ಗೋಹತ್ಯೆ ಶಾಪದಿಂದ ಕಾಂಗ್ರೆಸ್ ಸರ್ವನಾಶವಾಗುತ್ತದೆ: ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ, ಡಿಸೆಂಬರ್ 2: ದೇವರಂತೆ ಪೂಜಿಸುವ ಗೋವನ್ನು ಕಡಿಯಲು ಅನುಮತಿ ನೀಡಿದ್ದರಿಂದಲೇ ಕಾಂಗ್ರೆಸ್ ಸರ್ಕಾರ ನಾಶವಾಯಿತು. ಗೋವಿನ ಶಾಪದಿಂದ ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಂಡರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಗ್ರಾಮ ಸ್ವರಾಜ್ಯ ಕಾರ್ಯಕ್ರಮ ನೇತೃತ್ವ ವಹಿಸಿ ಮಾತನಾಡಿದ ಸಚಿವ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು ಹಾಗೂ ಕಾಂಗ್ರೆಸ್ ಸರ್ವನಾಶ ಆಗುತ್ತಿದೆ ಎಂದು ಟೀಕಿಸಿದರು.
"ನಾವು ರಿಯಲ್ ಎಸ್ಟೇಟ್ ಮಾಡುತ್ತಿಲ್ಲ, ರೈಲ್ವೆ ಟರ್ಮಿನಲ್ ಮಾಡುತ್ತಿದ್ದೇವೆ"
ಗೋಹತ್ಯೆ ನಿಷೇಧದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ವಯಸ್ಸಾದ ಗೋವುಗಳನ್ನು ಬಿಜೆಪಿಯವರ ಮನೆ ಮುಂದೆ ಕಟ್ಟುತ್ತೇವೆ' ಎನ್ನುತ್ತಾರೆ. ಹಾಗಾದರೆ ವಯಸ್ಸಾದ ನಿಮ್ಮ ತಾಯಿಯನ್ನು ಬೀದಿಯಲ್ಲಿ ಬಿಡುತ್ತೀರಾ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು.
ಗೋವನ್ನು ನಮ್ಮ ತಾಯಿ ಎಂದು ಪೂಜಿಸುವ ದೇಶ ನಮ್ಮದು. ಗೋಹತ್ಯೆಯನ್ನು ಪ್ರೋತ್ಸಾಹಿಸುವ ನೀವು ಧೂಳಿಪಟವಾಗುತ್ತಿರಿ ನೆನಪಿರಲಿ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.
ಬಿಜೆಪಿ ಪಕ್ಷ ರಾಷ್ಟ್ರೀಯ ವಿಚಾರದ ಮೇಲೆ ಚುನಾವಣೆ ನಡೆಸಲಿದೆ. ರಾಮಮಂದಿರ ಚುನಾವಣೆ ಗಿಮಿಕ್ ಎನ್ನುವ ವಿರೋಧ ಪಕ್ಷಗಳು ಈಗ ಬಾಯಿ ಮುಚ್ಚಿ ಕುಳಿತಿವೆ. ನಾವು ರಾಮ ಮಂದಿರವನ್ನು ಅಯೋಧ್ಯೆಯಲ್ಲಿ 1400 ಕೋಟಿ ರುಪಾಯಿಯಲ್ಲಿ ನಿರ್ಮಾಣ ಮಾಡುತ್ತೇವೆ ಎಂದರು.