ಹೇಗಿರಲಿದೆ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ?
ಶಿವಮೊಗ್ಗ, ನವೆಂಬರ್ 12 : ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣಕ್ಕೆ ಪ್ರಕ್ರಿಯೆಗಳು ಆರಂಭವಾಗಿವೆ. 2008ರಲ್ಲಿ ಪ್ರಸ್ತಾವಿತವಾಗಿದ್ದ ರೈಲು ಮಾರ್ಗದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ.
ನೂತನ ರೈಲು ಮಾರ್ಗದ ನಿರ್ಮಾಣಕ್ಕೆ ಭೂ ಸ್ವಾಧೀನ ಅಧಿಕಾರಿಯನ್ನು ನೇಮಕ ಮಾಡಲಾಗಿದೆ, ಕಚೇರಿಯನ್ನು ತೆರೆಯಲಾಗಿದೆ. ಒಟ್ಟು 103 ಕಿ. ಮೀ. ಮಾರ್ಗಕ್ಕೆ ಎರಡು ಹಂತಗಳಲ್ಲಿ ಭೂ ಸ್ವಾಧೀನ ನಡೆಯಲಿದೆ.
ಶಿವಮೊಗ್ಗದಿಂದ 3 ಹೊಸ ರೈಲು; ವೇಳಾಪಟ್ಟಿ, ನಿಲ್ದಾಣ
ಶಿವಮೊಗ್ಗ-ಶಿಕಾರಿಪುರ, ಶಿಕಾರಿಪುರ-ರಾಣೆಬೆನ್ನೂರು ಎಂದು ಎರಡು ವಿಭಾಗಗಳಾಗಿ ವಿಂಗಡನೆ ಮಾಡಿಕೊಂಡು ಯೋಜನೆಗೆ ಭೂ ಸ್ವಾಧೀನ ಮಾಡಲಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಯೋಜನೆಗೆ 50:50ರಷ್ಟು ವೆಚ್ಚ ಮಾಡಲಿವೆ.
ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ
2008ರಲ್ಲಿ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಕುರಿತು ಚರ್ಚೆಗಳು ಆರಂಭವಾಗಿತ್ತು. ಈಗ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೇ ಯೋಜನೆಗೆ ಚಾಲನೆ ಸಿಗುತ್ತಿದೆ.
ವಿಜಯಪುರ-ಮಂಗಳೂರು ನಡುವೆ ಹೊಸ ರೈಲು ಸೇವೆ
ಶಿಕಾರಿಪುರದಲ್ಲಿ ಭೂ ಸ್ವಾಧೀನಕ್ಕಾಗಿ ಕಚೇರಿಯನ್ನು ತೆರೆಯಲಾಗಿದೆ. ಎಚ್. ಶಿವಕುಮಾರ್ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದಾರೆ. ಯಡಿಯೂರಪ್ಪ ಅವರು ರಾಜ್ಯ ಸರ್ಕಾರದ ಪಾಲಿನ 750 ಕೋಟಿ. ರೂ.ಗಳನ್ನು ಯೋಜನೆಗಾಗಿ ಬಿಡುಗಡೆ ಮಾಡಿದ್ದಾರೆ.
ಹೇಗಿರಲಿದೆ ಮಾರ್ಗ : ಶಿವಮೊಗ್ಗದಿಂದ ಹೊರಡುವ ರೈಲು ಕೋಟೆಗಂಗೂರು ಮೂಲಕ ಕೊನಗವಳ್ಳಿ ಮೂಲಕ ಶಿಕಾರಿಪುರ ಕಡೆ ಸಂಚಾರ ನಡೆಸಲಿದೆ. ಮಲ್ಲಾಪುರ, ಕೊರಲಹಟ್ಟಿ ಮೂಲಕ ಶಿಕಾರಿಪುರವನ್ನು ತಲುಪುತ್ತದೆ.
ಶಿಕಾರಿಪುರದಿಂದ ಹೊರಡುವ ರೈಲು ಕಿಟ್ಟದಹಳ್ಳಿ, ಮಾಸೂರು, ತುಮ್ಮಿನಕಟ್ಟೆ, ರಟ್ಟೆಹಳ್ಳಿ, ದಂದ್ಗಿಹಳ್ಳಿ, ಹಲಗೇರಿ ಮೂಲಕ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಲುಪಲಿದೆ. ಮೂರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.