ಶಿವಮೊಗ್ಗದಲ್ಲಿ ಬಿಳಿಯ ಆದ "ಹುಲಿಯಾ", ಏನಿದರ ಹಿಂದಿನ ಕಥೆ?
ಶಿವಮೊಗ್ಗ, ಡಿಸೆಂಬರ್ 2: ಮಲೆನಾಡಿನ ರೈತರು ಎದುರಿಸುತ್ತಿರುವ ಸಾಕಷ್ಟು ಸಮಸ್ಯೆಗಳಲ್ಲಿ ಈಗ ಅತಿಯಾಗಿ ಹಾವಳಿ ನೀಡುತ್ತಿರುವುದು ಮಂಗಗಳು. ಪದೇ ಪದೇ ಬೆಳೆಗಳನ್ನು ನಾಶ ಮಾಡುತ್ತ ರೈತನಿಗೆ ತಲೆನೋವಾಗಿರುವ ಈ ಮಂಗಗಳನ್ನು ಓಡಿಸುವುದೇ ದೊಡ್ಡ ಸಮಸ್ಯೆ. ಏನೆಲ್ಲಾ ಮಾಡಿದರೂ ಈ ಮಂಗಗಳನ್ನು ಓಡಿಸುವುದು ಸಾಧ್ಯವೇ ಆಗಿರಲಿಲ್ಲ.
ಇದಕ್ಕಾಗೇ ಶಿವಮೊಗ್ಗದ ರೈತರೊಬ್ಬರು ಸೂಪರ್ ಪ್ಲಾನ್ ಒಂದನ್ನು ಮಾಡಿದ್ದಾರೆ. ಜಿಲ್ಲೆಯ ತೀರ್ಥಹಳ್ಳಿಯ ನಲ್ಲೂರು ಗ್ರಾಮದ ಶ್ರೀಕಾಂತ ಗೌಡ ಎಂಬುವವರು ತಮ್ಮ ನಾಯಿಗೆ ಹುಲಿಯಂತೆ ಬಣ್ಣ ಬಳಿದು ಮಂಗಗಳ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ಹುಲಿ ಎಂದು ಕಾಲ್ಕಿತ್ತಿದ ಮಂಗಗಳು
ಈ ರೀತಿ ಹುಲಿಯಂತೆ ಬಣ್ಣ ಬಳಿದುಕೊಂಡಿರುವ ನಾಯಿಯನ್ನು ಕಂಡಾಕ್ಷಣ ಮಂಗಗಳು ಹೆದರಿ ಕಾಲ್ಕಿತ್ತುತ್ತಿವೆ. ಜೊತೆಗೆ ನಾಯಿಗೆ ಬಳಿದ ಬಣ್ಣ ಹೇರ್ ಡೈ ಆಗಿದ್ದರಿಂದ ಬೇಗ ಮಾಸುವುದೂ ಇಲ್ಲ. ತಿಂಗಳುಗಟ್ಟಲೆ ಹಾಗೇ ಇರುತ್ತದೆ. ನಾಯಿಗೂ ಇದರಿಂದ ಏನೂ ಸಮಸ್ಯೆಯಿಲ್ಲ. ಈ ಒಂದು ಪ್ಲಾನ್ ಯಶಸ್ವಿಯಾಗಿದೆ, ಇದರಿಂದ ಮಂಗಗಳ ಹಾವಳಿ ತಪ್ಪಿದೆ ಎಂದು ಶ್ರೀಕಾಂತ ಗೌಡ ಈ ಉಪಾಯ ಫಲಿಸದ್ದನ್ನು ಹೇಳಿಕೊಂಡಿದ್ದಾರೆ.
ಶಿವಮೊಗ್ಗ; ಇನ್ನೂ ಮೂರು ದಿನ ಅಕಾಲಿಕ ಮಳೆ? ರೈತರಲ್ಲಿ ಮತ್ತೆ ಆತಂಕ
ನಾಯಿ ಬೊಗಳುವ ಶಬ್ದ ಮೂಲಕ ಬೆಳೆ ರಕ್ಷಣೆ
ಸೊರಬ ತಾಲೂಕಿನ ಕಕ್ಕರಸಿಯ ಮತ್ತೋರ್ವ ರೈತ ಜೆ.ಎಸ್.ಚಿದಾನಂದಗೌಡರು ಇನ್ನೊಂದು ವಿಭಿನ್ನ ಪ್ರಯತ್ನ ಮಾಡಿದ್ದು, ನಾಯಿಗಳು ಬೊಗಳುವ ಶಬ್ದದ ಆಡಿಯೋವನ್ನು ಹೊಲದ ವಿವಿಧ ಭಾಗಗಳಲ್ಲಿ ಕೇಳುವಂತೆ ಮಾಡಿದ್ದಾರೆ. ಇದಕ್ಕಾಗಿ ಸ್ಪೀಕರ್ ಗಳನ್ನು ಅಳವಡಿಸಿದ್ದು, ಇದರಿಂದಲೂ ಮಂಗಗಳು ತೋಟದ ಹತ್ತಿರ ಸುಳಿಯುವುದಿಲ್ಲ.
ಹುಲಿ ಚಿತ್ರದ ಬ್ಯಾನರ್ ಅಳವಡಿಕೆ
ಇನ್ನು ತೀರ್ಥಹಳ್ಳಿ, ಹೊಸನಗರ ಭಾಗಗಳಲ್ಲಿ ಅನೇಕ ರೈತರು ಬೆದರು ಗೊಂಬೆಯ ಪರ್ಯಾಯವಾಗಿ ಹುಲಿ, ಸಿಂಹದ ಭಾವಚಿತ್ರವಿರುವ ಬ್ಯಾನರ್ ಗಳನ್ನು ತಮ್ಮ ಜಮೀನು ತೋಟಗಳಲ್ಲಿ ಅಳವಡಿಸುವ ಮೂಲಕ ಮಂಗಗಳಿಂದ ಆಗುವ ಬೆಳೆ ಹಾನಿಯನ್ನು ತಪ್ಪಿಸಲು ಮುಂದಾಗಿದ್ದಾರೆ.
ಮಾವು ಬೆಳೆಯ ವಿವಿಧ ರೋಗ; ಹತೋಟಿ ಕ್ರಮಗಳು
ಮಂಕಿ ಪಾರ್ಕ್ ನಿರ್ಮಾಣಕ್ಕೆ ಮುಂದಾದ ಸರ್ಕಾರ
ಮಲೆನಾಡಿನ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಸರ್ಕಾರ ಸಹ ಕ್ರಮ ಕೈಗೊಳ್ಳಲು ಮುಂದಾಗಿದೆ. ಅರಣ್ಯ ಪ್ರದೇಶದಲ್ಲಿ ಮಂಕಿ ಪಾರ್ಕ್ ನಿರ್ಮಿಸಿ ಅಲ್ಲಿಯೇ ಮಂಗಗಳ ವಾಸಕ್ಕೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಈ ಕುರಿತು ಕಾರ್ಯ ಪ್ರಗತಿಯಲ್ಲಿದ್ದು, ಕೆಲವೇ ತಿಂಗಳಲ್ಲಿ ಮಂಕಿ ಪಾರ್ಕ್ ನಿರ್ಮಾಣವಾಗಲಿದೆ.