ಬಿಜೆಪಿ ಪಕ್ಷದ ದಬ್ಬಾಳಿಕೆ, ಅನ್ಯಾಯ; ಸಿದ್ದರಾಮಯ್ಯ ಟ್ವೀಟ್
ಶಿವಮೊಗ್ಗ, ಮಾರ್ಚ್ 04: ವಿಧಾನಸಭೆ ಅಧಿವೇಶನದ ಸಮಯದಲ್ಲಿ ಸದನದ ಬಾವಿಗಿಳಿದು ಶರ್ಟ್ ಬಿಚ್ಚಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್ವರ್ರನ್ನು ಒಂದು ವಾರಗಳ ಕಾಲ ಸದನದಿಂದ ಅಮಾನತುಗೊಳಿಸಲಾಗಿದೆ.
ಗುರುವಾರ ವಿಧಾನಸಭೆ ಕಲಾಪ ಆರಂಭವಾದಾಗ ನಡೆದ ಈ ಘಟನೆ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. " ಭದ್ರಾವತಿ ಶಾಸಕರಾದ ಸಂಗಮೇಶ್ ಅವರು ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರುವಂತೆ ವರ್ತಿಸಿಲ್ಲ" ಎಂದು ಹೇಳಿದ್ದಾರೆ.
ಅಂಗಿ ಬಿಚ್ಚಿದ್ದಕ್ಕೆ ಕಾರಣ ಕೊಟ್ಟ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್!
"ಶಿವಮೊಗ್ಗ ಜಿಲ್ಲೆಯಲ್ಲಿ ಆಡಳಿತ ಪಕ್ಷದವರು ನಡೆಸುತ್ತಿರುವ ಅನ್ಯಾಯ, ದಬ್ಬಾಳಿಕೆಗಳಿಂದ ನೊಂದು ಸದನದಲ್ಲಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಭದ್ರಾವತಿಯಲ್ಲಿ ನಿಷೇಧಾಜ್ಞೆ; ಬಂಧನದ ಬಗ್ಗೆ ಶಾಸಕರ ಸ್ಪಷ್ಟನೆ
"ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ಪುತ್ರ ಸಂಸದ ರಾಘವೇಂದ್ರ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಶಾಸಕ ಸಂಗಮೇಶ್ ಮತ್ತು ಅವರ ಕುಟುಂಬದವರ ವಿರುದ್ಧ ಕ್ಷುಲ್ಲಕ ಕಾರಣಕ್ಕೆ ಕೊಲೆ ಯತ್ನದ ಮೊಕದ್ದಮೆಯನ್ನು ದಾಖಲಿಸುವಂತೆ ಮಾಡಿದ್ದಾರೆ" ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಭದ್ರಾವತಿ ಎಂಪಿಎಂ ಖಾಸಗೀಕರಣ; ಸರ್ಕಾರದಿಂದ ಟೆಂಡರ್ ಆಹ್ವಾನ
"ಸಂಗಮೇಶ್ ಅವರನ್ನು ಒಂದು ವಾರದ ಕಾಲ ಸದನದಿಂದ ವಜಾ ಮಾಡಿರುವ ಸ್ಪೀಕರ್ ಅವರ ಆದೇಶವನ್ನು ನಾನು ಖಂಡಿಸುತ್ತೇನೆ. ಸಂಗಮೇಶ್ ಅವರಿಗಾಗಲೀ, ಪ್ರತಿಪಕ್ಷದ ನಾಯಕನಾದ ನನಗಾಗಲೀ ಮಾತನಾಡಲು ಅವಕಾಶ ನೀಡದೆ ವಿಧಾನ ಸಭಾಧ್ಯಕ್ಷರು ಏಕಪಕ್ಷೀಯವಾಗಿ ಕೈಗೊಂಡಿರುವ ನಿರ್ಣಯ ಅಸಂವಿಧಾನಿಕ" ಎಂದು ಸಿದ್ದರಾಮಯ್ಯ ಟ್ವೀಟ್ನಲ್ಲಿ ದೂರಿದ್ದಾರೆ.
"ಸಂಗಮೇಶ್ ಅವರ ಮೇಲೆ ದಾಖಲಿಸಲಾಗಿರುವ ಸುಳ್ಳು ಮೊಕದ್ದಮೆಯನ್ನು ವಾಪಾಸು ಪಡೆದು ಸರ್ಕಾರ ಕ್ಷಮಾಪಣೆ ಕೇಳಬೇಕು ಮತ್ತು ಅವರನ್ನು ಸದನದಿಂದ ವಜಾಗೊಳಿಸಿರುವ ನಿರ್ಣಯವನ್ನು ಕೂಡ ಹಿಂಪಡೆಯಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಭದ್ರಾವತಿಯಲ್ಲಿ ನಿಷೇಧಾಜ್ಞೆ; ಫೆಬ್ರವರಿ 27 ಮತ್ತು 28ರಂದು ಭದ್ರಾವತಿಯ ಕನಕ ಮಂಟಪದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು. ನಂತರ ಬೆಳವಣಿಗೆಯಲ್ಲಿ ಮತ್ತೊಮ್ಮೆ ಗಲಾಟೆ ನಡೆಯುವ ಸುಳಿವು ಸಿಕ್ಕಿತ್ತು. ಇದರಿಂದಾಗಿ ಪಟ್ಟಣದಲ್ಲಿ ಮಾರ್ಚ್ 5ರ ಮಧ್ಯರಾತ್ರಿ 12ರ ತನಕ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕಾಂಗ್ರೆಸ್ ಶಾಸಕ ಬಿ. ಕೆ. ಸಂಗಮೇಶ್ವರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನಲೆಯಲ್ಲಿ ಶಾಸಕರು ಇಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಿದರು.