ತೀರ್ಥಹಳ್ಳಿ : ಭಾರತೀಪುರದಲ್ಲಿ ಗುಡ್ಡ ಕುಸಿತ, ವಾಹನ ಸಂಚಾರ ಸ್ಥಗಿತ?
ಶಿವಮೊಗ್ಗ, ಜೂನ್ 12 : ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಶಿವಮೊಗ್ಗ-ತೀರ್ಥಹಳ್ಳಿ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದ್ದು ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಕಳೆದ ನಾಲ್ಕು ದಿನಗಳಿಂದ ತೀರ್ಥಹಳ್ಳಿಯಲ್ಲಿ ಭಾರೀ ಮಳೆಯಾಗುತ್ತಿದೆ. ತುಂಗಾ ನದಿ ತುಂಬಿ ಹರಿಯುತ್ತಿದೆ. ಭಾರೀ ಮಳೆಯ ಕಾರಣ ಭಾರತೀಪುರ ಬಳಿ ಗುಡ್ಡ ಕುಸಿದಿದೆ.
ಎರಡು ದಿನಗಳ ಬಳಿಕ ವಿರಾಮಕ್ಕೆ ಜಾರಲಿದೆ ಮುಂಗಾರು
ಶಿವಮೊಗ್ಗ-ತೀರ್ಥಹಳ್ಳಿ ಹೆದ್ದಾರಿಯ ಭಾರತೀಪುರ ತಿರುವಿನ ಬಳಿ ಗುಡ್ಡ ಕುಸಿದಿದ್ದು ವಾಹನ ಸವಾರರು ಆತಂಕಗೊಂಡಿದ್ದಾರೆ. ಗುಡ್ಡ ಕುಸಿದಿದ್ದರಿಂದ ರಸ್ತೆಯೂ ಬಿರುಕು ಬಿಟ್ಟಿದೆ. ಸ್ಥಳೀಯರು ಗುಡ್ಡ ಕುಸಿದ ಕಡೆ ಕಲ್ಲುಗಳನ್ನು ಇಟ್ಟು ವಾಹನ ಚಾಲಕರನ್ನು ಎಚ್ಚರಿಸುತ್ತಿದ್ದಾರೆ.
ಚಾರ್ಮಾಡಿ ಘಾಟ್ ಗುಡ್ಡ ಕುಸಿತ: ರಾತ್ರಿಯಿಡೀ ರಸ್ತೆಯಲ್ಲೇ ಕಳೆದ ಪ್ರಯಾಣಿಕರು
ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಆಗಸದಲ್ಲಿ ಹೆಪ್ಪುಗಟ್ಟಿದ ಕರಿಮೋಡಗಳು ಘಟ್ಟಸಾಲಿನಲ್ಲಿ ಮಳೆ ಸುರಿಸುತ್ತಿವೆ. ಮೂರು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಜೀವನದಿಗಳಾದ ತುಂಗಾ, ಮಾಲತಿ, ಕುಂಟೆಹಳ್ಳ, ಗೋಪಿನಾಥಹಳ್ಳ, ಕುಶಾವತಿ ಹೊಳೆ ಸೇರಿ ಅನೇಕ ಹಳ್ಳಕೊಳ್ಳಗಳು, ತೊರೆಗಳು ಮೈದುಂಬಿ ಹರಿಯುತ್ತಿವೆ.
ಜೂನ್ 11ರಂದು ತೀರ್ಥಹಳ್ಳಿಯಲ್ಲಿ 102.8 ಮಿ.ಮೀ. ಮಳೆಯಾಗಿದೆ. 2017ರ ಜೂನ್ ಆರಂಭದ ವೇಳೆಗೆ ತಾಲ್ಲೂಕಿನಲ್ಲಿ ಒಟ್ಟು 124 ಸೆಂ.ಮೀ. ಮಳೆಯಾಗಿತ್ತು. ಈಗ ಜೂನ್ ಮೊದಲ ವಾರ 274 ಸೆಂ.ಮೀ.ಮಳೆಯಾಗಿದೆ.