ಶಿವಮೊಗ್ಗ ಸ್ಮಾರ್ಟ್ ಸಿಟಿ; ಕಂಡಕಂಡಲ್ಲಿ ಗುಂಡಿ, ಮಳೆಯಲ್ಲಿ ಸಂಕಷ್ಟ!
ಶಿವಮೊಗ್ಗ, ಜುಲೈ 12; ಸ್ಮಾರ್ಟ್ಸಿಟಿ ಕಾಮಗಾರಿಯ ಗೋಳು ಮುಗಿಯುವ ಹಾಗೆ ಕಾಣುತ್ತಿಲ್ಲ. ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಜೆಸಿಬಿಗಳು ರಸ್ತೆಗಳನ್ನು ಅಗೆಯಲು ಆರಂಭಿಸಿವೆ. ಎಲ್ಲೆಂದರಲ್ಲಿ ಗುಂಡಿಯಿಂದಾಗಿ ವಾಹನ ಸವಾರರು ಭೀತಿಗೊಳಗಾಗಿದ್ದಾರೆ. ಈ ನಡುವೆ ಮಳೆ ಶುರುವಾಗುವ ಹೊತ್ತಿಗೆ ಕಾಮಗಾರಿ ನಡೆಸುತ್ತಿರುವುದಕ್ಕೆ ಜನರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ನಗರದ ಕುವೆಂಪು ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಗುಂಡಿಗಳನ್ನು ಅಗೆಯಲಾಗಿದೆ. ವಾಹನ ದಟ್ಟಣೆ ಹೆಚ್ಚಿರುವ ರಸ್ತೆ ಇದು. ಆಸ್ಪತ್ರೆಗಳು ಇರುವುದರಿಂದ ಆಂಬುಲೆನ್ಸ್ಗಳ ಸಂಚಾರವು ಹೆಚ್ಚು. ಗುಂಡಿಗಳಿಂದಾಗಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ.
ಸ್ಮಾರ್ಟ್ ಸಿಟಿ ಶಿವಮೊಗ್ಗ; ಗುಂಡಿಗೆ ಬೀಳುತ್ತಲೇ ಇವೆ ವಾಹನಗಳು!
ಜೈಲು ರಸ್ತೆಯಲ್ಲೂ ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದೆ. ಹಾಗಾಗಿ ವಾಹನ ಸಂಚಾರ ಕಷ್ಟವಾಗಿದೆ. ಪಾದಚಾರಿಗಳು ಕೂಡ ಓಡಾಡಲು ಸಾಹಸ ಮಾಡಬೇಕಿದೆ. ಇವೆರಡು ರಸ್ತೆಗಳು ಉದಾಹರಣೆಯಷ್ಟೆ. ಇದೆ ಪರಿಸ್ಥಿತಿ ಸ್ಮಾರ್ಟ್ಸಿಟಿ ವ್ಯಾಪ್ತಿಗೆ ಒಳಪಡುವ ವಾರ್ಡ್ಗಳಲ್ಲಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಆರ್ ಮಾರುಕಟ್ಟೆ ಅಭಿವೃದ್ಧಿ
ವ್ಯಾಪಾರ ಮಾಡಲು ಕಷ್ಟ; ಸ್ಮಾರ್ಟ್ಸಿಟಿ ಕಾಮಗಾರಿಯಿಂದಾಗಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ. ಚರಂಡಿ ಕಾಮಗಾರಿ, ಕೇಬಲ್ ಅಳವಡಿಕೆ ಸೇರಿದಂತೆ ಹಲವು ಕಾರ್ಯಗಳು ನಡೆಯುತ್ತಿದೆ. ಇದು ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದೆ.
ಸ್ಮಾರ್ಟ್ ಸಿಟಿ ಯೋಜನೆ; ಬೆಂಗಳೂರಿನ 20 ರಸ್ತೆ ಅಭಿವೃದ್ಧಿ
"ಲಾಕ್ಡೌನ್ನಿಂದ ವ್ಯಾಪಾರ ಇಲ್ಲವಾಗಿತ್ತು. ಈಗ ಸ್ಮಾರ್ಟ್ಸಿಟಿ ಕೆಲಸದಿಂದಾಗಿ ವ್ಯಾಪಾರ ಮಾಡಲು ಆಗುತ್ತಿಲ್ಲ. ನಮ್ಮ ಪರಿಸ್ಥಿತಿ ಯಾರಿಗೆ ಹೇಳುವುದು ಗೊತ್ತಾಗುತ್ತಿಲ್ಲ" ಎನ್ನುತ್ತಾರೆ ಕುವೆಂಪು ರಸ್ತೆಯಲ್ಲಿರುವ ಮಳಿಗೆ ಮಾಲೀಕ ಪ್ರಶಾಂತ್.
ಮಳೆ ಶುರುವಾದಾಗ ಕೆಲಸ; ಎರಡು ತಿಂಗಳು ಲಾಕ್ಡೌನ್ ಅವಧಿಯಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ನಡೆಸಲು ಯಾವುದೇ ಅಡ್ಡಿ ಇರಲಿಲ್ಲ. ಆದರೆ ಈ ವೇಳೆ ಹಲವು ಕಾರ್ಮಿಕರು ತಮ್ಮೂರಿಗೆ ಮರಳಿದ್ದರು. ಹಾಗಾಗಿ ಕೆಲಸ ನಡೆಯಲಿಲ್ಲ. ಈಗ ಮಳೆ ಆರಂಭವಾದಾಗ ಕಾಮಗಾರಿ ನಡೆಸಲಾಗುತ್ತಿದೆ.
"ಸ್ಮಾರ್ಟ್ ಸಿಟಿಯ ಯಾವುದೇ ಕಾಮಗಾರಿಗೂ ಸರಿಯಾದ ಕ್ಯೂರಿಂಗ್ ಮಾಡುತ್ತಿಲ್ಲ. ಈಗ ನೋಡಿದರೆ ಮಳೆ ಶುರುವಾಗುವಾಗ ಗುಂಡಿಗಳನ್ನು ಅಗೆದಿದ್ದಾರೆ. ಕಾಮಗಾರಿ ಮಾಡುತ್ತಿದ್ದಾರೆ. ಇದು ಕಾಮಗಾರಿಯ ಗುಣಮಟ್ಟ ಪ್ರಶ್ನಿಸುವಂತೆ ಮಾಡಿದೆ" ಎನ್ನುತ್ತಾರೆ ಸ್ಥಳೀಯರಾದ ಗಿರೀಶ್.
ಒಂದೆಡೆ ಸ್ಮಾರ್ಟ್ಸಿಟಿ ಕಾಮಗಾರಿ ವಿಳಂಬವಾಗುತ್ತಿದೆ. ಇನ್ನೊಂದೆಡೆ ನಾಗರಿಕರ ಸಹಭಾಗಿತ್ವವಿಲ್ಲದೆ ಏಕಪಕ್ಷೀಯವಾಗಿ ಕಾಮಗಾರಿಗಳು ನಡೆಯುತ್ತಿರುವ ಆರೋಪವಿದೆ. ಈ ನಡುವೆ ಮಳೆಗಾಲದಲ್ಲಿ ಕೆಲಸ ನಡೆಸುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.