ಶಿವಮೊಗ್ಗ ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಯದಂತೆ ಹೈಕೋರ್ಟ್ ತಡೆ
ಶಿವಮೊಗ್ಗ, ಏಪ್ರಿಲ್ 25: ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜು ಅವರ ನಾಮಪತ್ರ ಅನೂರ್ಜಿತಗೊಂಡ ಬೆನ್ನಲ್ಲಿ ಈಗ ಶಿವಮೊಗ್ಗ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎಸ್.ಕೆ.ಶ್ರೀನಿವಾಸ್ ಸಹ ಚುನಾವಣೆಗೆ ಸ್ಪರ್ಧಿಸದಂತೆ ಹೈಕೋರ್ಟ್ ತಡೆ ನೀಡಿದೆ.
ಶಿವಮೊಗ್ಗ ರಾಜಕೀಯ : ಕಾಂಗ್ರೆಸ್ಗೆ ಬೇಳೂರು, ಬಿಜೆಪಿ ನಾಯಕರಿಗೆ ಚಿಂತೆ
ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿಯಲ್ಲಿ ನಿರತರಾಗಿದ್ದ ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ ಎಸ್.ಕೆ.ಶ್ರೀನಿವಾಸ್ ಅವರು ಉದ್ಯೋಗಕ್ಕೆ ರಾಜಿನಾಮೆ ಸಲ್ಲಿಸಿ ಚುನಾವಣೆಗೆ ಸ್ಪರ್ಧೆಗೆ ಮುಂದಾಗಿದ್ದರು ಆದರೆ ಈಗ ಅವರ ಚುನಾವಣೆಗೆ ಸ್ಪರ್ಧೆಗೆ ಹೈಕೋರ್ಟ್ ತಡೆ ನೀಡಿದೆ. ಶ್ರೀನಿವಾಸ್ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಸರ್ಕಾರಿ ಉದ್ಯೋಗಕ್ಕೆ ರಾಜಿನಾಮೆ ನೀಡಿದ್ದೇ ಅವರ ಉಮೇದುವಾರಿಕೆಗೆ ಮುಳುವಾಗಿದೆ.
ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಬಲರಾಮ್ ಅವರು ಶ್ರೀನಿವಾಸ್ ಅವರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಶ್ರೀನಿವಾಸ್ ಅವರು ರಾಜಿನಾಮೆ ಕೊಟ್ಟಿದ್ದಾರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಅವರ ರಾಜೀನಾಮೆ ಅಂಗೀಕೃತಗೊಂಡಿದೆ ಇದು ಕಾನೂನು ಸಮ್ಮತವಲ್ಲ ಎಂದು ಬಲರಾಮ್ ಹೈಕೋರ್ಟ್ನಲ್ಲಿ ವಾದಿಸಿದ್ದರು.
ಶಿವಮೊಗ್ಗ : ಬಿಜೆಪಿ, ಕಾಂಗ್ರೆಸ್ಗೆ ಬಂಡಾಯದ ಬಿಸಿ!
ವಾದ ವಿವಾದ ಆಲಿಸಿದ ನ್ಯಾಯಾಲಯವು ಶ್ರೀನಿವಾಸ್ ಅವರು ಚುನಾವಣೆಗೆ ಸ್ಪರ್ಧಿಸದಂತೆ ತಡೆ ನೀಡಿದೆ. ಮುಳಬಾಗಿಲಿನ ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜುನಾಥ ಅವರೂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಹೈಕೋರ್ಟ್ ತಡೆ ನೀಡಿದ್ದು, ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯುವಂತಾಗಿದೆ.
ಶ್ರೀನಿವಾಸ್ ಅವರು ಸ್ಪರ್ಧಿಸದಿದ್ದರೂ ಶಿವಮೊಗ್ಗ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿದ್ದಾರೆ. ಕೇಸು ದಾಖಲಾದ ಬೆನ್ನಲ್ಲೆ ಮುನ್ನೆಚ್ಚರಿಕೆಯಿಂದ ಕಾಂಗ್ರೆಸ್ ಪಕ್ಷವು ಇನ್ನೂ ಇಬ್ಬರು ಅಭ್ಯರ್ಥಿಗಳಿಗೆ ಪಕ್ಷದ ಬಿ-ಫಾರಂ ನೀಡಿ ನಾಮಪತ್ರ ಸಲ್ಲಿಸುವಂತೆ ತಿಳಿಸಿತ್ತು.
ಡಿಕೆಶಿ, ರಮೇಶ್ ಕುಮಾರ್, ಮಂಜು ಸೇರಿ ಹಲವು ಕಾಂಗ್ರೆಸ್ಸಿಗರ ನಾಮಪತ್ರ
ಒಟ್ಟಾರೆ ಶಿವಮೊಗ್ಗ ಗ್ರಾಮೀಣ ಕ್ಷೇತ್ರದಿಂದ ಶ್ರೀನಿವಾಸ್ ಸೇರಿದಂತೆ, ಆರ್.ರವಿಕುಮಾರ್ ಮತ್ತು ಆರ್.ಸಿ.ನಾಯಕ್ ಅವರುಗಳು ಕಾಂಗ್ರೆಸ್ ಪಕ್ಷದ ಬಿ-ಫಾರಂ ನಿಂದ ನಾಮಪತ್ರ ಸಲ್ಲಿಸಿದ್ದರು. ಇದೀಗ ಶ್ರೀನಿವಾಸ್ ಅವರ ಉಮೇದುವಾರಿಕೆಗೆ ತಡೆ ಬಿದ್ದಿದ್ದರಿಂದ ಆರ್.ರವಿಕುಮಾರ್ ಮತ್ತು ಆರ್.ಸಿ.ನಾಯಕ್ ಅವರುಗಳಲ್ಲಿ ಯಾರಾದರೂ ಒಬ್ಬರು ಅಧಿಕೃತ ಅಭ್ಯರ್ಥಿಗಳಾಗಲಿದ್ದಾರೆ.