ದುರಂತ ನಡೆದ ಸ್ಥಳದಲ್ಲಿ ಕಗ್ಗತ್ತಲೆ, ಕೆಟ್ಟ ವಾಸನೆ
ಶಿವಮೊಗ್ಗ, ಜನವರಿ 22: ಶಿವಮೊಗ್ಗ ಹೊರವಲಯದ ಅಬ್ಬಲಗೆರೆಯ ರೈಲ್ವೆ ಕ್ರಷರ್ನಲ್ಲಿ ಸಂಭವಿಸಿದ ಭಾರಿ ಸ್ಫೋಟದ ಅನಾಹುತದಲ್ಲಿ ಕನಿಷ್ಠ ಆರು ಮಂದಿ ಬಲಿಯಾದ ಶಂಕೆ ವ್ಯಕ್ತವಾಗಿದೆ. ದೊಡ್ಡ ಲಾರಿಯಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ಜಿಲೆಟಿನ್ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
'ನಮ್ಮ ಮನೆಯಲ್ಲಿಯೇ ಭಾರಿ ಸ್ಫೋಟ ಉಂಟಾದ ಅನುಭವ ಆಯಿತು. ಈ ಭಾಗದಲ್ಲಿ ತುಂಬಾ ಕೆಟ್ಟ ವಾಸನೆ ಆವರಿಸಿದೆ. ಗಣಿಗಾರಿಕೆಗೆ ಬಳಸುವ ವಸ್ತುಗಳು ಸ್ಫೋಟಗೊಂಡು ಈ ಘಟನೆ ಸಂಭವಿಸಿದೆ. ಅದರ ತೀವ್ರತೆ ಲಾರಿ ಛಿದ್ರವಾಗಿದೆ. ಆರು ಜನರು ಮೃತಪಟ್ಟಿರುವ ಸಾಧ್ಯತೆಯಿದೆ. ಬಹಳಷ್ಟು ಅನಾಹುತ ಸಂಭವಿಸಿದೆ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯಕ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: ಕನಿಷ್ಠ 7 ಕಾರ್ಮಿಕರ ಸಾವಿನ ಶಂಕೆ
ಘಟನೆಯ ಸ್ಥಳಕ್ಕೆ ತೆರಳುವುದಕ್ಕೂ ಆಗುತ್ತಿಲ್ಲ. ದಟ್ಟ ಹೊಗೆ ಆವರಿಸಿದ್ದು, ಅಲ್ಲಿಗೆ ತೆರಳಲು ಆಗುತ್ತಿಲ್ಲ. ಅಲ್ಲಿ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹತ್ತು ಸೆಕೆಂಡು ಅಂತರದಲ್ಲಿ ಎರಡು ಶಬ್ಧ ಕೇಳಿಬಂದಿತ್ತು. ಭೂಮಿ ನಡುಗಿಲ್ಲ. ಅನೇಕ ಕಡೆ ಗಾಜು ಒಡೆದಿವೆ. ಮನೆಗೋಡೆಗಳು ಬಿರುಕುಬಿಟ್ಟಿವೆ ಎಂದು ಅವರು ತಿಳಿಸಿದ್ದಾರೆ.
ಶಿವಮೊಗ್ಗದ ಅನೇಕ ಭಾಗಗಳಲ್ಲಿ ಸ್ಫೋಟದಿಂದ ಕಡು ವಾಸನೆ ಆವರಿಸಿದೆ. ಸ್ಥಳಕ್ಕೆ ಹತ್ತಾರು ಆಂಬುಲೆನ್ಸ್ಗಳು ಧಾವಿಸಿವೆ. ಕಾರ್ಮಿಕರ ದೇಹದ ಭಾಗಗಳು ಸುಮಾರು ಒಂದು ಕಿ ಮೀ ದೂರದವರೆಗೂ ಹಾರಿವೆ ಎಂದು ಹೇಳಲಾಗುತ್ತಿದೆ. ಲಾರಿಯಲ್ಲಿದ್ದ ಜಿಲೆಟಿನ್ ವಸ್ತುಗಳನ್ನು ಅನ್ಲೋಡ್ ಮಾಡುವಾಗ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಮೃತರ ದೇಹದ ಅಂಗಗಳು ಸುಮಾರು ಎರಡು ಕಿಮೀವರೆಗೂ ಹಾರಿ ಬಿದ್ದಿವೆ. ಅಲ್ಲಿ ಜೀವಂತ ಡೈನಾಮೈಟ್ಗಳಿರುವ ಭೀತಿ ಎದುರಾಗಿದೆ. ಆದರೆ ಅವುಗಳನ್ನು ಹುಡುಕುವುದು ಕತ್ತಲಿನಲ್ಲಿ ಸಾಧ್ಯವಾಗಿಲ್ಲ.
ದುರ್ಘಟನೆಯಲ್ಲಿ ಐದಾರು ಮಂದಿ ಮೃತಪಟ್ಟಿದ್ದಾರೆ. ಆದರೆ ಸಾವು ನೋವಿನ ನಿಖರ ಸಂಖ್ಯೆ ತಿಳಿದಿಲ್ಲ. ಎಲ್ಲ ಮಾಹಿತಿ ಬೆಳಿಗ್ಗೆಯೇ ಸ್ಪಷ್ಟವಾಗಲಿದೆ. ಲಾರಿಯೊಂದು ನಜ್ಜುಗುಜ್ಜಾಗಿದೆ. ಬೆಂಗಳೂರಿನಿಂದ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ವಿಪತ್ತು ನಿರ್ವಹಣಾ ತಂಡಗಳು ಬರಲಿವೆ ಎಂದು ಶಿವಮೊಗ್ಗ ಡಿಸಿ ಶಶಿಕುಮಾರ್ ತಿಳಿಸಿದ್ದಾರೆ.