ಆಗುಂಬೆ ಘಾಟ್ನಲ್ಲಿ ಕುಸಿತ, ಭಾರೀ ವಾಹನಗಳಿಗೆ ನಿಷೇಧ
ಶಿವಮೊಗ್ಗ, ಜೂನ್ 29 : ಶಿವಮೊಗ್ಗ ಜಿಲ್ಲಾಧಿಕಾರಿ ಎಂ.ಲೋಕೇಶ್ ಇಂದು ಆಗುಂಬೆ ಘಾಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾರೀ ಮಳೆಯಿಂದಾಗಿ ಆಗುಂಬೆ ಘಾಟ್ ರಸ್ತೆಯ 7ನೇ ತಿರುವಿನಲ್ಲಿ ಮಣ್ಣು ಕುಸಿತ ಉಂಟಾಗಿದೆ.
ಶುಕ್ರವಾರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದರು. ಭಾರೀ ಮಳೆಯಿಂದಾಗಿ ಘಾಟಿಯ ತಡೆಗೋಡೆ ಜರಿದಿದ್ದು, ತಾತ್ಕಾಲಿಕವಾಗಿ ಮರಳಿನ ಚೀಲವನ್ನು ಸೇರಿಸಿ ತಡೆಗೋಡೆ ಪುನರ್ ನಿರ್ಮಾಣ ಮಾಡಲಾಗಿದೆ.
ಭೂ ಕುಸಿತ, ದಟ್ಟಮಂಜು : ಆಗುಂಬೆ ಘಾಟ್ ಸಂಚಾರ ಸ್ಥಗಿತ
ಮುನ್ನಚ್ಚರಿಕೆ ಕ್ರಮವಾಗಿ ಲಾರಿಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪ್ರಯಾಣಿಕರ ಸಣ್ಣ ಬಸ್ಗಳಿಗೆ ಹಾಗೂ ಸಣ್ಣ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಳೆಗಾಲ ಮುಗಿಯುವವರೆಗೂ ಘಾಟಿ ರಸ್ತೆಯಲ್ಲಿ ದಿನದ 24 ಗಂಟೆ ಕಾಲ ಪೊಲೀಸರು ಗಸ್ತು ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
7ನೇ ತಿರುವಿನಲ್ಲಿ ಮಣ್ಣು ಕುಸಿತ ಉಂಟಾಗಿದೆ. ಸ್ಥಳದಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಟ್ರಾಫಿಕ್ ಸಿಬ್ಬಂದಿ ನಿಯೋಜಿಸುವಂತೆ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಆಗುಂಬೆ ಘಾಟಿಯಲ್ಲಿ ರಸ್ತೆ ಕುಸಿತ: ಆತಂಕಗೊಂಡ ಪ್ರಯಾಣಿಕರು
ಆಗುಂಬೆ ಘಾಟಿಯಲ್ಲಿ ಈ ರೀತಿ ಮಣ್ಣು ಕುಸಿತ ಉಂಟಾಗಬಹುದಾದ ಸ್ಥಳಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಹೆಚ್ಚಿನ ಮಣ್ಣು ಕುಸಿತ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಿ ತಾತ್ಕಾಲಿಕ ಪರಿಹಾರಗಳನ್ನು ಕೈಗೊಳ್ಳಬೇಕು. ಘಾಟಿಯಲ್ಲಿರುವ ಎಲ್ಲಾ ಅಪಾಯಕಾರಿ ತಿರುವಿನಲ್ಲಿ ಎಚ್ಚರಿಕೆ ಫಲಕಗಳನ್ನು, ಬ್ಯಾರಿಕೇಡ್ಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಲಾಗಿದೆ.
ಮಳೆ ನೀರು ಆದಷ್ಟು ರಸ್ತೆಯ ಮೇಲೆ ಹರಿಯುವುದನ್ನು ತಪ್ಪಿಸಲು ರಸ್ತೆ ಎರಡು ಬದಿಗಳಲ್ಲಿರುವ ಕಸಕಡ್ಡಿಗಳನ್ನು ತೆರವುಗೊಳಿಸಬೇಕು. ಘಾಟಿ ಪ್ರದೇಶದಲ್ಲಿ ಮಣ್ಣು ಕುಸಿತ, ರಸ್ತೆ ತಡೆ ಇತ್ಯಾದಿಗಳು ಸಂಭವಿಸಿದರೆ ತಕ್ಷಣ ಕಾರ್ಯ ಪ್ರವೃತ್ತವಾಗಲು ಚೆಕ್ಪೋಸ್ಟ್ ಬಳಿ ಜೆಸಿಬಿಯನ್ನು ಹಾಗೂ ಅಗತ್ಯ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಮಣ್ಣು ಕುಸಿದಿರುವ ಸ್ಥಳದ ಪರಿಶೀಲನೆ ನಡೆಸಿದ್ದು, ಪ್ರಸ್ತುತ ಭಾರಿ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ನಿಷೇಧಿಸಿ ಶನಿವಾರದಿಂದ ಮಿನಿ ಬಸ್ಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ವರದಿ ನೀಡಿದ್ದಾರೆ.
ಮಳೆಯಿಂದ ಯಾವುದೇ ಅನಾಹುತ ಸಂಭವಿಸಿದ ತಕ್ಷಣ ಮಾಹಿತಿಯನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಅಧಿಕಾರಿಗಳು ಕೇಂದ್ರ ಸ್ಥಳವನ್ನು ಬಿಟ್ಟು ಹೋಗಬಾರದು. ಹಾನಿ ಅಥವಾ ಅನಾಹುತಗಳು ಸಂಭವಿಸಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.