ಶಿವಮೊಗ್ಗ; ಸಿಗಂದೂರು ದೇವಾಲಯದ ಯಥಾಸ್ಥಿತಿ ಮುಂದುವರಿಕೆ?
ಶಿವಮೊಗ್ಗ, ಅಕ್ಟೋಬರ್ 20 : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ನೀಡುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರದ ಪ್ರಸ್ತಾವನೆವನ್ನು ಜಿಲ್ಲೆಯ ಈಡಿಗ ಸಮುದಾಯ ವಿರೋಧಿಸಿದೆ.
ಸೊರಬ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಈ ಕುರಿತು ಮಾತನಾಡಿದ್ದಾರೆ. "ಸಿಗಂದೂರು ದೇವಾಲಯದ ಆಡಳಿತ ನಿರ್ವಹಣೆ, ಪೂಜಾ ಕಾರ್ಯಗಳ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವುದು ಸೂಕ್ತ" ಎಂದು ಹೇಳಿದ್ದಾರೆ.
ಸಿಗಂದೂರು ದೇವಾಲಯ ಮುಜರಾಯಿ ಇಲಾಖೆಗೆ; ಯಡಿಯೂರಪ್ಪ ಹೇಳಿದ್ದೇನು?
"ದೇವಾಲಯದ ವಿಚಾರದಲ್ಲಿ ಜಾತಿ ಹಾಗೂ ರಾಜಕಾರಣ ಮಾಡುವುದು ಸರಿಯಲ್ಲ. ಇದು ಎಲ್ಲಾ ಸಮುದಾಯದವರಿಗೆ ಸೇರಿದ ದೇವಾಲಯ. ಈಗ ಆಗಿರುವ ಗೊಂದಲವನ್ನು ನಾಲ್ಕು ಗೋಡೆಗಳ ನಡುವೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಮುಖ್ಯಮಂತ್ರಿಗಳಿಗೂ ನನ್ನ ನಿಲುವನ್ನು ತಿಳಿಸಿದ್ದೇನೆ" ಎಂದು ಶಾಸಕರು ತಿಳಿಸಿದ್ದಾರೆ.
ದೇಗುಲದಲ್ಲಿ ಗಲಭೆ; ಸಿಗಂದೂರು ದೇವಾಲಯಕ್ಕೆ ಜಿಲ್ಲಾಧಿಕಾರಿ ಭೇಟಿ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭಾನುವಾರ ಶಿಕಾರಿಪುರದಲ್ಲಿ ಮಾತನಾಡಿ, "ಸಿಗಂದೂರು ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೋ, ಬೇಡವೋ ಎಂಬ ಬಗ್ಗೆ ಸಾಗರ ಮತ್ತು ಸೊರಬ ಶಾಸಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದರು.
ಸಿಗಂದೂರು ದೇವಾಲಯದಲ್ಲಿ ಗದ್ದಲ, ಗಲಾಟೆ; ಪೊಲೀಸರ ಪ್ರವೇಶ
ದೇವಾಲಯದಲ್ಲಿ ಗೊಂದಲ; ಕಳೆದ ಶುಕ್ರವಾರ ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಮತ್ತು ಭಕ್ತರ ನಡುವೆ ಗದ್ದಲ ನಡೆದಿತ್ತು. ಈ ಘಟನೆ ದೇವಾಲಯದ ಭಕ್ತರಲ್ಲಿ ನೋವು ಉಂಟು ಮಾಡಿತ್ತು. ಬಳಿಕ ಶಿವಮೊಗ್ಗ ಜಿಲ್ಲಾಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿದ್ದರು.
"ದೇವರ ಹೆಸರಿನಲ್ಲಿ ಗಲಾಟೆ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂಬ ಕೂಗು ಹೆಚ್ಚಾಗಿದೆ. ದೇವಾಲಯದಲ್ಲಿ ನಡೆದ ಘಟನೆಯೂ ಗಮನಕ್ಕೆ ಬಂದಿದೆ" ಎಂದು ಮುಖ್ಯಮಂತ್ರಿಗಳು ಶಿಕಾರಿಪುರದಲ್ಲಿ ಹೇಳಿಕೆ ನೀಡಿದ್ದರು.
ದೇವಾಲಯದಲ್ಲಿ ನಡೆದ ಗದ್ದಲ ಒಂದು ಕಡೆ. ಮತ್ತೊಂದು ಕಡೆ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ನೀಡಲು ವಿರೋಧ ವ್ಯಕ್ತಪಡಿಸಿತ್ತು. ಇಲಾಖೆಗೆ ವಹಿಸುವ ತೀರ್ಮಾನ ಮಾಡಿದರೆ ಹೋರಾಟ ಮಾಡುವ ಎಚ್ಚರಿಕೆ ಕೊಟ್ಟಿತ್ತು.
ಸರ್ಕಾರ ದೇವಾಲಯದ ಆಡಳಿತ ನಿರ್ವಹಣೆ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ವರದಿ ಹೇಳಿದೆ. ವರದಿ ಆಧರಿಸಿ ಸರ್ಕಾರ ಮುಂದಿನ ತೀರ್ಮಾನವನ್ನು ಕೈಗೊಳ್ಳುವ ನಿರೀಕ್ಷೆ ಇದೆ.