"ನೀರಾವರಿ ಯೋಜನೆಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ''
ಶಿವಮೊಗ್ಗ , ಜನವರಿ 11: ಶಿಕಾರಿಪುರ ತಾಲೂಕಿನ ಹಾಗೂ ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನಗೆಳಿಗೆ ರಾಜ್ಯ ಸರ್ಕಾರ ಅನುದಾನಗಳನ್ನು ನೀಡಿ ಕಾಮಗಾರಿಗಳನ್ನು ನಡೆಸುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಆದರೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿಯ ತಾಲೂಕಿನ ರೈತರು, ನಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಅವರ ಬೆಂಬಲಕ್ಕೆ ನಿಂತು, ನಮ್ಮ ತಾಲೂಕಿನ ನೀರಾವರಿ ಯೋಜನೆಗಳಿಗೆ ಕಲ್ಲು ಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
"ಬಿಜೆಪಿಯಲ್ಲಿ ಬಿಎಸ್ವೈ ಸಮಾನ ರಾಜಕಾರಣಿ ಯಾರಿದ್ದಾರೆ ತೋರಿಸಿ''
ಪಟ್ಟಣ ಪಂಚಾಯತಿಯ ಮಂಗಳ ಭವನ ಹಿಂಭಾಗದ ಆವರಣದಲ್ಲಿ ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ವೈ ರಾಘವೇಂದ್ರ, ಒಳ್ಳೆಯ ಕೆಲಸಗಳಿಗೆ ಕಲ್ಲು ಹಾಕುವ ಕೆಲಸ ಎಂದಿಗೂ ಮಾಡಬಾರದು ಎಂದರು.
ಬಿಜೆಪಿ ಪಕ್ಷ ಜನಸಂಘದಿಂದಲೂ ಅನೇಕ ಹಿರಿಯರ, ಮಹನೀಯರ ಹೋರಾಟದ ಫಲವಾಗಿ ದೇಶ, ರಾಜ್ಯ, ಸ್ಥಳೀಯ ಚುನಾವಣೆಯಲ್ಲೂ ಅಧಿಕಾರ ಹಿಡಿಯುತ್ತಿದೆ ಎಂದು ತಿಳಿಸಿದರು.
ನೂತನ ಸದಸ್ಯರು ಹಿರಿಯ ಸದಸ್ಯರಿಗೆ ಗೌರವ ನೀಡಬೇಕು, ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು. ನಾವೆಲ್ಲ ಜನ ಸೇವಕರು, ಜನರ ಸೇವೆ ಮಾಡೊಣ ಎಂದು ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಕರೆ ನೀಡಿದರು.