ಮರು ಮೌಲ್ಯಮಾಪನದ ನಂತರ ಸುಭಾಷಿಣಿ ರಾಜ್ಯಕ್ಕೆ ಪ್ರಥಮ
ಶಿವಮೊಗ್ಗ, ಜೂನ್ 20: ಮರು ಮೌಲ್ಯಮಾಪನದ ನಂತರ 625ಕ್ಕೆ 625 ಅಂಕಗಳನ್ನು ಗಳಿಸಿದ ಶಿವಮೊಗ್ಗದ ಸುಭಾಷಿಣಿ ಅವರು ಎಸ್.ಎಸ್.ಎಲ್.ಸಿಯಲ್ಲಿ ಟಾಪರ್ ಎನಿಸಿಕೊಂಡಿದ್ದಾರೆ.
ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ ಸುಭಾಷಿಣಿಗೆ ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕ ಲಭಿಸಿವೆ. ಮರು ಮೌಲ್ಯಮಾಪನದಲ್ಲಿ ಮೂರು ಹೆಚ್ಚುವರಿ ಅಂಕಗಳನ್ನು ಗಳಿಸಿ ಕನ್ನಡದಲ್ಲಿ 125ಕ್ಕೆ 125 ಗಳಿಸಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಫಲಿತಾಂಶ ಪ್ರಕಟವಾಗಿದ್ದಾಗ, ಸುಭಾಷಿಣಿ ಅವರಿಗೆ ಕನ್ನಡ(ಪ್ರಥಮ ಭಾಷೆ) ಹೊರತು ಪಡಿಸಿ ಮಿಕ್ಕೆಲ್ಲಾ ಪಠ್ಯ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳು ಲಭಿಸಿತ್ತು. ಕನ್ನಡ ಭಾಷೆಯಲ್ಲಿ 125ಕ್ಕೆ 122ಅಂಕ ಬಂದಿತ್ತು. ಇದನ್ನು ಪ್ರಶ್ನಿಸಿ ಮರು ಮೌಲ್ಯಮಾಪನಕ್ಕೆ ಹಾಕಿದ್ದ ಸುಭಾಷಿಣಿಗೆ ಹೆಚ್ಚುವರಿ 3 ಅಂಕಗಳು ಈಗ ಲಭಿಸಿದೆ.
ತೆಲುಗು ಮನೆ ಭಾಷೆ: ಕೋಲಾರದ ಶಾಂತಿಪುರದ ಕೆ. ಶ್ರೀನಿವಾಸಲು ರೆಡ್ಡಿ ಹಾಗೂ ಸುಜಾತಾ ಅವರ ಪುತ್ರಿ ಸುಭಾಷಿಣಿ ಅವರು ಶಿವಮೊಗ್ಗದ ರಂಗನಾಥ ಬಡಾವಣೆಯಲ್ಲಿ ಅಜ್ಜನ ಮನೆ ಇದ್ದುಕೊಂಡು ಹೈಸ್ಕೂಲ್ ಮುಗಿಸಿದ್ದಾರೆ.
ಆದರೆ, ಏಳನೇ ತರಗತಿಯವರೆಗೂ ತೆಲುಗು ಮಾಧ್ಯಮದಲ್ಲಿ ಓದಿದ್ದು ವಿಶೇಷ. ಹೈಸ್ಕೂಲಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ತೆಗೆದುಕೊಂಡು ಈಗ 125ಕ್ಕೆ 125 ಅಂಕ ಗಳಿಸಿದ್ದಾರೆ. ಸುಭಾಷಿಣಿ ಅವರು ಬೆಂಗಳೂರಿನ ನಾರಾಯಣಗುರು ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಷಯ ವ್ಯಾಸಂಗ ಮಾಡುತ್ತಿದ್ದಾರೆ. ಮುಂದೆ ವೈದ್ಯೆಯಾಗುವ ಕನಸು ಕಾಣುತ್ತಿದ್ದಾರೆ.