ಶಿವಮೊಗ್ಗ ಪಾಲಿಕೆಗೆ ನೂತನ ಮೇಯರ್, ಉಪ ಮೇಯರ್ ಆಯ್ಕೆ
ಶಿವಮೊಗ್ಗ, ಮಾರ್ಚ್ 10: ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಸುನೀತಾ ಅಣ್ಣಪ್ಪ, ಉಪ ಮೇಯರ್ ಆಗಿ ಶಂಕರ್ ಗನ್ನಿ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ನಗರದ ನೂತನ ಪ್ರಥಮ ಪ್ರಜೆಯನ್ನು ಆಯ್ಕೆ ಮಾಡಲಾಯಿತು.
ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ (ಎ) ಮೀಸಲಾತಿ ಘೋಷಣೆಯಾಗಿತ್ತು. ಬಿಜೆಪಿಯ ಸುನೀತಾ ಅಣ್ಣಪ್ಪ ಮತ್ತು ಕಾಂಗ್ರೆಸ್ ಪಕ್ಷದ ರೇಖಾ ರಂಗನಾಥ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಸುನೀತಾ ಅಣ್ಣಪ್ಪ ಅವರಿಗೆ 25 ಮತಗಳು, ರೇಖಾ ರಂಗನಾಥ್ ಅವರಿಗೆ 11 ಮತಗಳು ಬಂದಿವೆ.
ಸರ್ಕಾರದ ದೌರ್ಜನ್ಯ ಖಂಡಿಸಿ ಪ್ರತಿಭಟನೆ: ಮಾರ್ಚ್ 13ರಂದು ಕಾಂಗ್ರೆಸ್ 'ಶಿವಮೊಗ್ಗ ಚಲೋ'
ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ
ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಬಿಜೆಪಿಯ ಶಂಕರ್ ಗನ್ನಿ ಮತ್ತು ಕಾಂಗ್ರೆಸ್ ಪಕ್ಷದ ಆರ್.ಸಿ.ನಾಯ್ಕ್ ಸ್ಪರ್ಧಿಸಿದ್ದರು. ಶಂಕರ್ ಗನ್ನಿ ಅವರಿಗೆ 24 ಮತಗಳು, ಆರ್.ಸಿ.ನಾಯ್ಕ್ ಅವರಿಗೆ 11 ಮತಗಳು ಲಭಿಸಿವೆ.
ಬಿಜೆಪಿಯ ಒಬ್ಬ ಸದಸ್ಯ ತಟಸ್ಥ
ಉಪ ಮೇಯರ್ ಸ್ಥಾನದ ಚುನಾವಣೆಗೆ ಬಿಜೆಪಿ ಓರ್ವ ಸದಸ್ಯ ತಟಸ್ಥವಾಗಿ ಉಳಿದರು. ಇದರಿಂದ 25 ಮತಗಳ ಬದಲು 24 ಮತಗಳಷ್ಟೆ ಲಭಿಸಿದವು. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹಿಸಿ ಬಿಜೆಪಿ ಸದಸ್ಯ ಎಸ್.ಜಿ.ರಾಜು ಅವರು ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಸದಸ್ಯರು ಅವರನ್ನು ಮನವೊಲಿಸಿ ಚುನಾವಣೆಗೆ ಕರೆದೊಯ್ದಿದ್ದರು.
ಉಪ ಮೇಯರ್ ಸ್ಥಾನಕ್ಕೆ ಮತ ಚಲಾಯಿಸದ ಬಿಜೆಪಿ ಸದಸ್ಯ
ಚುನಾವಣೆ ವೇಳೆ ಉಪ ಮೇಯರ್ ಸ್ಥಾನಕ್ಕೆ ಮತ ಚಲಾಯಿಸದೆ ಪ್ರತಿಭಟಿಸಿದರು. ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಈ ಸಂಬಂಧ ನಗರ ಸಮಿತಿಯವರು ಜಿಲ್ಲಾ ಘಟಕಕ್ಕೆ ದೂರು ನೀಡಲಿದ್ದಾರೆ. ಜಿಲ್ಲಾ ಕಮಿಟಿಯವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನಾಡದೇವಿಗೆ ನಮಿಸಿ ಅಧಿಕಾರ
ನೂತನ ಮೇಯರ್, ಉಪ ಮೇಯರ್ ಆಯ್ಕೆಯ ಬೆನ್ನಿಗೆ ಬಿಜೆಪಿ ಕಾರ್ಯಕರ್ತರು ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚಾರಣೆ ನಡೆಸಿದರು. ನೂತನ ಮೇಯರ್, ಉಪ ಮೇಯರ್ ಅವರಿಗೆ ಹೂಗುಚ್ಛ, ಹಾರ ಹಾಕಿ ಸಂಭ್ರಮಿಸಿದರು.
ನೂತನ ಮೇಯರ್ ಸುನೀತಾ ಅಣ್ಣಪ್ಪ ಅವರು, ಅಧಿಕಾರ ಸ್ವೀಕಾರಕ್ಕೂ ಮೊದಲು ಪಾಲಿಕೆ ಕಟ್ಟಡದ ಒಳಗಿರುವ ನಾಡದೇವಿ ಚಾಮುಂಡೇಶ್ವರಿ ಮತ್ತು ಬಸವಣ್ಣನ ಪ್ರತಿಮೆಗೆ ನಮನ ಸಲ್ಲಿಸಿ, ಅಧಿಕಾರ ಸ್ವೀಕರಿಸಿದರು.