ಶಿವಮೊಗ್ಗ: ಡಿಜಿಟಲ್ ಇಂಡಿಯಾ ಪ್ರದರ್ಶನ ವಾಹಿನಿಗೆ ಚಾಲನೆ
ಶಿವಮೊಗ್ಗ, ಜನವರಿ. 22 : ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಡಿಜಿಟಲ್ ಇಂಡಿಯಾ ಕುರಿತು ಗ್ರಾಮೀಣ ಪ್ರದೇಶದಲ್ಲಿ ಚಿತ್ರ ಪ್ರದರ್ಶನ ಮಾಡುವ ವಾಹಿನಿಗೆ ಶನಿವಾರ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಚಾಲನೆ ನೀಡಿದರು.
ಇತ್ತೀಚಿಗೆ ನಗದು ರಹಿತ ವ್ಯವಹಾರ ಸೇರಿದಂತೆ ವಿವಿಧ ಆನ್ಲೈನ್ ಸೇವೆಗಳಿಗೆ ಒತ್ತು ನೀಡಲಾಗುತ್ತಿದ್ದು, ಈ ಬಗ್ಗೆ ಗ್ರಾಮಾಂತರ ಭಾಗದಲ್ಲಿ ಮಾಹಿತಿಯ ಚಿತ್ರ ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು.[ಡಿಜಿಟಲ್ ಇಂಡಿಯಾ ಎಂದರೇನು? ಉದ್ದೇಶಗಳೇನು?]
ಶಿವಮೊಗ್ಗ ಜಿಲ್ಲೆಯ ಆಯ್ದ ತಾಲೂಕುಗಳ ಗ್ರಾಮ ಪಂಚಾಯ್ತಿಗಳಲ್ಲಿ ಈ ಪ್ರದರ್ಶನ ವಾಹನ ತೆರಳಿ ಕಾರ್ಯಕ್ರಮ ನೀಡಲಿದ್ದು ಆನ್ಲೈನ್ ವ್ಯವಹಾರ ಮತ್ತು ಡಿಜಿಟಲ್ ವಿಚಾರಗಳ ಕುರಿತು ಜಾಗೃತಿ ಮೂಡಲಾಗುವುದು ಎಂದರು.
ಡಿಜಿಟಲ್ ಇಂಡಿಯಾ ಮೂಲಕ ಸರ್ಕಾರಿ ಸೇವೆಗಳಾದ ಜನ್ಮ ದಿನಾಂಕ ನೋಂದಣಿ, ಪ್ಯಾನ್ ಕಾರ್ಡ್, ಭೂಮಿ ದಸ್ತಾವೇಜು, ಡ್ರೈವಿಂಗ್ ಲೈಸೆನ್ಸ್, ವೋಟರ್ಸ್ ಕಾರ್ಡ್, ಪಾಸ್ ಪೋರ್ಟ್, ಇತರೆ ಸೇವೆಗಳಾದ ನೀರು, ಕರೆಂಟ್, ದೂರವಾಣಿ ಬಿಲ್ ಪಾವತಿ.
ಆರ್ಥಿಕ ಸೇವೆಗಳಾದ ಜನಧನ್ ಯೋಜನೆ, ವಿಮೆ, ಬ್ಯಾಂಕ್ ಸೇವೆಗಳು ಹೀಗೆ ವಿವಿಧ ಸೇವೆಗಳನ್ನು ಮಾಡಲಾಗುತ್ತಿದ್ದು ಸಾರ್ವಜನಿಕರಿಗೆ ಆನ್ಲೈನ್ ವ್ಯವಹಾರಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ ಈ ಅಭಿಯಾನ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.