ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ಸಿಹಿಸುದ್ದಿ ಕೊಟ್ಟ ಇಲಾಖೆ
ಶಿವಮೊಗ್ಗ, ಅಕ್ಟೋಬರ್ 13; ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ ಯೋಜನೆಯ ಕಾಮಗಾರಿ ಡಿಸೆಂಬರ್ ಕೊನೆಯ ವಾರ ಅಥವಾ ಜನವರಿಯಲ್ಲಿ ಆರಂಭವಾಗಲಿದೆ. 994 ಕೋಟಿ ರೂ. ವೆಚ್ಚದ ಕಾಮಗಾರಿ ಇದಾಗಿದ್ದು, ಒಟ್ಟು 12 ನಿಲ್ದಾಣಗಳನ್ನು ಮಾರ್ಗ ಒಳಗೊಂಡಿದೆ.
ರೈಲ್ವೆ ಮಾರ್ಗವನ್ನು ಕೇಂದ್ರದ ರೈಲ್ವೆ ಅಧಿಕಾರಿಗಳು ತಂಡವು ಮಂಗಳವಾರ ಪರಿಶೀಲನೆ ನಡೆಸಿದೆ. ಈ ಯೋಜನೆಗೆ ಬೇಕಾದ ಮಾಹಿತಿ, ಭೂ ಸ್ವಾಧೀನ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ ಸಭೆ ನೆಡೆಸಿ ಸಮಾಲೋಚನೆ ನಡೆಸಿತು.
ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಬೇಡಿಕೆಗಳು
ರೈಲ್ವೆ ಮಾರ್ಗ ಕಾಮಗಾರಿಗೆ ಇರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಲು ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಡಿಸೆಂಬರ್ ಕೊನೆಯ ವಾರ ಅಥವಾ ಜನವರಿಯಲ್ಲಿ ಮೊದಲನೇ ಹಂತದ ಕಾಮಗಾರಿಯನ್ನು ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.
ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಪ್ರತಿಭಟನೆ
ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗಕ್ಕಾಗಿ 1,431.29 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. 90 ಕಿ. ಮೀ. ಮಾರ್ಗದಲ್ಲಿ 12 ನಿಲ್ದಾಣಗಳಿವೆ. 22 ಮೇಜರ್ ಸೇತುವೆಗಳು, 48 ಚಿಕ್ಕ ಸೇತುವೆಗಳು ಇರಲಿವೆ ಎಂದು ಯೋಜನಾ ವರದಿಯಲ್ಲಿ ತಿಳಿಸಲಾಗಿದೆ.
ತುಮಕೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ
ಎರಡು ಹಂತದಲ್ಲಿ ನಡೆಯಲಿದೆ ಕಾಮಗಾರಿ
ನೈಋತ್ಯ ರೈಲ್ವೆ ಶಿವಮೊಗ್ಗ-ರಾಣೆಬೆನ್ನೂರು ನೂತನ ರೈಲು ಮಾರ್ಗದ ವಿವರವಾದ ಯೋಜನಾ ವರದಿಯನ್ನು ತಯಾರು ಮಾಡಿದೆ. ಒಟ್ಟು 2 ಹಂತದಲ್ಲಿ ಯೋಜನೆಯ ಕಾಮಗಾರಿ ನಡೆಯಲಿದೆ. ಕೋಟೆಗಂಗೂರು-ಶಿಕಾರಿಪುರ ಸೆಕ್ಷನ್ ಕಾಮಗಾರಿ ಮೊದಲು ಆರಂಭಿಸಲಾಗುತ್ತದೆ. ಬಳಿಕ ಶಿಕಾರಿಪುರ-ರಾಣೆಬೆನ್ನೂರು ಸೆಕ್ಷನ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಎಷ್ಟು ಭೂಮಿಯ ಅಗತ್ಯವಿದೆ?
ಮೊದಲ ಹಂತದ ಕೋಟೆಗಂಗೂರು-ಶಿಕಾರಿಪುರ ಸೆಕ್ಷನ್ ಕಾಮಗಾರಿಗೆ 616 ಎಕರೆ ಭೂಮಿಯ ಅಗತ್ಯವಿದೆ. 27 ಹಳ್ಳಿಗಳ 500 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಈಗಾಗಲೇ ಅಧಿಸೂಚನೆ ಪ್ರಕಟಿಸಲಾಗಿದೆ. 2ನೇ ಹಂತದ ಕಾಮಗಾರಿಗೆ 815 ಎಕರೆ ಭೂಮಿಯ ಅಗತ್ಯವಿದೆ. ಈಗಾಗಲೇ ರೈಲ್ವೆ ಇಲಾಖೆ ಭೂ ಸ್ವಾಧೀನ ಕಾರ್ಯ ನಡೆಸುತ್ತಿದ್ದು, ಅದು ಮುಗಿದ ಬಳಿಕ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗುತ್ತದೆ.
ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣ
ಶಿವಮೊಗ್ಗ-ರಾಣೆಬೆನ್ನೂರು ನೂತನ 90 ಕಿ. ಮೀ. ರೈಲು ಮಾರ್ಗದಲ್ಲಿ 22 ಪ್ರಮುಖ ಸೇತುವೆ, 62 ಕೆಳ ಸೇತುವೆ, 20 ರಸ್ತೆ ಸೇತುವೆಗಳು ನಿರ್ಮಾಣವಾಗಬೇಕಿದೆ. ರೈಲು ಮಾರ್ಗ ಕಾಮಗಾರಿ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಸೇತುವೆ ಕಾಮಗಾರಿಗಳು ವಿಳಂಬವಾದರೆ ರೈಲು ಮಾರ್ಗ ಕಾಮಗಾರಿ ಮೂರುವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಯಡಿಯೂರಪ್ಪ ಕನಸಿನ ಯೋಜನೆ
ಶಿಕಾರಿಪುರ ಶಾಸಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಕನಸು ಶಿವಮೊಗ್ಗ-ರಾಣೆಬೆನ್ನೂರು ನೂತನ ರೈಲು ಮಾರ್ಗ. 2019ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಜೊತೆ ಸಭೆ ನಡೆಸಿ ಯೋಜನೆಗೆ ಅನುಮೋದನೆ ನೀಡಿದ್ದರು. ಬಳಿಕ ಕೋವಿಡ್ ಕಾರಣದಿಂದಾಗಿ ಯೋಜನೆ ವಿಳಂಬವಾಗಿದೆ. ಯೋಜನೆಗೆ ಇದ್ದ ಅಡೆ-ತಡೆಗಳು ನಿವಾರಣೆಯಾಗಿದ್ದು, ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.
ಭೂ ಸ್ವಾಧೀನ, ರೈತರ ಬೇಡಿಕೆಗಳು
ರೈಲು ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರು ಸರ್ಕಾರ ನಿಗದಿ ಮಾಡಿರುವ ಪರಿಹಾರ ಮೊತ್ತದಲ್ಲಿ ಒಂದು ಸೈಟ್ ಕೂಡಾ ಬರುವುದಿಲ್ಲ. ನಮ್ಮ ಮಕ್ಕಳಿಗೆ ಜೀವನಾಂಶವಾಗಿದ್ದ ಭೂಮಿಯನ್ನು ಕಿತ್ತುಕೊಂಡು ಸೂಕ್ತ ಪರಿಹಾರ ಕೊಡದೇ ಇದ್ದರೆ ಯಾವುದೇ ಕಾರಣಕ್ಕೂ ಭೂಮಿ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಪ್ರತಿ ಎಕರೆ ಕುಷ್ಕಿ ಜಮೀನಿಗೆ 1.5 ಕೋಟಿ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತರಿಗೆ ಅದೇ ಗ್ರಾಮದಲ್ಲಿ ಪರ್ಯಾಯ ಜಮೀನು ನೀಡಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದಾರೆ.
ಪ್ರತಿ ಎಕರೆ ಅಡಿಕೆ ತೋಟಕ್ಕೆ 2.5 ಕೋಟಿ ಪರಿಹಾರ ನೀಡಬೇಕು. ನಿರಾಶ್ರಿತರ ರೈತರ ಕುಟುಂಬಕ್ಕೆ ಉದ್ಯೋಗ ಕೊಡಬೇಕು. ರೈತರು ಜಮೀನಿಗೆ ಹೋಗಲು ರಸ್ತೆ ಮಾಡಿಕೊಡಬೇಕು. ಸರ್ಕಾರಿ ಜಮೀನು, ಸರ್ಕಾರಿ ಪಡಾ, ಬಗರ್ ಹುಕುಂ, ಗ್ರಾಮ ಠಾಣಾಗಳಿಗೆ ಸೂಕ್ತವಾದ ಜಮೀನು ನಿಗದಿಪಡಿಸಬೇಕು ಎಂದು ಆಗ್ರಹಿದ್ದಾರೆ.