ಪ್ರವಾಹಕ್ಕೆ ಸಿಲುಕಿ ರಕ್ಷಣೆಗೆ ಮರವೇರಿ ಕುಳಿತ ಹತ್ತಾರು ಹಾವುಗಳು
ಶಿವಮೊಗ್ಗ, ಆಗಸ್ಟ್ 08: ಮಲೆನಾಡಿನಲ್ಲಿ ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಇದರಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಜನರೊಂದಿಗೆ ಪ್ರಾಣಿಗಳ ಜೀವವೂ ಅಪಾಯದಲ್ಲಿದೆ.
ಅತಿಯಾದ ಮಳೆಯ ಕಾರಣ ಜಲಚರಗಳು, ಸರೀಸೃಪಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ನದಿ ಪ್ರವಾಹ ಉಂಟಾಗಿದ್ದು ಹಾವುಗಳು ಪ್ರವಾಹದ ರಭಸಕ್ಕೆ ಕೊಚ್ಚಿಹೋಗುತ್ತಿವೆ. ಪ್ರವಾಹಕ್ಕೆ ಸಿಲುಕಿರುವ ಹಾವುಗಳು ನೀರಿನಿಂದ ರಕ್ಷಣೆ ಪಡೆಯಲು ನದಿಯಂಚಿನ ಮರಗಳನ್ನು ಏರಿ ಕುಳಿತಿವೆ.
ನಾಲ್ಕು ದಿನಗಳಿಂದ ಮಳೆ; ಚಿಕ್ಕಮಗಳೂರಿನಲ್ಲಿ ಅಸ್ತವ್ಯಸ್ತವಾದ ಬದುಕು
ಶಿವಮೊಗ್ಗದ ತುಂಗಾ ಸೇತುವೆ ಬಳಿ ಇರುವ ಸಣ್ಣ ಅರಳೀಮರದಲ್ಲಿ 10ಕ್ಕೂ ಹೆಚ್ಚು ಹಾವುಗಳು ಏರಿ ಕುಳಿತಿದ್ದು ಪ್ರವಾಹದಿಂದ ರಕ್ಷಣೆ ಪಡೆದಿವೆ.
ಈಗಾಗಲೇ ರಭಸವಾದ ಮಳೆ ಹಾಗೂ ನದಿ ಪ್ರವಾಹದಿಂದಾಗಿ ಜನ ಕಂಗೆಟ್ಟಿದ್ದಾರೆ. ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಜನರೊಂದಿಗೆ ಪ್ರಾಣಿಗಳೂ ತಮ್ಮ ಜೀವ ಉಳಿಸಿಕೊಳ್ಳಲು ಪರದಾಡುತ್ತಿವೆ.