ಸಿಂಗದೂರು ದೇವಿ ನಮಗೆ ಸೇರಿದವಳು, ವಿಗ್ರಹ ನಮಗೆ ಕೊಡಿ: ಮತ್ತೊಂದು ಕುಟುಂಬದ ಬೇಡಿಕೆ
ಶಿವಮೊಗ್ಗ, ಅಕ್ಟೋಬರ್ 21: ಸಿಗಂದೂರಿನಲ್ಲಿ ಪ್ರಧಾನ ಅರ್ಚಕ ಮತ್ತು ಧರ್ಮದರ್ಶಿಗಳ ನಡುವಿನ ತಿಕ್ಕಾಟ ಹೆಚ್ಚಾದ ಸಂದರ್ಭದಲ್ಲಿಯೇ, ಸಿಗಂದೂರು ದೇವಿ ನಮ್ಮ ಕುಟುಂಬದ ಆರಾಧಕಳು ನಮಗೆ ಕೊಡಿ ಎಂಬ ಕೂಗು ಸಾಗರ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿದೆ.
ಇಂದು ಸಿಗಂದೂರು ಚೌಡೇಶ್ವರಿ ನಮ್ಮ ಕುಟುಂಬದ ಆರಾಧಕಳಾಗಿದ್ದು, ನಮಗೆ ಆ ದೇವಿಯ ವಿಗ್ರಹವನ್ನು ಕೊಡಿ ಎಂದು ನಾರಾಯಣ ಎಂಬುವವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಳಿಕೊಂಡಿದ್ದಾರೆ.
ಸಿಗಂದೂರು ದೇವಾಲಯ ಮುಜರಾಯಿಗೆ; ವಿವಾದಕ್ಕೆ ತೆರೆ ಎಳೆದ ಹಾಲಪ್ಪ
""ನಮ್ಮ ಅಜ್ಜಿ ಅಪ್ಪಾಣಿ ಚೌಡಮ್ಮನಿಂದ ಸ್ಥಾಪಿತಗೊಂಡ ಚೌಡೇಶ್ವರಿ ದೇವಿಯನ್ನು ಜಟ್ಟಾನಾಯ್ಕ ಎಂಬುವವರು ನೋಡಿಕೊಂಡು ಬರುತ್ತಿದ್ದರು. ಕಾಲಕ್ರಮೇಣ ಸೀಗೆ ಕಣಿವೆ ಎಂಬಲ್ಲಿದ್ದ ದೇವಸ್ಥಾನದಲ್ಲಿ ಹಣ ಬಂಗಾರ ಕಳ್ಳತನಗೊಂಡ ಆರೋಪದಡಿ ರಾಮಪ್ಪ ಮತ್ತು ಶೇಷನಾಯ್ಕರವರು ನಮ್ಮ ತಂದೆಯವರನ್ನು ಹೊರಹಾಕುವಲ್ಲಿ ಯಶಸ್ವಿಯಾದರು'' ಎಂದು ಹೇಳಿದರು.
ಈಗ ರಾಮಪ್ಪನವರು ದೇವಸ್ಥಾನವನ್ನು ಬೆಳೆಸಿದ್ದಾರೆ. ಇಲ್ಲಿಯವರೆಗೆ ದೇವಾಲಯದಲ್ಲಿ ದುಡಿದ ಹಣದಲ್ಲಿ ಒಂದು ಪೈಸೆಯನ್ನು ನಾನು ಕೇಳುವುದಿಲ್ಲ. ಆದರೆ ವಿಗ್ರಹವನ್ನು ಕೊಡಿ ನಾವು ಅದನ್ನು ಪೂಜಿಸಲಿದ್ದೇನೆ ಎಂದರು.
ಚೌಡೇಶ್ವರಿ ದೇವಿಗೆ ಅಪಪ್ರಚಾರವಾಗುತ್ತಿದ್ದು, ತಿಕ್ಕಾಟ ಆರಂಭವಾಗಿದೆ. ಹಾಗಾಗಿ ಆ ದೇವಿ ನಮಗೆ ಕೊಡಿ, ನಮ್ಮ ಅಪ್ಪಾಣಿ ಅಜ್ಜಿಯಿಂದ ಈ ದೇವಿ ಪ್ರತಿಷ್ಠಾಪನೆ ಆಗಿದೆ ಎಂದು ಹೇಳಿದರು.
ಬಳೆಕೊಪ್ಪದಲ್ಲಿ ಈಗಲೂ ಸಿಗಂದೂರು ದೇವಿಯ ವಿಗ್ರಹವನ್ನಿಟ್ಟು ಪೂಜಿಸಲಾಗುತ್ತಿದೆ. ಇದನ್ನು ನಾನು ಧರ್ಮಸ್ಥಳದಲ್ಲಿಯೂ ದೇವರ ಮುಂದೆ ಬಂದು ಹೇಳಲು ಸಿದ್ಧನಿದ್ದೇನೆ ಎಂದು ನಾರಾಯಣ ತಿಳಿಸಿದರು.
ಸಿಗಂದೂರು ಚೌಡೇಶ್ವರಿ ನಮ್ಮ ದೇವರು ಎಂದು ಶಿವಮೊಗ್ಗದವರೆಗೆ ಬಂದು ಹಕ್ಕು ಚಲಾಯಿಸುತ್ತಿರುವ ಕುಟುಂಬಗಳಲ್ಲಿ ನಾರಾಯಣ ಇವರು ನಾಲ್ಕನೆಯವರಾಗಿದ್ದಾರೆ.