ಹಳೆ ಶಿವಮೊಗ್ಗಕ್ಕೆ ನುಗ್ಗಿತು ತುಂಗಾ ನದಿ ನೀರು, ಎಲ್ಲೆಲ್ಲಿ ಹಾನಿಯಾಗಿದೆ?
ಶಿವಮೊಗ್ಗ, ಜುಲೈ 24: ಹಳೆ ಶಿವಮೊಗ್ಗ ಭಾಗ ಮತ್ತೆ ಜಲಾವೃತವಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿಯಿಂದ ನೀರು ಬಡಾವಣೆಗಳಿಗೆ ನುಗ್ಗಿದೆ. ರಸ್ತೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದೆ.
ಮಲೆನಾಡಿನಾದ್ಯಂತ ವರುಣನ ಆರ್ಭಟ ಜೋರಾಗಿದೆ. ತೀರ್ಥಹಳ್ಳಿ, ಸಾಗರ, ಹೊಸನಗರ, ಶಿವಮೊಗ್ಗ ಸೇರಿದಂತೆ ಎಲ್ಲೆಡೆ ಬೆಂಬಿಡದೇ ವರುಣನ ನರ್ತನ ಮುಂದುವರದಿದೆ.
ರಾಜ್ಯಾದ್ಯಂತ ಅಬ್ಬರದ ಮಳೆ, ಒಟ್ಟು 7 ಜಿಲ್ಲೆಗಳಿಗೆ ರೆಡ್ ಅಲರ್ಟ್
ಎಲ್ಲೆಡೆ ನದಿಗಳು ಅಪಾಯ ಮಟ್ಟ ಮೀರಿ ಹರಿಯಲಾರಂಭಿಸಿವೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1800 ಅಡಿ ದಾಟಿದ್ದು, ಸಾಗರ ತಾಲೂಕಿನಲ್ಲಿ ಪ್ರವಾಹ ಭೀತಿ ಜಾಸ್ತಿಯಾಗುತ್ತಲೇ ಇದೆ. ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಕೃಷಿ ಜಮೀನು ಜಲಾವೃತಗೊಂಡಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಕುಂಭ ದ್ರೋಣ ಮಳೆಯ ರೌದ್ರ ನರ್ತನಕ್ಕೆ ಮಲೆನಾಡು ತತ್ತರಿಸಿದ್ದು ತುಂಗಾ ನದಿಯ ಪಾತ್ರದ ತಗ್ಗು ಪ್ರದೇಶಗಳು ನೀರಿನಿಂದ ಆವೃತವಾಗಿವೆ. ಜೀವನದಿ ತುಂಗಾ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು ಪುರಾಣ ಪ್ರಸಿದ್ಧ ರಾಮ ಮಂಟಪ ಮುಳುಗುವ ಹಂತಕ್ಕೆ ತಲುಪಿದೆ.
ಯಾವ್ಯಾವ ಪ್ರದೇಶಕ್ಕೆ ನೀರು ನುಗ್ಗಿದೆ?
ತುಂಗಾ ನದಿ ತೀರದಲ್ಲಿರುವ ಕುಂಬಾರ ಬೀದಿ, ಸೀಗೆಹಟ್ಟಿ, ಕೆ.ಆರ್.ಪುರಂ ರಸ್ತೆಯ ಸ್ವಲ್ಪ ಭಾಗ, ವಿದ್ಯಾನಗರ, ಜಗದಂಬ ಬೀದಿ, ಕಂಟ್ರಿ ಕ್ಲಬ್, ರಾಜೀವ್ ಗಾಂಧಿ ಬಡಾವಣೆ, ಆರ್.ಟಿ.ಲೇಔಟ್, ಚಿಕ್ಕಲ್ನ ಶಾಂತಮ್ಮ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ನೀರು ನುಗ್ಗಿದೆ.
ನಿವಾಸಿಗಳಿಗೆ ಆತಂಕ
ನೀರು ನುಗ್ಗುವ ಆತಂಕದಲ್ಲೇ ಜನರು ದಿನ ದೂಡುವಂತಾಗಿದೆ. ಕೆಲವು ಕಡೆ ರಸ್ತೆ ಮೇಲೆ ನೀರು ನಿಂತಿದೆ. ಇನ್ನೂ ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿರುವ ವಸ್ತುಗಳನ್ನ ಕಾಪಾಡಿಕೊಳ್ಳುವುದೆ ಜನರಿಗೆ ಸಾಹಸಮಯವಾಗಿದೆ. ನೀರು ಬರುತ್ತಿದ್ದಂತೆ ಕೆಲವರು ಬೆಲೆಬಾಳುವ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಜನರು ಬೇರೆ ಶಿಫ್ಟ್ ಮಾಡಿಕೊಂಡಿದ್ದಾರೆ.
ನೀರು ನುಗ್ಗಲು ಇರುವ ಕಾರಣವೇನು?
ತುಂಗಾ ಜಲಾಶಯದಿಂದ 80 ಸಾವಿರ ಕ್ಯೂಸೆಕ್ಗಿಂತಲೂ ಅಧಿಕ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ತಡೆಗೋಡೆ ನಿರ್ಮಿಸಲಾಗಿದ್ದರೂ ರಾಜಾಕಾಲುವೆ, ಚರಂಡಿಗಳ ಮೂಲಕ ನೀರು ನೇರವಾಗಿ ಹಳೆ ಶಿವಮೊಗ್ಗ ಭಾಗದೊಳಗೆ ನುಗ್ಗುತ್ತಿದೆ. ಕುಂಬಾರ ಬೀದಿ, ಬಿ.ಬಿ.ಸ್ಟ್ರೀಟ್, ಸೀಗೆಹಟ್ಟಿ ಸೇರಿದಂತೆ ಈ ಭಾಗದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದೆ ಬಿಟ್ಟಿದ್ದರಿಂದ ಹೂಳು ತುಂಬಿಕೊಂಡಿದೆ ಎಂಬ ಆರೋಪವಿದೆ.
2019ರಲ್ಲೂ ಇದೇ ರೀತಿಯ ತೊಂದರೆ ಆಗಿತ್ತು
ಇದೆ ಕಾರಣಕ್ಕೆ 2019ರಲ್ಲಿ ಈ ಭಾಗಕ್ಕೆ ನೀರು ನುಗ್ಗಿತ್ತು. ಆ ಸಂದರ್ಭ ಆಸ್ತಿಪಾಸ್ತಿ ಹಾನಿಯಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದರು. ಇದರಿಂದ ಸುಧಾರಿಸಿಕೊಳ್ಳುವ ಹೊತ್ತಿಗೆ ಮತ್ತೊಮ್ಮೆ ಈ ಭಾಗ ಜಲಾವೃತವಾಗುವ ಆತಂಕ ಎದುರಾಗಿದೆ.