ಭದ್ರಾವತಿ; ಬೀದಿನಾಯಿಗಳ ಹತ್ಯೆ, 12 ಜನರ ಬಂಧನ
ಶಿವಮೊಗ್ಗ, ಸೆಪ್ಟೆಂಬರ್ 12; ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 100ಕ್ಕೂ ಅಧಿಕ ಬೀದಿ ನಾಯಿಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರನ್ನು ಬಂಧಿಸಲಾಗಿದೆ. ಈ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದ್ದು, ಗ್ರಾಮ ಪಂಚಾಯಿತಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಭದ್ರಾವತಿ ತಾಲೂಕಿನ ರಂಗನಾಥಪುರದಲ್ಲಿ ಬೀದಿನಾಯಿಗಳನ್ನು ಜೆಸಿಬಿಯಲ್ಲಿ ಗುಂಡಿ ತೆಗೆದು ಹೂತು ಹಾಕಲಾಗಿತ್ತು. ಕೆಲವು ನಾಯಿಗಳನ್ನು ಜೀವಂತವಾಗಿ ಸಮಾಧಿ ಮಾಡಲಾಗಿತ್ತು. ಕಂಬದಾಳು-ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ಭದ್ರಾವತಿಯಲ್ಲಿ ಬೀದಿ ನಾಯಿಗಳ ಹತ್ಯೆ; ದೂರು ದಾಖಲು
ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಸೇರಿದಂತೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ಹಲವರ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲು ಮಾಡಲಾಗಿತ್ತು.
ಮಂಗಳೂರು; ಗುಂಡು ಹಾರಿಸಿ ಬೀದಿ ನಾಯಿ ಹತ್ಯೆ
ಗ್ರಾಮದಲ್ಲಿದ್ದ ಬೀದಿನಾಯಿಗಳು ಏಕಾಏಕಿ ಕಣ್ಮರೆಯಾಗಿದ್ದವು. ಜನರು ಈ ಕುರಿತು ಶಿವಮೊಗ್ಗದ ಪ್ರಾಣಿ ರಕ್ಷಣಾ ಕ್ಲಬ್ಗೆ ಮಾಹಿತಿ ಕೊಟ್ಟಿದ್ದರು. ಗ್ರಾಮಕ್ಕೆ ಪಶುವೈದ್ಯರ ಜೊತೆ ಕ್ಲಬ್ ಸದಸ್ಯರು ಆಗಮಿಸಿದ್ದರು. ಗ್ರಾಮದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಮ್ಮಡಿಹಳ್ಳಿಯಲ್ಲಿ ಎರಡು ಗುಂಡಿಗಳಲ್ಲಿ ನಾಯಿಗಳ ಕಳೇಬರ ಪತ್ತೆಯಾಗಿತ್ತು.
ವಿಡಿಯೋ; ಪುತ್ತೂರಿನಲ್ಲಿ ಮಾಸ್ಕ್ ಧರಿಸಿ ಪೇಟೆಗೆ ಬಂದ ನಾಯಿ!
ಜೆಸಿಬಿಯಲ್ಲಿ ಎರಡು ಗುಂಡಿಗಳನ್ನು ತೆಗೆದು ನಾಯಿಗಳನ್ನು ಹೂತು ಹಾಕಲಾಗಿತ್ತು. ಒಂದು ಗುಂಡಿಯಲ್ಲಿ 60 ನಾಯಿಗಳ ಕಳೇಬರ ಸಿಕ್ಕಿತ್ತು. ನಾಯಿಗಳ ಮೂಳೆ, ಚರ್ಮ, ಕೂದಲನ್ನು ಸಂಗ್ರಹ ಮಾಡಿದ್ದ ಪಶು ವೈದ್ಯರು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದರು.
ಗ್ರಾಮಸ್ಥರು ಹೇಳುವ ಪ್ರಕಾರ 150ಕ್ಕೂ ಹೆಚ್ಚು ಬೀದಿನಾಯಿಗಳನ್ನು ಹೂತು ಹಾಕಲಾಗಿದೆ. ಎಫ್ಐಆರ್ನಲ್ಲಿ 120 ಬೀದಿನಾಯಿಗಳನ್ನು ಹೂತು ಹಾಕಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿಯೇ ಈ ಕಾರ್ಯಕ್ಕೆ ನೆರವು ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೈಸೂರಿನಿಂದ ನಾಯಿ ಹಿಡಿಯುವವರನ್ನು ಕರೆಸಿದ್ದರು. ಸೆಪ್ಟೆಂಬರ್ 3ರಂದು ಬೀದಿ ನಾಯಿಗಳನ್ನು ಹಿಡಿಯಲಾಗಿತ್ತು. ಟಾಟಾ ಏಸ್ ವಾಹನಕ್ಕೆ ನಾಯಿಗಳನ್ನು ತುಂಬಿ ಗುಂಡಿಗೆ ತೆಗೆದುಕೊಂಡು ಹೋಗಿ ಸುರಿಯಲಾಗಿತ್ತು.
ಘಟನೆ ಬಗ್ಗೆ ದೂರು; ಬೀದಿನಾಯಿಗಳನ್ನು ಜೀವಂತವಾಗಿ ಹೂತು ಹಾಕಿದ ಪ್ರಕರಣದ ಬಗ್ಗೆ ಪ್ರಾಣಿ ರಕ್ಷಣಾ ಕ್ಲಬ್ ಸದಸ್ಯರು ಭದ್ರಾವತಿ ಗ್ರಾಮೀಣ ಠಾಣೆಗೆ ದೂರು ಕೊಟ್ಟಿದ್ದರು. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದರು, "ಗ್ರಾಮ ಪಂಚಾಯಿತಿ ಅಧಿಕಾರಿಗಳು ನಾಯಿಗಳನ್ನು ಕೊಂದು ಅವುಗಳನ್ನು ಹೂತು ಹಾಕಿದ್ದಾರೆ. ಗ್ರಾಮ ಪಂಚಾಯಿತಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ" ಎಂದು ಹೇಳಿದ್ದರು.
ಪಶು ವೈದ್ಯಾಧಿಕಾರಿಗಳ ತಂಡ ನಾಯಿಗಳನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು ಒಟ್ಟು ಎಷ್ಟು ನಾಯಿಗಳನ್ನು ಕೊಂದು ಹಾಕಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗ್ರಾಮಸ್ಥರು ಸಹ ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಕರ್ನಾಟಕದಲ್ಲಿ ಬೀದಿನಾಯಿಗಳ ಸಾಮೂಹಿಕ ಹತ್ಯೆ ನಡೆಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಹ ಸಲ್ಲಿಕೆಯಾಗಿತ್ತು. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್. ವಿ. ರಮಣ ಮತ್ತು ನ್ಯಾಯಮೂರ್ತಿ ಎಂ. ಎಂ. ಶಾಂತನಗೌಡರ್ ಅವರಿದ್ದ ವಿಭಾಗೀಯ ಪೀಠ ನಡೆಸಿತ್ತು.
1960ರ ಪ್ರಾಣಿಗಳ ಮೇಲಿನ ಕೌರ್ಯವನ್ನು ತಡೆಗಟ್ಟುವ ಕಾಯ್ದೆ ಮತ್ತು 2001ರ ಪ್ರಾಣಿ ಜನ್ಮ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಎಲ್ಲಾ ಸ್ಥಳೀಯ ಅಧಿಕಾರಿಳಿಗೆ ಮತ್ತು ಪಂಚಾಯಿತಿಗಳಿಗೆ ಕೋರ್ಟ್ ನಿರ್ದೇಶನ ನೀಡಿತ್ತು.
ಈ ಕಾಯ್ದೆಯ ಅನ್ವಯ ಬೀದಿ ನಾಯಿಗಳನ್ನು ಸೆರೆ ಹಿಡಿಯುವುದು ಮತ್ತು ಬೇರೆ ಕಡೆಗೆ ಸಾಗಾಟ ಮಾಡುವಂತಿಲ್ಲ. ಸಂತಾನಹಣ ಶಸ್ತ್ರ ಚಿಕಿತ್ಸೆಗಾಗಿ ಮಾತ್ರ ಬೀದಿನಾಯಿಗಳನ್ನು ಸೆರೆ ಹಿಡಿಯಬಹುದಾಗಿದೆ.