ಶಿವಮೊಗ್ಗ : ಶೀಘ್ರದಲ್ಲೇ ಶಿವಪ್ಪ ನಾಯಕ ಅರಮನೆ ನವೀಕರಣ
ಶಿವಮೊಗ್ಗ, ಜುಲೈ 04 : ಶಿವಮೊಗ್ಗ ನಗರದಲ್ಲಿರುವ ಐತಿಹಾಸಿಕ ಶಿವಪ್ಪ ನಾಯಕ ಅರಮನೆಯನ್ನು ನವೀಕರಣ ಮಾಡಲಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಅರಮನೆ ನವೀಕರಣ ಮಾಡಲು ಮಹಾನಗರ ಪಾಲಿಕೆ ಯೋಜನೆ ರೂಪಿಸಿದೆ.
16ನೇ ಶತಮಾನದಲ್ಲಿ ಕೆಳದಿ ಶಿವಪ್ಪ ನಾಯಕ ತುಂಗಾ ನದಿ ತೀರದಲ್ಲಿ ಈ ಅರಮನೆಯನ್ನು ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ. ನಗರಾಭಿವೃದ್ಧಿ ಇಲಾಖೆಯ ಯೋಜನೆಯ ಅನುದಾನದಲ್ಲಿ ಅರಮನೆಯನ್ನು ನವೀಕರಣ ನಿರ್ಧರಿಸಲಾಗಿದೆ.
ಮೊದಲು ಈ ಅರಮನೆಯನ್ನು ಅರಣ್ಯ ಇಲಾಖೆ ಕಚೇರಿಯಾಗಿ ಬಳಕೆ ಮಾಡಲಾಗುತ್ತಿತ್ತು. 1984ರಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರ ಮಾಡಲಾಯಿತು. ಬಳಿಕ ಇದನ್ನು ಮ್ಯೂಸಿಯಂ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಅರಮನೆಯ ಆವರಣದಲ್ಲಿ ಇಂದಿಗೂ ಹಲವಾರು ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯುತ್ತವೆ. ಶಿವಮೊಗ್ಗ ಮಹಾನಗರ ಪಾಲಿಕೆ ಈಗ ಅರಮನೆಯನ್ನು ಅಭಿವೃದ್ಧಿಗೊಳಿಸಿ, ಪ್ರವಾಸಿ ತಾಣವಾಗಿ ಮಾಡಲು ವಿವರವಾದ ಯೋಜನಾ ವರದಿಯನ್ನು ತಯಾರಿಸಿದೆ.
ಪ್ರಸ್ತುತ ಅರಮನೆಗೆ ಭೇಟಿ ನೀಡುವ ಪ್ರವಾಸಿಗರು ನೇರವಾಗಿ ತುಂಗಾ ನದಿಯನ್ನು ನೋಡಬಹುದಾಗಿದೆ. ಈಗ ತಯಾರಿಸಿರುವ ಯೋಜನಾ ವರದಿ ಅನ್ವಯ ವ್ಯೂ ಪಾಯಿಂಟ್ ನಿರ್ಮಾಣ ಮಾಡಲಾಗುತ್ತದೆ. ನದಿ ಮತ್ತು ಅರಮನೆಗೆ ಸಂಪರ್ಕ ಕಲ್ಪಿಸುವಂತೆ ಮಾರ್ಗವನ್ನು ನಿರ್ಮಿಸಲಾಗುತ್ತದೆ.
ಅರಮನೆ, ಮಲೆನಾಡು, ಶಿವಮೊಗ್ಗದ ಪ್ರವಾಸಿ ಸ್ಥಳಗಳ ಕುರಿತು ಮಾಹಿತಿ ನೀಡುವ ಬೆಳಕು ಮತ್ತು ಧ್ವನಿ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಯೋಜನೆ ಸಿದ್ಧವಾಗಿದೆ. ಅರಮನೆಯ ಮುಂಭಾಗದ ಸ್ವಲ್ಪ ಜಾಗ ಅರಣ್ಯ ಇಲಾಖೆ ವಶದಲ್ಲಿದೆ. ಅದನ್ನು ನೀಡುವಂತೆ ಇಲಾಖೆ ಮನವಿ ಮಾಡಲಾಗಿದೆ.