ಜೋಗ ವೀಕ್ಷಣೆಗೆ ಬಂದವರಿಗೆ ಇವತ್ತು ನಿರಾಸೆ, ರಾಜ, ರಾಣಿ, ರೋರರ್, ರಾಕೆಟ್ ನಾಪತ್ತೆ
ಜೋರು ಮಳೆಯ ನಡುವೆಯು ಶಿವಮೊಗ್ಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಜೋಗ ಜಲಪಾತಕ್ಕೆ ಇವತ್ತು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಜಲಪಾತ ಕಣ್ತುಂಬಿಕೊಳ್ಳಲು ಸಾಧ್ಯವಾಗದೆ ನಿರಾಸೆಯಿಂದ ಹಿಂತಿರುಗುವಂತಾಗಿದೆ.
ಕಳೆದ ರಾತ್ರಿಯಿಂದ ಸಾಗರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಜೋಗ ಸುತ್ತಮುತ್ತಲು ಕೂಡ ನಿರಂತರ ಮಳೆ ಮತ್ತು ಮಂಜು ಮುಸುಕಿದ ವಾತಾವರಣವಿದೆ. ಹಾಗಾಗಿ ಜಲಪಾತ ಕಣ್ತುಂಬಿಕೊಳ್ಳುವುದು ಅಸಾಧ್ಯವಾಗಿದೆ.
ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳು ಧುಮ್ಮಿಕ್ಕುವ ಸದ್ದು ಕೇಳುತ್ತಿದೆ. ಆದರೆ ಜಲಪಾತವನ್ನು ಕಣ್ತುಂಬಿಕೊಳ್ಳಲು ಅಸಾಧ್ಯವಾಗಿದೆ.
ಜಲಪಾತ ಕಾಣಸಿಗದೆ ನಿರಾಸೆ
ಭಾನುವಾರ ಆಗಿರುವುದರಿಂದ ದೂರದ ಊರುಗಳಿಂದ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ. ಆದರೆ ಜಲಪಾತ ಕಾಣಸಿಗದೆ ನಿರಾಸೆಯಿಂದ ಹಿಂತಿರುಗುತ್ತಿದ್ದಾರೆ. ಫೋಟೊ, ಸೆಲ್ಫಿಗೆ ಅವಕಾಶ ಸಿಗದೆ ಬೇಸರದಿಂದಲೆ ಮರಳುತ್ತಿದ್ದಾರೆ.
ಮಳೆ ಆರಂಭವಾಗುತ್ತಿದ್ದಂತೆ ಜೋಗ ಜಲಪಾತ ಜೀವಕಳೆ ಪಡೆದುಕೊಂಡಿದೆ. ಕೋವಿಡ್ ಕಾರಣದಿಂದಾಗಿ ಕೆಲವು ದಿನ ಜಲಪಾತ ವೀಕ್ಷಣೆಗೆ ಸರ್ಕಾರ ನಿರ್ಬಂಧ ವಿಧಿಸಿತ್ತು. ಆದರೆ ಈಗ ನಿರ್ಬಂಧ ತೆರವಾದ ಬಳಿಕ ಪ್ರತಿ ವೀಕೆಂಡ್ನಲ್ಲಿ ಸಾವಿರಾರು ಜನರು ಜೋಗ ಜಲಪಾತಕ್ಕೆ ಭೇಟಿ ನೀಡುತ್ತಿದ್ದಾರೆ.
ರಾತ್ರಿಯಿಂದ ಬಿಡುವು ಕೊಡದೆ ಸುರಿಯುತ್ತಿದೆ ಮಳೆ
ಶಿವಮೊಗ್ಗ ಜಿಲ್ಲೆಯಾದ್ಯಂತ ಪುನರ್ವಸು ಮಳೆ ಅಬ್ಬರ ಜೋರಾಗಿದೆ. ತಡರಾತ್ರಿ ಶುರುವಾದ ಮಳೆ ಬಿಡುವು ಕೊಡದೆ ಸುರಿಯುತ್ತಿದೆ.
ಕಳೆದ ಎರಡು ದಿನದಿಂದ ಕಡಿಮೆಯಾಗಿದ್ದ ವರುಣ ಪುನಃ ಪ್ರತ್ಯಕ್ಷವಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯದ್ಯಂತ ರಾತ್ರಿಯಿಂದ ಮಳೆ ಪುನಾರಂಭವಾಗಿದೆ. ಜೋರು ಮಳೆಯಿಂದಾಗಿ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ. ಶಿವಮೊಗ್ಗದಲ್ಲಿ ಬೆಳಗ್ಗೆಯಿಂದ ನಿರಂತರ ಮಳೆಯಾಗುತ್ತಿದೆ. ಕೆಲ ಹೊತ್ತು ಜೋರಾಗಿ ಸುರಿಯುವ ಮಳೆ, ಬಳಿಕ ಜಿಟಿಜಿಟಿಯಾಗಿ ಬೀಳುತಿತ್ತು. ಬಳಿಕ ಜೋರು ಮಳೆ ಆರಂಭವಾಗಿದೆ.
ತಗ್ಗು ಪ್ರದೇಶದಲ್ಲಿ ಜನರ ಆತಂಕ
ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಆತಂಕ ಉಂಟಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಚರಂಡಿಗಳನ್ನು ಬಂದ್ ಮಾಡಲಾಗಿದೆ. ಹಾಗಾಗಿ ನಗರದ ಕೆಲವು ಕಡೆ ರಸ್ತೆಯಲ್ಲಿ ನೀರು ನಿಂತಿದೆ.
ನಿರಂತರ ಮಳೆಯಿಂದಾಗಿ ಕೆಲವು ಕಡೆ ತೋಟ, ಗದ್ದೆಗಳಲ್ಲಿ ನೀರು ನಿಂತಿದೆ. ಇತ್ತೀಚೆಗೆ ಭತ್ತ, ಶುಂಠಿ, ಜೋಳದ ಬಿತ್ತನೆ ಮಾಡಲಾಗಿತ್ತು. ಈಗ ಗದ್ದೆಯಲ್ಲಿ ನೀರು ನಿಂತಿದ್ದು, ಬೆಳಹಾನಿಯಾಗುವ ಆತಂಕವಿದೆ.
ಎಲ್ಲಾ ತಾಲೂಕಲ್ಲೂ ಅಬ್ಬರ
ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಹೊಸನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಜೋರಿದೆ. ಸಾಗರ ತಾಲೂಕಿನಲ್ಲಿ ಮಳೆ ಅಬ್ಬರಿಸುತ್ತಿದೆ. ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳಹರಿವು ಹೆಚ್ಚಳವಾಗುತ್ತಿದೆ.