿತ್ತು. ಸುಮಾರು ಒಂದು ವರ್ಷ ಇವರಿಬ್ಬರು ಜೈಲಿನಲ್ಲಿದ್ದು, ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ಮಾಹಿತಿ ನೀಡಿದ್ದರು.
9. 'ತನ್ನ ಮಗ ಇಂಜಿನಿಯರಿಂಗ್ ಮಾಡಿದ್ದಾನೆ. ಆತನಿಗೆ ಯಾವುದೆ ಉಗ್ರ ಸಂಘಟನೆ ನಂಟು ಇಲ್ಲ. ತಮ್ಮ ಮನೆ ಸುತ್ತಮುತ್ತಲು ಎಲ್ಲರೊಂದಿಗೂ ಚನ್ನಾಗಿ ಬೆರೆಯುತ್ತಿದ್ದ. ಯಾಸೀನ್ಗೆ ಒಳ್ಳೆಯ ಸ್ನೇಹಿತರು ಇದ್ದರು. ಕಳೆದ 15 ದಿನದ ಹಿಂದೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿ ಮನೆಯಿಂದ ಹೊರಟಿದ್ದ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ' ಎಂದು ಯಾಸೀನ್ ತಂದೆ ಆಯುಬ್ ಖಾನ್ ತಿಳಿಸಿದ್ದಾರೆ.
10. 'ಕೆಲವು ಪ್ರಕರಣಗಳನ್ನು ಎನ್ಐಎಗೆ ಕೊಟ್ಟಿದ್ದೇಕೆ ಎಂದು ಪ್ರಶ್ನಿಸುತ್ತಿದ್ದರು. ಇದೀಗ ಉತ್ತರ ಸಿಕ್ಕಿದೆ. ಶಿವಮೊಗ್ಗ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಬಂಧಿತರ ವಿಚಾರಣೆ ನಡೆಯುತ್ತಿದ್ದು, ಇದರ ಹಿಂದೆ ಮತ್ತೆ ಯಾರಿದ್ದಾರೆ ಅನ್ನುವುದು ಕೂಲಂಕಷ ತನಿಖೆಯಿಂದ ಗೊತ್ತಾಬೇಗಿದೆ. ಇಬ್ಬರ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಾಗಿದೆ.' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸೌಧದಲ್ಲಿ ತಿಳಿಸಿದರು.