ವಿಜಯೇಂದ್ರ ಅವರನ್ನು ಕೆಲವರು ವೈಭವೀಕರಿಸುತ್ತಿದ್ದಾರೆ; ಈಶ್ವರಪ್ಪ
ಶಿವಮೊಗ್ಗ, ನವೆಂಬರ್ 17: ಬಿಜೆಪಿ ಎಂದಿಗೂ ವ್ಯಕ್ತಿಯನ್ನು ಆಧರಿಸಿ ಚುನಾವಣೆ ಮಾಡುವುದಿಲ್ಲ. ಸಂಘಟಿತ ಪ್ರಯತ್ನದಿಂದ ಪಕ್ಷ ಗೆಲುವು ಸಾಧಿಸುತ್ತಿದೆ. ಆದರೆ ವಿಜಯೇಂದ್ರ ಅವರನ್ನು ವೈಭವೀಕರಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದಿದ್ದಾರೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ.
ಮಂಗಳವಾರ ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ಚುನಾವಣೆ ಸಂದರ್ಭದಲ್ಲಿ ಪ್ರತಿ ಕ್ಷೇತ್ರಕ್ಕೂ ನಾಲ್ಕರಿಂದ ಐದು ಜನರನ್ನು ಉಸ್ತುವಾರಿಯಾಗಿ ನೇಮಿಸಲಾಗುತ್ತದೆ. ಅದೇ ರೀತಿ ಈಚೆಗೆ ನಡೆದ ಶಿರಾ ಹಾಗೂ ಆರ್ ಆರ್ ನಗರ ಉಪಚುನಾವಣೆಗೂ ಉಸ್ತುವಾರಿಗಳನ್ನು ನೇಮಿಸಲಾಗಿತ್ತು. ಶಿರಾದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಇದ್ದರು. ಶಿರಾದಲ್ಲಿ ಕೆಲಸ ಮಾಡಿದಂತೆ, ಆರ್ ಆರ್ ನಗರದಲ್ಲಿ ಸಚಿವ ಅಶೋಕ್ ಅವರೂ ಕೆಲಸ ಮಾಡಿದ್ದಾರೆ" ಎಂದರು.
ಸಿದ್ದರಾಮಯ್ಯನವರು ಇನ್ನೂ ಸಣ್ಣತನ ಬಿಟ್ಟಿಲ್ಲ: ಸಚಿವ ಈಶ್ವರಪ್ಪ
ಉಪ ಚುನಾವಣೆಯ ಈ ಗೆಲುವಿನಲ್ಲಿ ವಿಜಯೇಂದ್ರ ಅವರ ಪಾತ್ರ ಇಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಈ ವಿಷಯವನ್ನು ಕೆಲವರು ವೈಭವೀಕರಿಸುತ್ತಿದ್ದಾರೆ ಎಂದ ಅವರು, ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ ಎಂದು ಹೇಳಿದರು.
ಇದೇ ಸಂದರ್ಭ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತವಾದ ಕುರಿತು ಪ್ರತಿಕ್ರಿಯಿಸಿ, "ಈವರೆಗೆ ರಾಜ್ಯದಲ್ಲಿ ಹಲವು ಪ್ರಾಧಿಕಾರಗಳು ರಚನೆಯಾಗಿವೆ. ಸಮುದಾಯದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಪ್ರಾಧಿಕಾರ ರಚನೆ ಮಾಡಿದ್ದಾರೆ. ಆದರೆ ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡುತ್ತೇವೆ ಎಂದರು.
ಲಿಂಗಾಯತ ಸಮುದಾಯದವರು ಪ್ರಾಧಿಕಾರ ರಚನೆಗೆ ಒತ್ತಾಯ ಮಾಡುತ್ತಿದ್ದಾರೆ. ಒತ್ತಾಯ ಮಾಡುತ್ತಿರುವುದು ತಪ್ಪೇನಿಲ್ಲ. ಈ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ತಿಳಿಸಿದರು.