ಶಿವಮೊಗ್ಗ-ರಾಣೇಬೆನ್ನೂರು ರೈಲು ಯೋಜನೆ ಅನುಷ್ಠಾನ: ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆ
ಶಿವಮೊಗ್ಗ, ಆಗಸ್ಟ್ 08: ನಗರ ರೈಲು ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಲಿಫ್ಟ್ ಹಾಗೂ ಅರಸಾಳು ರೈಲು ನಿಲ್ದಾಣದಲ್ಲಿನ ಮಾಲ್ಗುಡಿ ಮ್ಯೂಸಿಯಂ ಅನ್ನು ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಉದ್ಘಾಟನೆ ಮಾಡಲಾಯಿತು.
ಪೆಸಿಟ್ ಕಾಲೇಜಿನಲ್ಲಿ ನಡೆದ ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ತಮ್ಮ ಬೆಳಗಾವಿಯ ಕಚೇರಿಯಿಂದಲೇ ರೈಲ್ವೆ ಸಚಿವ ಸುರೇಶ್ ಅಂಗಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಶಿವಮೊಗ್ಗ ಜನತೆಯ ಆಶೋತ್ತರಕ್ಕೆ ಅನುಗುಣವಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನಗಳು ಪ್ರಶಂಸನೀಯವಾಗಿದೆ" ಎಂದರು.
ಬೆಂ-ಬೆಳಗಾವಿ, ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರಕ್ಕೆ ಒಪ್ಪಿಗೆ
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣದ ವೆಚ್ಚದಲ್ಲಿ ಶೇ.50ರಷ್ಟು ಹಣ ಹಾಗೂ ಉಚಿತ ಜಾಗವನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದ್ದಾರೆ. ಇದು ರೈಲ್ವೆ ಇಲಾಖೆಗೆ ಯೋಜನೆಯನ್ನು ಶೀಘ್ರ ಆರಂಭಿಸಲು ಸಹಕಾರಿಯಾಗಿದೆ ಎಂದರು.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗದ ಯೋಜನೆ ಮುಂದಿನ ಆಯವ್ಯಯದಲ್ಲಿ ಘೋಷಣೆಯಾಗಲಿದ್ದು, ಈ ಕುರಿತಂತೆ ಎಲ್ಲ ಪ್ರಕ್ರಿಯೆಗಳು ನಡೆದಿವೆ. ಬೆಳಗಾವಿ-ಧಾರವಾಡ ಮತ್ತು ಶಿವಮೊಗ್ಗ-ರಾಣೇಬೆನ್ನೂರು ಯೋಜನೆಗಳನ್ನು ಮುಂದಿನ ರೈಲ್ವೆ ಬಜೆಟ್ ನಲ್ಲಿ ಅಳವಡಿಸಿಕೊಂಡು ಆದಷ್ಟು ಬೇಗನೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಶಿವಮೊಗ್ಗಕ್ಕೆ ಇನ್ನೊಂದು ಬ್ರಿಡ್ಜ್, ಕೋಚಿಂಗ್ ಡಿಪೋ, ಆನಂದಪುರ, ಸಾಗರ ಹಾಗೂ ತಾಳಗುಪ್ಪ ನಿಲ್ದಾಣಗಳಲ್ಲಿನ ಪ್ಲಾಟ್ ಫಾರಂ ವಿಸ್ತರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಂಸದರು ಇರಿಸಿದ್ದಾರೆ. ಇವುಗಳ ಅನುಮೋದನೆಗೆ ಶೀಘ್ರ ಕ್ರಮ ಕೈಗೊಳ್ಳುತ್ತೇನೆ ಎಂದರು.