9 ದಿನಗಳ ಶಿವಮೊಗ್ಗ ದಸರಾ 2021ಕ್ಕೆ ವೈಭವದ ಚಾಲನೆ
ಶಿವಮೊಗ್ಗ, ಅಕ್ಟೋಬರ್ 07; 2021ನೇ ಸಾಲಿನ ಶಿವಮೊಗ್ಗ ದಸರಾಗೆ ವೈಭವದ ಚಾಲನೆ ಸಿಕ್ಕಿದೆ. ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್ ನಾಡದೇವಿಗೆ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವವನ್ನು ಉದ್ಘಾಟಿಸಿದರು.
ಗುರುವಾರ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ದಸರಾ ಉದ್ಘಾಟನಾ ಸಮಾರಂಭ ನಡೆಯಿತು. ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್ ದಸರಾವನ್ನು ಉದ್ಘಾಟನೆ ಮಾಡಿದರು. ಸಚಿವ ಕೆ. ಎಸ್. ಈಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು.
ಶ್ರೀರಂಗಪಟ್ಟಣ ದಸರಾ ಉದ್ಘಾಟಿಸಲಿದ್ದಾರೆ ನಿರ್ಮಲಾನಂದನಾಥ ಸ್ವಾಮೀಜಿ
ನವರಾತ್ರಿ ಹಿನ್ನೆಲೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇಗುಲದಲ್ಲಿ ಬೊಂಬೆಗಳನ್ನು ಕೂರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ, ದಸರಾ ಉದ್ಘಾಟಕರಾದ ಶಿವಕುಮಾರ್ ಬೇಗಾರ್, ಮೇಯರ್ ಸುನೀತಾ ಅಣ್ಣಪ್ಪ ಬೊಂಬೆ ಪೂಜೆ ನೆರವೇರಿಸಿದರು. ಬಳಿಕ ವೇದಿಕೆ ಮೇಲೆ ಪ್ರತಿಷ್ಠಾಪಿಸಲಾಗಿರುವ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ, ಮಂಗಳಾರತಿ ಬೆಳಗಿದರು.
ಮೈಸೂರು ದಸರಾ; ಕ.ರಾ.ರ.ಸಾ. ನಿಗಮದ ಪ್ರವಾಸಿ ಪ್ಯಾಕೇಜ್
ದಸರಾ ಉದ್ಘಾಟನೆ ಮಾಡಿ ಮಾತನಾಡಿದ ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್, "ಮಕ್ಕಳಿಗೆ ಸಂಸ್ಕೃತಿ ಕಲಿಸುವುದು ಅನಿವಾರ್ಯ. ಹಬ್ಬ, ಹರಿದಿನಗಳು ಸಂಸ್ಕೃತಿಯನ್ನು ಕಲಿಸುತ್ತದೆ. ಬರಿ ಓದು, ಓದು ಎಂದರೆ ಸಂಸ್ಕೃತಿ ಉಳಿಯುವುದಿಲ್ಲ. ಇನ್ನು, ಪರಿಸರ ಶುದ್ಧವಾಗಿರಬೇಕಾದರೆ ಕಾಡು ಉಳಿಸಬೇಕು. ಕಾಡುಗಳ ಸಂರಕ್ಷಣೆ ಮಾಡುವತ್ತ ಗಂಭೀರವಾಗಿ ಚಿಂತಿಸಬೇಕಿದೆ" ಎಂದರು.
ಮೈಸೂರು ದಸರಾ; ದೀಪಾಲಂಕಾರ ಕಣ್ತುಂಬಿಕೊಳ್ಳಲು ನಿಯಮಗಳು
ಸಚಿವ ಕೆ. ಎಸ್. ಈಶ್ವರಪ್ಪ ಮಾತನಾಡಿ, "ಭಾರತೀಯ ಸಂಸ್ಕೃತಿಯು ಸಂಸ್ಕಾರ ಕೊಡುವ ಕೇಂದ್ರವಾಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚು ಗೌರವ ಕೊಡುವ ದೇಶ ನಮ್ಮದಾಗಿದೆ. ದೇಶಕ್ಕೆ ತಾಯಿ ಸ್ಥಾನ ನೀಡಲಾಗಿದೆ. ಇನ್ನಷ್ಟು ಸಂಸ್ಕಾರ ಪಡೆಯುವತ್ತ ಮುಂದುವರೆಯಬೇಕಿದೆ" ಎಂದರು.
ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ವಿರೋಧ ಪಕ್ಷ ನಾಯಕಿ ಯಮುನಾ ರಂಗೇಗೌಡ, ಕಾರ್ಪೊರೇಟರ್ಗಳು, ಪಾಲಿಕೆ ಅಧಿಕಾರಿಗಳು ವೇದಿಕೆಯಲ್ಲಿದ್ದರು.
ನಾಡದೇವತೆಯ ಮೆರವಣಿಗೆ; ಇದಕ್ಕೂ ಮೊದಲು ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಿಂದ ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡೆಸಲಾಯಿತು. ಪಾಲಿಕೆ ಅವರಣದಲ್ಲಿರುವ ಲಾಕರ್ನಲ್ಲಿ ಇರಿಸಿದ್ದ ಬೆಳ್ಳಿ ಲೇಪಿತ ಮೂರ್ತಿ ಮತ್ತು ಅಂಬಾರಿಯನ್ನು ಮೆರವಣಿಗೆ ಮೂಲಕ ತರಲಾಯಿತು. ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ ಸೇರಿದಂತೆ ಹಲವರು ಪೂಜೆ ಸಲ್ಲಿಸಿದರು.
ನಿತ್ಯ ನಡೆಯಲಿದೆ ಸಾಂಸ್ಕೃತಿಕ ಕಾರ್ಯಕ್ರಮ; "ಶಿವಮೊಗ್ಗ ದಸರಾ ಹಿನ್ನಲೆ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಿತ್ಯ ಸಂಜೆ ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ" ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್. ಎನ್. ಚನ್ನಬಸಪ್ಪ ತಿಳಿಸಿದರು.
ಅಂಬಾರಿ ಮೆರವಣಿಗೆ, ಬನ್ನಿ ಮುಡಿಯುವುದು; ಮೈಸೂರು ಮಾದರಿಯಲ್ಲಿ ಶಿವಮೊಗ್ಗದಲ್ಲೂ ಅಂಬಾರಿ ಮೆರವಣಿಗೆ ನಡೆಯಲಿದೆ. ವಿಜಯದಶಮಿ ದಿನ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಕ್ರೆಬೈಲು ಬಿಡಾರದ ಮೂರು ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಸಾಗರ ಆನೆ ನಾಡದೇವಿಯ ಬೆಳ್ಳಿ ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಲಿದೆ. ಅದೇ ದಿನ ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ ಅಂಬು ಕಡಿದು, ಬನ್ನಿ ಮುಡಿಯುವ ಸಂಪ್ರದಾಯ ನಡೆಯಲಿದೆ. ತಹಶೀಲ್ದಾರ್ ನಾಗರಾಜ್ ಅಂಬು ಕಡಿಯಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ; ಮೈಸೂರು ದಸರಾ ಮಾದರಿಯಲ್ಲಿ ಹಲವು ವರ್ಷಗಳಿಂದ ದಸರಾವನ್ನು ಶಿವಮೊಗ್ಗದಲ್ಲಿ ಆಚರಿಸಲಾಗುತ್ತಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿ ಸರಳವಾಗಿ ದಸರಾ ಆಚರಿಸಲಾಗಿತ್ತು. ಈ ಬಾರಿ ಹೆಚ್ಚಿನ ಜನ ಸೇರದಂತೆ ಎಲ್ಲಾ ಮುಂಜಾಗ್ರತಾ ಕ್ರಮದೊಂದಿಗೆ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
9 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಹಿಂದೆ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಈ ಬಾರಿ ಫ್ರೀಡಂ ಪಾರ್ಕ್ನಲ್ಲಿ ಮಾತ್ರ ಪ್ರತಿದಿನ ಸಾಂಸ್ಕೃತಿ ಕಾರ್ಯಕ್ರಮ ನಡೆಸಲಾಗುತ್ತದೆ.