ಸಿಗಂದೂರು ದೇವಾಲಯ ಮುಜರಾಯಿಗೆ; ವಿವಾದಕ್ಕೆ ತೆರೆ ಎಳೆದ ಹಾಲಪ್ಪ
ಶಿವಮೊಗ್ಗ, ಅಕ್ಟೋಬರ್ 21 : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ನೀಡುವ ಕುರಿತು ಹಬ್ಬಿರುವ ಸುದ್ದಿಗಳಿಗೆ ಬಿಜೆಪಿ ಶಾಸಕ ಹಾರತಾಳು ಹಾಲಪ್ಪ ತೆರೆ ಎಳೆದಿದ್ದಾರೆ.
"ಸಿಗಂದೂರು ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ಇಲ್ಲವೇ ಯಾವುದಾದರೂ ಮಠಗಳಿಗೆ ವಹಿಸಿಕೊಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಮುಜರಾಯಿ ಇಲಾಖೆಗೆ ಸೇರಿಸುವುದಕ್ಕೆ ನನ್ನ ವಿರೋಧವೂ ಇದೆ" ಎಂದು ಹಾಲಪ್ಪ ಹೇಳಿದ್ದಾರೆ.
ಸಿಗಂದೂರು ದೇವಾಲಯ ಮುಜರಾಯಿ ಇಲಾಖೆಗೆ; ಯಡಿಯೂರಪ್ಪ ಹೇಳಿದ್ದೇನು?
"ರಾಮಪ್ಪ ಧರ್ಮದರ್ಶಿಯಾಗಿ, ಎಸ್. ಪಿ. ಶೇಷಗಿರಿ ಭಟ್ ಪ್ರಧಾನ ಅರ್ಚಕರಾಗಿ ಮುಂದುವರಿಯಬೇಕು. ದೇವಾಲಯದ ಆದಾಯದ ಫಲಾನುಭವಿ ನಾನಲ್ಲ. ಆಡಳಿತ ವ್ಯವಸ್ಥೆಯಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ" ಎಂದು ಸಾಗರದ ಶಾಸಕ ಹರತಾಳು ಹಾಲಪ್ಪ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ; ಸಿಗಂದೂರು ದೇವಾಲಯದ ಯಥಾಸ್ಥಿತಿ ಮುಂದುವರಿಕೆ?
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು "ಸಿಗಂದೂರು ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೋ, ಬೇಡವೋ ಎಂಬ ಬಗ್ಗೆ ಶಾಸಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದರು.
ಸಿಗಂದೂರು ದೇವಾಲಯದಲ್ಲಿ ಗದ್ದಲ, ಗಲಾಟೆ; ಪೊಲೀಸರ ಪ್ರವೇಶ
2015ರಲ್ಲಿಯೇ ಪತ್ರ ಬರೆದಿದ್ದರು
"2015ರಲ್ಲಿಯೇ ಕೆಲವರು ಸಿಗಂದೂರು ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಆಗ ನಾನು ಶಾಸಕನಾಗಿ ಇರಲಿಲ್ಲ. ದೇವಾಲಯವನ್ನು ಮುಂದಿಟ್ಟುಕೊಂಡು ಕೆಲವರು ಅನಗತ್ಯವಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ" ಎಂದು ಶಾಸಕ ಹರತಾಳು ಹಾಲಪ್ಪ ಆರೋಪಸಿದ್ದಾರೆ.
ಎಲ್ಲವನ್ನು ದೇವಿಯೇ ನೋಡಿಕೊಳ್ಳುತ್ತಾಳೆ
"ಧರ್ಮದರ್ಶಿ ರಾಮಪ್ಪ ಅವರ ಮುಗ್ಧತೆ ಬಳಕೆ ಮಾಡಿಕೊಂಡು ಅನಗತ್ಯ ವಿವಾದವನ್ನು ಸೃಷ್ಟಿ ಮಾಡಲಾಗುತ್ತಿದೆ. ಶೇಷಗಿರಿ ಭಟ್ ಮನೆತನದವರು ತಲೆತಲಾಂತರದಿಂದ ದೇವಿಯ ಪೂಜೆಯನ್ನು ಮಾಡುತ್ತಿದ್ದಾರೆ. ಅವರಿಬ್ಬರೂ ಒಟ್ಟಾಗಿ ಹೋಗುವುದಕ್ಕೆ ಕೆಲವರು ಅವಕಾಶ ನೀಡುತ್ತಿಲ್ಲ. ಎಲ್ಲವವನ್ನೂ ದೇವಿಯೇ ನೋಡಿಕೊಳ್ಳುತ್ತಾಳೆ" ಎಂದು ಶಾಸಕರು ಹೇಳಿದರು.
ಯಥಾಸ್ಥಿತಿ ಕಾಪಾಡುವುದು ಸೂಕ್ತ
"ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಹೋಗುವುದು ಸೂಕ್ತ. ದೇವಾಲಯದ ವಿಚಾರದಲ್ಲಿ ಜಾತಿ, ರಾಜಕಾರಣ ಮಾಡುವುದು ಸರಿಯಲ್ಲ. ಇದು ಎಲ್ಲಾ ಸಮುದಾಯಕ್ಕೂ ಸೇರಿದ ದೇವಾಲಯ" ಎಂದು ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಮುಜರಾಯಿ ಇಲಾಖೆಗೆ ನೀಡಲು ವಿರೋಧ
ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ನೀಡಲು ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ ಮುಜರಾಯಿಗೆ ನೀಡಿದರೆ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದೆ.