ಹೊಳೆಬಾಗಿಲು-ಸಿಗಂದೂರು ಸಂಪರ್ಕ ಸೇತುವೆಗೆ ಕೇಂದ್ರ ಅಸ್ತು
ಸಿಗಂದೂರು, ಫೆಬ್ರವರಿ 05: ಪ್ರಸಿದ್ಧ ಯಾತ್ರಾ ಕ್ಷೇತ್ರ ಸಿಗಂದೂರು ಮತ್ತು ಹೊಳೆಬಾಗಿಲು ನಡುವೆ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಕೇಂದ್ರ ಹಸಿರು ನಿಶಾನೆ ತೋರಿಸಿದ್ದು, ಅದಕ್ಕಾಗಿ 600 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ.
ಸೇತುವೆ ನಿರ್ಮಾಣದಿಂದ ಸಿಗಂದೂರು, ಕೊಲ್ಲೂರು ಮುಂತಾದ ಯಾತ್ರಾ ಸ್ಥಳಗಳಿಗೆ ಹೋಗುವುದು ಸುಗಮವಾಗಲಿದ್ದು, ಶರವಾತಿ ನದಿ ಹಿನ್ನೀರಿನ ಜನರ ಜೀವನ ಸುಧಾರಿಸಲಿದೆ.
ಸಿಗಂದೂರಿಗೆ ಸೇತುವೆ : ದಶಕಗಳ ಕನಸು ನನಸು
ಶರವಾತಿ ಜಲವಿದ್ಯುತ್ ಯೋಜನೆಯಿಂದಾಗಿ ಸಾಗರ ತಾಲ್ಲೂಕಿನ ಕರೂರು, ಬಾರಂಗಿ, ಆವಿನಹಳ್ಳಿ, ಹೋಬಳಿಗಳ 5000 ಕ್ಕೂ ಹೆಚ್ಚು ಕುಟುಂಬಗಳು ಪ್ರಮುಖ ವಾಣಿಜ್ಯ ಕ್ಷೇತ್ರ ಸಾಗರದೊಂದಿಗೆ ಸಂಪರ್ಕ ಕಡಿದುಕೊಂಡಿದ್ದವು. ಇದರಿಂದ ಅವರ ಆರೋಗ್ಯ, ಶಿಕ್ಷಣದಂತಹಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದರು ಆದರೆ ಸೇತುವೆ ನಿರ್ಮಾಣದ ಬಳಿಕ ಆ ಜನರ ಜೀವನ ಸಹಜ ಸ್ಥಿತಿಗೆ ಮರಳುವ ವಿಶ್ವಾಸವಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಸಂಪರ್ಕ ಸೇತುವೆ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದು, ಅವರು ಮನವಿಗೆ ಸ್ಪಂದಿಸಿದ ಕಾರಣ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ಲಭಿಸಿದೆ ಎನ್ನಲಾಗಿದೆ. ಸ್ವತಃ ಯಡಿಯೂರಪ್ಪ ಅವರು ಈ ವಿಷಯವನ್ನು ಹೇಳಿದ್ದಾರೆ.
ಸಾಗರ, ಹೊಳೆಬಾಗಿಲು, ಸಿಗಂದೂರು, ಮರಕುಟುಕ ಮೂಲಕ ಬೈಂದೂರು-ರಾಣೆ ಬೆನ್ನೂರು ರಾಷ್ಟ್ರೀಯ ಹೆದ್ದಾರಿಗೆ ಜೋಡಣೆ ಮಾಡಿ, ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಮಾಡಿ ಸೇತುವೆ ನಿರ್ಮಾಣಕ್ಕೆ 600 ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ ಎಂದು ಯಡಿಯೂರಪ್ಪ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದೇ ತಿಂಗಳ 19ನೇ ತಾರೀಖಿನಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಆಗಮಿಸಿ ಸೇತುವೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.