ಶಿವಮೊಗ್ಗ; ಅರಣ್ಯ ಭೂಮಿಯಲ್ಲಿ ಕಲ್ಲುಗಣಿಗಾರಿಕೆ, ಪ್ರತಿಭಟನೆ
ಶಿವಮೊಗ್ಗ, ಅಕ್ಟೋಬರ್ 04 : ಅರಣ್ಯ ಭೂಮಿಯಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಹೊಸನಗರ ತಾಲೂಕಿನ ಹುಂಚ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗಣಿಗಾರಿಕೆ ಮತ್ತು ಸ್ಫೋಟ ನಡೆಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಶುಕ್ರವಾರ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ, ಹೊಂಡಲಗದ್ದೆ, ನಾಗರಹಳ್ಳಿ, ಅಳಲೆಕೊಪ್ಪ, ಈರಿನಬೈಲು, ಮಳಿಕೊಪ್ಪ, ಕುಬಟಹಳ್ಳಿ ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಸರ್ವೆ ನಂಬರ್ 69ರಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಲಾಗಿದ್ದು, ವಿರೋಧ ವ್ಯಕ್ತವಾಗಿದೆ.
ತುಂಬಿದ ಕೆಆರ್ ಎಸ್; ಜಲಾಶಯದ ಸುತ್ತ ಕಲ್ಲು ಗಣಿಗಾರಿಕೆಗೆ ನಿಷೇಧಾಜ್ಞೆ
ಹಣವಂತರೂ, ಭ್ರಷ್ಟ ಅಧಿಕಾರಿಗಳು ಸೇರಿಕೊಂಡು ನೈಸರ್ಗಿಕವಾದ ಕಾಡನ್ನು ಕಡಿದು ನಾಶ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಈ ಪ್ರದೇಶದಲ್ಲಿ ಹೊನ್ನೆ, ಮತ್ತಿ, ಜಾಲ, ಹೈಗ ಇತರೆ ಕಾಡು ಜಾತಿಯ ಮರಗಳಿದ್ದು, ಇಲ್ಲಿರುವ ನೀರಿನ ಮೂಲಕ್ಕೂ ಗಣಿಗಾರಿಕೆಯಿಂದಾಗಿ ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ, ಗೋವಾ ಗಣಿ ಸ್ಥಗಿತದಿಂದ ಕೆಲಸ ಕಳೆದುಕೊಂಡಿದ್ದು 12.8 ಲಕ್ಷ ಮಂದಿ
ಗಣಿಗಾರಿಕೆ ನಡೆಸಿದರೆ ಇಲ್ಲಿರುವ ನೀರಿನ ಮೂಲಕ್ಕೆ ಧಕ್ಕೆಯಾಗಲಿದೆ. ಜಲಾನಯನ ಇಲಾಖೆ ಇಲ್ಲಿ ಡ್ಯಾಂ ನಿರ್ಮಿಸಿದೆ. ಹಲವು ಪ್ರಾಣಿಗಳು ಮತ್ತು ಸುತ್ತಮುತ್ತಲ ಪ್ರದೇಶದ ಕೃಷಿ ಭೂಮಿಗೆ ಡ್ಯಾಂನ ನೀರು ಆಶ್ರಯವಾಗಿದೆ. ಇಂತಹ ಪ್ರದೇಶದಲ್ಲಿ ಗಣಿಗಾರಿಕೆ ಅವಕಾಶ ಹೇಗೆ ಅವಕಾಶ ನೀಡಲಾಗಿದೆ? ಎಂದು ಪ್ರಶ್ನಿಸಿದರು.
ಕೆಆರ್ ಎಸ್ ಗೆ ಸುತ್ತಿಕೊಂಡ ಗಣಿಗಾರಿಕೆಯ ಪರ-ವಿರೋಧ ಹೋರಾಟ
ಒಟ್ಟು 77.2 ಎಕರೆ ಪ್ರದೇಶವಿದ್ದು ಇದರಲ್ಲಿ 9 ಎಕರೆಯಲ್ಲಿ ಮೂರು ಜನರಿಗೆ ದರ್ಖಾಸಿನಡಿಯಲ್ಲಿ ಜಾಗ ಮಂಜೂರಾಗಿರುತ್ತದೆ. ಇದದಲ್ಲಿ 48 ಎಕರೆ ಎಂ. ಪಿ. ಎಂ ನಡುತೋಪಿಗೆ ಲೀಸ್ ಆಗಿರುತ್ತದೆ. ಉಳಿದ 20.2 ಎಕರೆ ಜಾಗವನ್ನು ಕಂದಾಯ ಇಲಾಖೆಯವರು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗಣಿಗಾರಿಕೆ ನಡೆಸಿದರೆ ನೈಸರ್ಗಿಕವಾಗಿ ಇರುವ ಕಾಡಿನ ನಾಶ, ಪ್ರಾಣಿ-ಪಕ್ಷಿ ಸಂಕುಲನಾಶ, ನೀರಿನ ಮೂಲ ನಾಶವಾಗಲಿದೆ. ಈ ದೂಳಿನಿಂದ ಜನರಿಗೆ ಅಸ್ಥಮ, ಕ್ಷಯ ಹಾಗೂ ಇನ್ನೂ ಅನೇಕ ರೋಗಗಳು ಬರುವ ಸಾಧ್ಯತೆ ಇದೆ. ಆದ್ದರಿಂದ, ಕಲ್ಲುಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.