ಸಿಎಂ ಹುದ್ದೆಗಾಗಿ ರೇಸ್ ನಲ್ಲಿರುವ ಕಾಂಗ್ರೆಸ್ಸಿನ ಐವರು ಕೌರವರು: ಹೆಸರು ಉಲ್ಲೇಖಿಸಿದ ಈಶ್ವರಪ್ಪ
ಶಿವಮೊಗ್ಗ, ಜುಲೈ 4: ಚುನಾವಣೆಗೆ ಇನ್ನೂ ಎರಡು ವರ್ಷ ಇರಬೇಕಾದರೆ, ಕಾಂಗ್ರೆಸ್ಸಿನಲ್ಲಿ ಆರಂಭವಾಗಿರುವ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಒಳ ಬೇಗುದಿಗೆ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ.
ಕೊರೊನಾ ಹಾವಳಿಯ ನಡುವೆಯೂ ಕಾಂಗ್ರೆಸ್ಸಿನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಬರೀ ಮುಖಂಡರಲ್ಲಿ ಮಾತ್ರವಲ್ಲದೆ, ಕಾರ್ಯಕರ್ತರಲ್ಲೂ ಕಾಣಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಚಾರ.
ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ: ಕೆಪಿಸಿಸಿ ಅಧ್ಯಕ್ಷರಿಗೆ ಫುಲ್ ಜೈಕಾರ
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರ ಘೋಷಣೆ ಮೊಳಗಿತ್ತು.
ಎದೆ ಬಗೆದ್ರೆ ಕಾಂಗ್ರೆಸ್ ಅಂದ್ರು, ಈಗ ಬಿಜೆಪಿಯಲ್ಲಿದ್ದಾರೆ: ಏನು ಮಾಡೋಕಾಗುತ್ತೆ?
"ಕಾಂಗ್ರೆಸ್ಸಿನವರಿಗೆ ಮಾನ ಮರ್ಯಾದೆ ಅನ್ನುವುದು ಇಲ್ಲ. ಈಗ ಬಿಜೆಪಿ ಸರಕಾರ ಅಧಿಕಾರದಲ್ಲಿದೆ, ಇನ್ನೂ ಚುನಾವಣೆಗೆ ಸಾಕಷ್ಟು ಸಮಯವಿದೆ. ಜಾತಿಧರ್ಮವನ್ನು ಒಡೆಯುವ ಕಾಂಗ್ರೆಸ್ಸಿನವರಿಗೆ ಜನರು ಆಗಲೇ ಒಂದು ಬಾರಿ ಪಾಠ ಕಲಿಸಿದ್ದಾರೆ. ಆದರೂ ಅವರಿಗೆ ಅರ್ಥವಾಗುತ್ತಿಲ್ಲ"ಎಂದು ಈಶ್ವರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ಸಿನ ಐವರು ಕೌರವರು: ಹೆಸರು ಉಲ್ಲೇಖಿಸಿದ ಈಶ್ವರಪ್ಪ.
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ರೇಸಿನಲ್ಲಿ ಮಂಚೂಣಿಯಲ್ಲಿ
"ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಹೋಗುವಲ್ಲಿ, ಅವರ ಅಭಿಮಾನಿಗಳಿಂದ ನಾನೇ ಭಾವೀ ಸಿಎಂ ಎಂದು ಘೋಷಣೆ ಕೂಗಿಸುತ್ತಿದ್ದಾರೆ. ಕಾಂಗ್ರೆಸ್ ಚುನಾವಣೆಗೆ ಮುನ್ನವೇ ಒಡೆದ ಮನೆಯಂತಾಗಿದೆ. ಕ್ಷೇತ್ರದ ಮತ್ತು ಜನರ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳಲು ಇವರಿಗೆ ಸಮಯವಿಲ್ಲ "ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಮುಂದಿನ ಮುಖ್ಯಮಂತ್ರಿ ನಾನೇ ಎಂದು ಕಾಂಗ್ರೆಸ್ಸಿನ ಐವರು ಕೌರವರು
"ಮುಂದಿನ ಮುಖ್ಯಮಂತ್ರಿ ನಾನೇ ಎಂದು ಕಾಂಗ್ರೆಸ್ಸಿನ ಐವರು ಕೌರವರು ಬಿಂಬಿಸಿಕೊಂಡು ಬರುತ್ತಿದ್ದಾರೆ. ಒಬ್ಬರೊಬ್ಬರು ತಮ್ಮ ಜಾತಿಯ ಕಾರ್ಡ್ ಅನ್ನು ಬಳಸಿಕೊಂಡು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಇವರು ಜಾತಿ ಆಧಾರದ ಮೇಲೆ ಜನರ ಮುಂದೆ ಹೋಗುತ್ತಿದ್ದಾರೆ"ಎಂದು ಈಶ್ವರಪ್ಪ ಹೇಳಿದ್ದಾರೆ.
ದಲಿತ ನಾಯಕನಾದ ನಾನೇ ಮುಂದಿನ ಸಿಎಂ ಎಂದು ಡಾ.ಪರಮೇಶ್ವರ್
"ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಡಿ.ಕೆ.ಶಿವಕುಮಾರ್ ನಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುತ್ತಿದ್ದರೆ, ದಲಿತ ನಾಯಕನಾದ ನಾನೇ ಮುಂದಿನ ಸಿಎಂ ಎಂದು ಡಾ.ಪರಮೇಶ್ವರ್ ಅವರು ಹೇಳಿಕೊಳ್ಳುತ್ತಿದ್ದಾರೆ. ಹೇಳುವುದೆಲ್ಲಾ ಹೇಳಿ, ಈಗ ಆ ವಿಷಯ ಚರ್ಚಿಸಲು ಸರಿಯಾದ ಸಮಯವಲ್ಲ ಎಂದು ಹೇಳುತ್ತಿದ್ದಾರೆ"ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.
ಲಿಂಗಾಯತರಲ್ಲೂ ನಾಯಕರಿದ್ದಾರೆ ಎಂದು ಎಂ.ಬಿ.ಪಾಟೀಲ್
"ಇನ್ನೊಂದು ಕಡೆ ಲಿಂಗಾಯತರಲ್ಲೂ ನಾಯಕರಿದ್ದಾರೆ ಎಂದು ಎಂ.ಬಿ.ಪಾಟೀಲ್ ಅವರು ಮುಂದಿನ ಸಿಎಂ ಆಗಲು ಹೊರಟರೆ, ಮೈಸೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ತನ್ವೀರ್ ಸೇಠ್ ಕೂಡಾ ಸಿಎಂ ಆಗಲು ಮುಂದಾಗಿದ್ದಾರೆ"ಎಂದು ಈಶ್ವರಪ್ಪ, ಕಾಂಗ್ರೆಸ್ಸಿನ ಐವರು ಮುಖಂಡರ ಹೆಸರನ್ನು ಉಲ್ಲೇಖಿಸಿದ್ದಾರೆ.